ಚಾಮರಾಜನಗರ: ಟೊಮ್ಯಾಟೊ ಬೆಳೆದು ಕುಬೇರರಾದ ಸಹೋದರರು, ಇವರ ಆದಾಯ, ಹಿನ್ನೆಲೆ ತಿಳಿಯಿರಿ
ಚಾಮರಾಜನಗರ, ಆಗಸ್ಟ್, 06: ಇದೀಗ ಟೊಮೆಟೊ ಶತಕ ದಾಟಿದ್ದು, ಈ ಬೆಳೆ ಬೆಳೆದ ಅದೆಷ್ಟೋ ಮಂದಿ ಕುಬೇರರಾಗಿರುವ ಉದಾಹರಣೆಗಳಿವೆ. ಹಾಗೆಯೇ ಚಾಮರಾಜನಗರ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಸಹೋದರರಿಬ್ಬರು 12 ಹೆಕ್ಟೇರ್ನಲ್ಲಿ ಟೊಮೆಟೋ ಬೆಳೆದು 40 ಲಕ್ಷಕ್ಕೂ ಹೆಚ್ಚು ಆದಾಯಗಳಿಸುತ್ತಿದ್ದು, ಈಗ 1 ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಹಾಗಾದರೆ ಈ ರೈತ ಸಹೋದರರ ಹಿನ್ನೆಲೆ, ಇವರು ಎಷ್ಟು ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದಾರೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಲಕ್ಷ್ಮಿಪುರ ಗ್ರಾಮದ ರಾಜೇಶ್ ಮತ್ತು ನಾಗೇಶ್ ಎಂಬ ಸಹೋದರರಿಬ್ಬರು ಎಸ್ಎಸ್ಎಲ್ಸಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಸತತವಾಗಿ 4 ವರ್ಷಗಳಿಂದ ಟೊಮ್ಯಾಟೊ ಕೃಷಿಯನ್ನೇ ಮಾಡಿಕೊಂಡು ಬಂದಿದ್ದಾರೆ. ಇದರಲ್ಲಿ ಮೊದಲೆಲ್ಲ ಆದಾಯ ಕಡಿಮೆಯಿತ್ತು. ಆದರೂ ಕಂಗೆಡದೇ ಸಹೋದರರು ಟೊಮೆಟೊ ಕೃಷಿಯನ್ನೇ ಮುಂದುವರೆಸಿಕೊಂಡು ಬಂದಿದ್ದು, ಇದರ ಪ್ರತಿಫಲವೇ ಇದೀಗ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ.
2 ಹೆಕ್ಟೇರ್ ಸ್ವಂತ ಹಾಗೂ 10 ಹೆಕ್ಟೇರ್ ಗುತ್ತಿಗೆ ಸೇರಿ ಒಟ್ಟು 12 ಹೆಕ್ಟೇರ್ನಲ್ಲಿ ಟೊಮ್ಯಾಟೊ ಬೆಳೆಯುವ ಸಹೋದರರು 40 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಟೊಮೆಟೋ ದರ ಇದೇ ರೀತಿ ಇದ್ದರೆ ಇವರು ಒಂದು ಕೋಟಿ ರೂಪಾಯಿ ಆದಾಯ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೃಷಿಯೆಂದರೆ ಸಾಕು ಹಲವರು ಅಸೂಯೆಪಡುವವರಿದ್ದು, ಈ ಕಾಲದಲ್ಲಿ ಸಹೋದರರಿಬ್ಬರು ವಿದ್ಯಾಭ್ಯಾಸವನ್ನೇ ನಿಲ್ಲಸಿ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. 50ಕ್ಕೂ ಹೆಚ್ಚು ಟನ್ ಟೊಮೆಟೊ ಮಾರಾಟ ಮಾಡುತ್ತಿರುವ ಇವರು ಈಗ 200 ಟನ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪ್ರತಿನಿತ್ಯವೂ ಜಮೀನಿನಲ್ಲೇ ವಾಸ್ತವ್ಯ ಹೂಡಿ ಟೊಮ್ಯಾಟೊ ಕಾಯುವುದು ನಮ್ಮ ಪ್ರಮುಖ ಕಾಯಕ ಆಗಿದೆ. ಅಲ್ಲದೆ ಬಂದ ಆದಾಯದಿಂದ ಕಾರು ಖರೀದಿಸಿಯೇ ಮದುವೆ ಆಗಬೇಕೆಂದುಕೊಂಡಿದ್ದೇನೆ ಎಂದು ಯುವ ರೈತ ರಾಜೇಶ್ ಸಂತೋಷವನ್ನು ಹಂಚಿಕೊಂಡಿದ್ದಾನೆ.
ಒಟ್ಟಿನಲ್ಲಿ ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡಿರುವ ಹಲವರು ಕೃಷಿ ಎಂದರೆ ಸಾಕು ಮೂಗು ಮುರಿಯುತ್ತಾರೆ. ಆದರೆ ಈ ಇಬ್ಬರು ಸಹೋದರರು ಮಾತ್ರ ವಿದ್ಯಾಭ್ಯಾಸವನ್ನೇ ಬಿಟ್ಟು ಟೊಮೆಟೋ ಬೆಳೆದು ಕುಬೆರರಾಗುವ ಮೂಲಕ ಕೃಷಿಯ ಮಹತ್ವ ಏನೆಂದು ತೋರಿಸಿಕೊಟ್ಟಿದ್ದಾರೆ.
ಟೊಮ್ಯಾಟೊ ಬೆಳೆ ನಾಶ
ಇತ್ತೀಚೆಗಷ್ಟೇ ಹಳೆ ವೈಶಮ್ಯ ಹಿನ್ನೆಲೆ ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಎರಡು ಹೆಕ್ಟೇರ್ ಟೊಮ್ಯಾಟೊ ಬೆಳೆಯನ್ನು ನಾಶ ಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಕೆಬ್ಬೇಪುರ ಗ್ರಾಮದಲ್ಲಿ ಮಂಜು ಎಂಬುವವರು ಎರಡು ಹೆಕ್ಟೇರ್ನಲ್ಲಿ ಬೆಳೆದಿದ್ದ ಟೊಮ್ಯಾಟೊ ಗಿಡಗಳನ್ನು ಕಿಡಿಗೇಡಿಗಳು ಬುಡ ಸಮೇತ ಕಿತ್ತು ನಾಶ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೋ ಬೆಳೆ ಕಳೆದುಕೊಂಡ ರೈತ ಮಂಜು ತನ್ನ ಜಮೀನಿನಲ್ಲಿ ಮಲಗಿ ಕಣ್ಣೀರು ಹಾಕಿ ಗೋಳಾಡಿದ್ದಾನೆ. ಅಲ್ಲದೆ ಕಣ್ಣೀಡಿರುತ್ತಲೇ ಹೋಗಿ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮೊದಲೇ ಕೆ.ಜಿ. ಟೊಮೆಟೋ ಬೆಲೆ ಶತಕ ದಾಟಿದ್ದು, ಇದು ರೈತರಿಗೆ ಹಣ ಮಾಡಿಕೊಳ್ಳಲು ಉತ್ತಮವಾದ ಸಮಯವಾಗಿದೆ. ಅದರಲ್ಲೂ ಟೊಮೆಟೋ ಬೆಲೆ ಗಗನಕ್ಕೇರಿದ್ದೇ ತಕ್ಷಣ ರೈತರು ತಮ್ಮ ತಮ್ಮ ಜಮೀನುಗಳ ಬಳಿ ದಿನದ 24 ಗಂಟೆಯೂ ಕಾವಲು ಕಾಯಲು ಶರು ಮಾಡಿದ್ದಾರೆ. ಇಲ್ಲದಿದ್ದರೆ ರಾತ್ರೋರಾತ್ರಿಯೇ ಗಿಡಗಳ ಸಮೇತ ಟೊಮೆಟೋ ಬೆಳೆಯೇ ನಾಶವಾಗುವ ಸಾಧ್ಯತೆಯಿದೆ. ಅಲ್ಲದೆ ಕಾವಲು ಇದ್ದರೂ ಕೂಡ ಟೊಮೆಟೋ ಕದ್ದಿಯುತ್ತಿರುವ ಪ್ರಕರಣಗಳು ಪ್ರತಿನಿತ್ಯ ವರದಿ ಆಗುತ್ತಲೇ ಇವೆ.
ಟೋಮೆಟೋ ದರ ಏರಿಕೆಯಾಗಿದ್ದು ರೈತರಿಗೆ ಒಂದು ಕಡೆ ಸಂತೋಷವಾದರೆ, ಮತ್ತೊಂದೆಡೆ ಕಾವಲು ಕಾಯುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.












Click it and Unblock the Notifications