ಬಂಡೀಪುರ ಸಫಾರಿ ಇನ್ಮುಂದೆ ದುಬಾರಿ
Recommended Video
ಚಾಮರಾಜನಗರ, ಅಕ್ಟೋಬರ್ 14 : ಇಲ್ಲಿನ ಬಂಡೀಪುರ ಉದ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರ ಪ್ರವೇಶ ಶುಲ್ಕ, ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಅರಣ್ಯ ಇಲಾಖೆ ಹೆಚ್ಚಿಸಿದೆ.
ರಾಜ್ಯದ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳ ಪ್ರವೇಶ ಶುಲ್ಕ ಏರಿಕೆ
ಕೇವಲ ಬಂಡೀಪುರ ಮಾತ್ರವಲ್ಲದೇ ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನಗಳು, ಹುಲಿಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳ ಪ್ರವೇಶ ಶುಲ್ಕ ಹೆಚ್ಚಿಸಲಾಗಿದ್ದು, ಇದೇ ನವೆಂಬರ್ 1ರಿಂದ ಪರಿಷ್ಕೃತ ಜಾರಿಗೆ ಬರಲಿದೆ.
ಈ ಬಗ್ಗೆ ಬಂಡೀಪುರ ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನ್ಯತಿ ಶ್ರೀನಾಥ್ ಸುತ್ತೋಲೆ ಹೊರಡಿಸಿದ್ದಾರೆ. ನೂತನ ಆದೇಶದಂತೆ ಹಿಂದೆ 200 ರು. ಇದ್ದ ಪ್ರವೇಶ ಶುಲ್ಕ 250 ರು.ಗೆ ಏರಿಕೆ ಮಾಡಲಾಗಿದೆ. ಇನ್ನು ಸಫಾರಿ ಶುಲ್ಕವನ್ನು 100 ರಿಂದ 300 ರು,ಗೆ ಹೆಚ್ಚಿಸಲಾಗಿದೆ. ಮಕ್ಕಳಿಗೆ 150, ವಿದೇಶೀಯರಿಗೆ ಇದ್ದ 1000 ರು. ಇದೀಗ 1500 ಆಗಿದೆ.
ದಿನವೊಂದಕ್ಕೆ ಭಾರತೀಯರಿಗೆ 1000 ಇದ್ದ ಅತಿಥಿಗೃಹದ ಬಾಡಿಗೆ 2500, ವಿದೇಶಿಗರಿಗೆ 2000ದಿಂದ 5000 ಸಾವಿರ ರೂಪಾಯಿ ನಿಗದಿಗೊಳಿಸಲಾಗಿದೆ. ಹಿಂದೆ ಒಂದು ಗಂಟೆಯಿದ್ದ ಸಫಾರಿ ಸಮಯವನ್ನು ಒಂದೂವರೆ ಗಂಟೆಗೆ ವಿಸ್ತರಿಸಲಾಗಿದೆ.
ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಕಳೆದ ಕೆಲವು ವರ್ಷಗಳಿಂದ ಅಭಯಾರಣ್ಯಗಳು ದರ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದರೂ ಹೆಚ್ಚಳವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದರ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.