ಚಾಮರಾಜನಗರ:ಸಮಸ್ಯೆಗಳ ಆಗರವಾದ ಭೀಮನಬೀಡು ಸರ್ಕಾರಿ ಶಾಲೆ
ಚಾಮರಾಜನಗರ, ಸೆಪ್ಟೆಂಬರ್ 22 : ಶೌಚಾಲಯವಿದ್ದರೂ ನೀರಿಲ್ಲ.. ತ್ಯಾಜ್ಯ ನಿಂತು ದುರ್ವಾಸನೆ ಬೀರುತ್ತಿರುವ ಚರಂಡಿ.. ಮೂಲ ಸೌಲಭ್ಯವಿಲ್ಲದೆ ನೆಲದಲ್ಲೇ ಕುಳಿತು ಕಲಿಯುವ ಮಕ್ಕಳು.. ಇದೆಲ್ಲವೂ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಂಡು ಬರುತ್ತಿರುವ ದೃಶ್ಯಗಳು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಎಂದು ಭಾಷಣ ಮಾಡುವ ನಾಯಕರು, ಸರ್ಕಾರಿ ಶಾಲೆಗಳ ಅಭಿವೃದ್ಧಿಯತ್ತ ಗಮನಹರಿಸದ ಕಾರಣದಿಂದಾಗಿ ಇಂದು ಶಾಲೆಗಳು ಸಮಸ್ಯೆಗಳ ಆಗರವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ.

ಭೀಮನಬೀಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಶಾಲೆಯಲ್ಲಿ 192 ವಿದ್ಯಾರ್ಥಿಗಳು ದಾಖಲಾಗಿದ್ದು ಅದರಲ್ಲಿ 102 ಬಾಲಕರು ಹಾಗೂ 90 ಬಾಲಕಿಯರಿದ್ದಾರೆ.
ಈ ಶಾಲೆಯಲ್ಲಿ ಶೌಚಾಲಯ ಇದೆಯಾದರೂ ಸಮರ್ಪಕ ನೀರು ಸರಬರಾಜಿಲ್ಲದೆ ಗಬ್ಬುನಾರುತ್ತಿದ್ದು ಬಳಕೆಗೆ ಯೋಗ್ಯವಿಲ್ಲದ ಪರಿಣಾಮವಾಗಿ ವಿದ್ಯಾರ್ಥಿಗಳು ಬಯಲಿಗೆ ತೆರಳುವಂತಾಗಿದೆ.
ಶಾಲೆಯ ಕಾಂಪೌಂಡ್ ಬಳಿಯೇ ನೀರಿನ ತೊಟ್ಟಿ ಇದೆಯಾದರೂ ಇದಕ್ಕೆ ಮುಚ್ಚಳವಿಲ್ಲದೆ ಬಾಯಿತೆರೆದು ನಿಂತಿದ್ದು, ಕಸಕಡ್ಡಿ ಸೇರಿದಂತೆ ಕ್ರಿಮಿಕೀಟ ಪ್ರಾಣಿಪಕ್ಷಿಗಳು ಸತ್ತು ಬಿದ್ದರೂ ಗೊತ್ತಾಗದಂತಾಗಿದೆ.

ಶಾಲೆಯ ಪಕ್ಕದಲ್ಲಿ ಹಾದು ಹೋಗಿರುವ ಚರಂಡಿಗಳಲ್ಲಿ ಮಳೆಯ ನೀರು ಹರಿದು ಹೋಗದೆ ತ್ಯಾಜ್ಯಗಳೆಲ್ಲವೂ ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು ರೋಗಗಳ ಭಯವೂ ಕಾಡುತ್ತಿದೆ.
ಈ ಕುರಿತಂತೆ ಮಾಹಿತಿ ನೀಡಿದ ಬಿಇಓ ಹಾಲತಿ ಸೋಮಶೇಖರ್ ಅವರು, ಹಳೆಯ ಶೌಚಾಲಯ ಕೆಡವಿ ಹೊಸದಾಗಿ ಕಟ್ಟಿಸಿಕೊಡುವಂತೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಮನವಿ ಮಾಡಲಾಗಿದೆ.
ಇನ್ನು ಹೊಸದಾಗಿ ಪೀಠೋಪಕರಣಗಳನ್ನು ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ಹೆಚ್ಚುವರಿ ಬೆಂಚುಗಳಿರುವ ಶಾಲೆಗಳಿಂದ ಪಡೆದು ಇಲ್ಲಿಗೆ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುವುದಾಗಿ ಹೇಳಿದ್ದಾರೆ.

ಇನ್ನು ತಾಪಂ ಅಧ್ಯಕ್ಷ ಎಚ್.ಎನ್.ನಟೇಶ್ ಅವರು ಶಾಲೆಯ ಸುತ್ತಲೂ ಶುಚಿತ್ವ ಕಾಮಗಾರಿ ಕೈಗೊಳ್ಳಲು ಹಾಗೂ ಶೌಚಾಲಯ ನಿರ್ಮಿಸಲು ಭೀಮನಬೀಡು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಯಾರಿಗೂ ಬೇಡವಾದಂತಿರುವ ಶಾಲೆಯತ್ತ ಇನ್ನಾದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications