ಬಂಡೀಪುರ: ಪ್ರಧಾನಿ ಮೋದಿಗಾಗಿ ನಿರ್ಮಾಣವಾಗಿದ್ದ ಹೆಲಿಪ್ಯಾಡ್ ದುರಸ್ತಿ ಮಾಡದ ಚಾಮರಾಜನಗರ ಜಿಲ್ಲಾಡಳಿತ: ಜಮೀನು ಮಾಲೀಕ ಆಕ್ರೋಶ
ಚಾಮರಾಜನಗರ, ಸೆಪ್ಟೆಂಬರ್, 08: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನಕ್ಕೆ ಬಂಡೀಪುರದ ಮೇಲುಕಾಮನಹಳ್ಳಿ ಬಳಿಯ ಜಮೀನೊಂದರಲ್ಲಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್ ಸ್ಥಳವನ್ನು 5 ತಿಂಗಳು ಕಳೆದರೂ ಸರಿಪಡಿಸಿಕೊಡದ ಹಿನ್ನೆಲೆ ಜಿಲ್ಲಾಡಳಿತದ ವಿರುದ್ಧ ಜಮೀನು ಮಾಲೀಕ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಬಂಡಿಪುರ ಭೇಟಿ ಹಿನ್ನೆಲೆ ಚಾಪರ್ ಲ್ಯಾಂಡಿಂಗ್ ಹಾಗೂ ಎಸ್.ಪಿ.ಜಿ ಭದ್ರತಾ ಪಡೆಗೆ ಎರಡು ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣಕ್ಕೆ ಕೆಬ್ಬೇಪುರ ಗ್ರಾಮದ ಕೆ.ಎನ್.ಶಿವಣ್ಣ ಎಂಬುವವರು ತಮ್ಮ ಜಮೀನಿನಲ್ಲಿ ಸ್ಥಳ ನೀಡಿದ್ದರು. ನಂತರ ಕಾಂಕ್ರೀಟ್ ಬಳಸಿ ಎರಡು ಹೆಲಿಪ್ಯಾಡ್ ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ ಇಲ್ಲಿವರೆಗೂ ಹೆಲಿಪ್ಯಾಡ್ ನಿರ್ಮಾಣ ಸ್ಥಳವನ್ನು ಸರಿಪಡಿದ ಹಿನ್ನೆಲೆ ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಮಾಲೀಕ ಕೆ.ಎನ್.ಶಿವಣ್ಣ ಅಸಮಾಧಾನ ಹೊರ ಹಾಕಿದ್ದಾರೆ.

ಬಂಡೀಪುರ ಸಫಾರಿ ಕೇಂದ್ರಕ್ಕೆ ಹೊಂದಿಕೊಂಡಂತ್ತಿರುವ ಹೆಲಿಪ್ಯಾಡ್ ನಿರ್ಮಾಣ ಸ್ಥಳವು ಕುಡುಕರ ಅಡ್ಡೆಯಾಗಿ ಮಾರ್ಪಾಡಾಗಿದ್ದು, ಹೆಲಿಪ್ಯಾಡ್ ಸುತ್ತಲೂ ಹತ್ತಾರು ಬೀಯರ್ ಬಾಟಲಿ ಮತ್ತು ಮದ್ಯದ ಪೌಚ್ಗಳು ಬಿದ್ದಿವೆ. ಕೆಲವರು ಪಾನಮತ್ತರಾದ ನಂತರ ಒಡೆದ ಬಾಟಲಿ ಚೂರುಗಳು ಜಮೀನಿನಲ್ಲಿ ಹರಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಹೆಲಿಪ್ಯಾಡ್ ನಿರ್ಮಾಣಕ್ಕೆ ಮಾಲೀಕರಿಂದ ಜಮೀನು ಪಡೆದಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮೋದಿ ಭೇಟಿ ನಂತರ 10ರಿಂದ 15 ದಿನಗಳ ಒಳಗೆ ಜಮೀನನ್ನು ಹಿಂದೆ ಇದ್ದ ಮಾದರಿಯಲ್ಲಿ ಸರಿಪಡಿಸಿ ವಾಪಸ್ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ 5 ತಿಂಗಳು ಕಳೆದರೂ ಇಂದು-ನಾಳೆ ಎಂದು ಸಬೂಬು ಹೇಳುವ ಮೂಲಕ ಕಾಲಾಹರಣ ಮಾಡುತ್ತಿದ್ದಾರೆ ಎಂದು ಮಾಲೀಕ ಕೆ.ಎನ್.ಶಿವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಹೆಲಿಪ್ಯಾಡ್ ನಿರ್ಮಾಣಕ್ಕೆ ಜಮೀನು ಪಡೆದುಕೊಂಡ ಜಿಲ್ಲಾಡಳಿತ ನಮಗೆ ಹಣ ನೀಡುವುದು ಬೇಡ. ಹಿಂದೆ ಇದ್ದ ರೀತಿಯಲ್ಲಿ ಜಮೀನನ್ನು ದುರಸ್ತಿ ಪಡಿಸಿಕೊಟ್ಟರೆ ಸಾಕು. ಇದರಿಂದ ಮುಂದಿನ ದಿನಗಳಲ್ಲಿ ಫಸಲು ಬೆಳೆಯಲು ಸಹಕಾರಿವಾಗುತ್ತದೆ. ಜಮೀನು ಸರಿಪಡಿಸಲು ಕಾಲಹರಣ ಮಾಡದೆ ಶೀಘ್ರವಾಗಿ ಕ್ರಮ ವಹಿಸಬೇಕೆಂದು ಕೆ.ಎನ್.ಶಿವಣ್ಣ ಆಗ್ರಹಿಸಿದ್ದಾರೆ.












Click it and Unblock the Notifications