ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಹೊಣೆಯಾದರೆ, ಕ್ಲೀನ್ ಚಿಟ್ ಹೇಗೆ ಬಂತು?
ಸರಕಾರವೇ ನೇಮಿಸಿರುವ ಜಿಲ್ಲಾಧಿಕಾರಿಯೊಬ್ಬರನ್ನು ಸ್ವಪಕ್ಷೀಯರೇ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಉದಾಹರಣೆಗಳು ಕಮ್ಮಿ. ಅದೂ, ಕೋವಿಡ್ ನಂತಹ ಆರೋಗ್ಯ ಎಮರ್ಜೆನ್ಸಿಯ ಸಮಯದಲ್ಲಿ.
ಹೌದು, ಮೈಸೂರಿನ ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯವರನ್ನು ಯಾರಿಗೂ ಬೇಡವಾದ ಮುಜರಾಯಿ ಇಲಾಖೆಗೆ ವರ್ಗಾಯಿಸಲಾಗಿದೆ. ಮೈಸೂರು ರಾಜಕೀಯದಲ್ಲಿ ಮೂರು ಪಕ್ಷಗಳು ಒಗ್ಗಟ್ಟಾಗಿ ತಿರುಗಿಬಿದ್ದಿದ್ದು ಎಂದರೆ ಅದು ರೋಹಿಣಿ ಸಿಂಧೂರಿಯ ವಿರುದ್ದ.
ಎಲ್ಲಾ ಆದ ಮೇಲೆ ನಂದೂ ಒಂದು ಇರಲಿ ಎನ್ನುವಂತೆ, ಬಿಜೆಪಿ ಮುಖಂಡರೊಬ್ಬರು ರೋಹಿಣಿ ವಿರುದ್ದ ಭಾರೀ ವಾಗ್ದಾಳಿಯನ್ನು ಮಾಡಿದ್ದಾರೆ. ಇವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿಯೇ ಕಾರಣ ಎನ್ನುವ ಗುರುತರ ಆರೋಪವನ್ನು ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಕೂಡಾ ಪ್ರಸ್ತಾವಿಸಿದ್ದರು. ಈಗ, ರೋಹಿಣಿ ಸಿಂಧೂರಿ ಮೈಸೂರಿನಿಂದ ಎತ್ತಂಗಡಿಯಾದ ನಂತರ, ಆಕ್ಸಿಜನ್ ದುರಂತದ ವಿಚಾರ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಯಿದೆ. ಒಂದು ವೇಳೆ, ಹಾಗಾದರೆ ಅದು ಬಿಜೆಪಿ ಬುಡಕ್ಕೇ ಬರುವುದಂತೂ ಹೌದು...

ಚಾಮರಾಜನಗರದಲ್ಲಿ ದುರಂತಕ್ಕೆ ರೋಹಿಣಿ ಸಿಂಧೂರಿಯವರೇ ನೇರ ಹೊಣೆ
"ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರೇ ನೇರ ಹೊಣೆ. ಆಮ್ಲಜನಕ ಪೂರೈಕೆ ಮಾಡದ ರೀತಿಯಲ್ಲಿ ನೀಡಿರುವ ಆದೇಶಗಳ ಸಾಕ್ಷ್ಯ ನನ್ನ ಬಳಿಯಿದೆ" ಎಂದು ಬಿಜೆಪಿ ನಾಯಕ ಅಮ್ಮನಪುರ ಮಲ್ಲೇಶ್ ನೀಡಿರುವ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.

ಚಾಮರಾಜನಗರ, ಮೈಸೂರು ಡಿಸಿಗಳ ಆರೋಪ, ಪ್ರತ್ಯಾರೋಪ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಕರಣಕ್ಕೆ ಮೈಸೂರು ಜಿಲ್ಲಾಧಿಕಾರಿ ಅವರೇ ನೇರ ಕಾರಣ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆರೋಪಿಸಿದ್ದರು. ಆಕ್ಸಿಜನ್ ಸಪ್ಲೈ ವಿಚಾರದಲ್ಲಿ ಚಾಮರಾಜನಗರ ಡಿಸಿ ಎಂ.ಆರ್ ರವಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದರು. "ಎಲ್ಲಿಯೇ ಸಾವಾದರೂ ಅದು ಸಾವೇ. ಆಮ್ಲಜನಕ ಕೊರತೆಯಿಂದ ರೋಗಿಗಳು ಮೃತಪಟ್ಟಿರುವುದು ನೋವುಂಟು ಮಾಡಿದೆ. ಆದರೆ ಅಲ್ಲಿನ ಜಿಲ್ಲಾಧಿಕಾರಿ ಮಾಡಿರುವ ಆರೋಪಗಳು ಸತ್ಯವಲ್ಲ"ಎಂದು ರೋಹಿಣಿ ಸಿಂಧೂರಿ ಹೇಳಿದ್ದರು.

ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್, ಚಾಮರಾಜನಗರ ಡಿಸಿ ಎತ್ತಂಗಡಿ
ಚಾಮರಾಜನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯಾಗಿ ಶಿವಯೋಗಿ ಕಳಸದ್ ಅವರನ್ನು ನೇಮಿಸಲಾಗಿತ್ತು. ಜೊತೆಗೆ, ಹೈಕೋರ್ಟ್ ನೇಮಿಸಿದ್ದ ಕಾನೂನು ಸೇವೆಗಳ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಪ್ರಾಥಮಿಕ ತನಿಖೆ ನಡೆಸಿ ಮದ್ಯಂತರ ವರದಿ ಸಲ್ಲಿಸಿತ್ತು. ದುರಂತಕ್ಕೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ನೇಮಿಸಿದ್ದ ಮೂವರು ಸದಸ್ಯರ ಸಮಿತಿ ಧೃಢಪಡಿಸಿತ್ತು. ಆ ಮೂಲಕ, ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಇದನ್ನು ಆಧರಿಸಿ ಚಾಮರಾಜನಗರ ಡಿಸಿಯನ್ನು ಯಾವುದೇ ಪೋಸ್ಟಿಂಗ್ ನೀಡದೇ ಎತ್ತಂಗಡಿ ಮಾಡಲಾಗಿತ್ತು.
Recommended Video

ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಹೊಣೆಯಾದರೆ, ಕ್ಲೀನ್ ಚಿಟ್ ಹೇಗೆ?
ಚಾಮರಾಜನಗರ ದುರಂತಕ್ಕೆ ಅಲ್ಲಿನ ಡಿಸಿಯನ್ನು ಹೊಣೆಯನ್ನಾಗಿ ಮಾಡಿದ್ದರೂ, ಬಿಜೆಪಿ ಮುಖಂಡರೇ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈಗ, ರೋಹಿಣಿ ಸಿಂಧೂರಿಯವರ ವಿರುದ್ದ ಮತ್ತೆ ಆರೋಪ ಕೇಳಿ ಬರುತ್ತಲೇ ಇದೆ. ಅನಾವಶ್ಯಕವಾಗಿ, ಡಿಸಿ ಡಾ.ಎಂ.ಆರ್.ರವಿಯವರನ್ನು ಬಲಿಪಶು ಮಾಡಲಾಯಿತು ಎನ್ನುವ ಮಾತು ಕೇಳಿ ಬರುತ್ತಲೇ ಇದೆ. ಹಾಗಾದರೆ, ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ಕೊಡಿಸಿದ್ದು ಯಾರು? ಸ್ವಪಕ್ಷೀಯರ ಆರೋಪವನ್ನೇ ಮಾಡುತ್ತಿದ್ದಾರೆಂದರೆ, ಆಡಳಿತ ಪಕ್ಷದ ಹಸ್ತಕ್ಷೇಪ/ಪ್ರಭಾವ ಇಲ್ಲದಿದ್ದರೆ ಇದೆಲ್ಲಾ ಸಾಧ್ಯವೇ?












Click it and Unblock the Notifications