ಮಾ.1ರಿಂದ ಬಿಜೆಪಿ ಸಂಕಲ್ಪ ಯಾತ್ರೆ ಆರಂಭ: ರಾಜ್ಯದತ್ತ ಬಿಜೆಪಿ ಹೈಕಮಾಂಡ್ ನಾಯಕರ ದಂಡು
ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ ಬೆನ್ನಲ್ಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸಲಿದ್ದು, ರಾಜ್ಯದ ದಕ್ಷಿಣದ ತುಟ್ಟ ತುದಿ ಮಲೆಮಹದೇಶ್ವರ ಬೆಟ್ಟದಿಂದ ಯಾತ್ರೆ ಆರಂಭವಾಗಲಿದೆ.
ಚಾಮರಾಜನಗರ, ಫೆಬ್ರವರಿ 28: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ರಾಷ್ಟ್ರೀಯ ಪಕ್ಷಗಳು ಒಂದರ ಮೇಲೊಂದು ಸಮಾವೇಶ ನಡೆಸುತ್ತಿದ್ದು, ಬಿಜೆಪಿ ಕೇಂದ್ರದ ನಾಯಕರನ್ನು ರಾಜ್ಯಕ್ಕೆ ಕರೆತಂದು ಮತಬೇಟೆ ಮಾಡುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ ಬೆನ್ನಲ್ಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸಲಿದ್ದು, ರಾಜ್ಯದ ದಕ್ಷಿಣದ ತುಟ್ಟ ತುದಿ ಮಲೆಮಹದೇಶ್ವರ ಬೆಟ್ಟದಿಂದ ಯಾತ್ರೆ ಆರಂಭವಾಗಲಿದೆ.

ಮಾರ್ಚ್ 1ರಂದು ರಾಜ್ಯದ ಐತಿಹಾಸಿಕ ಪ್ರಮುಖ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಚಾಲನೆ ನೀಡಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸ್ಥಳೀಯ ಸಚಿವರುಗಳು ಹಾಗೂ ಸಂಸದರು ಭಾಗಿಯಾಗಲಿದ್ದಾರೆ.
ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಿದ ಬಳಿಕ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಜೆ.ಪಿ ನಡ್ಡಾ ಚಾಲನೆ ಕೊಡಲಿದ್ದಾರೆ. ಬಳಿಕ, ಸೋಲಿಗರು ಹಾಗೂ ಬೇಡಗಂಪಣ ಸಮುದಾಯದೊಂದಿಗೆ ಸಂವಾದ ನಡೆಸಲಿರುವ ಬಿಜೆಪಿ ನಾಯಕರು ಅವರ ಕಷ್ಟ ಹಾಗೂ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬಳಿಕ ಐತಿಹಾಸಿಕ ಸಾಲೂರು ಮಠಕ್ಕೆ ಭೇಟಿ ನೀಡಲಿದ್ದಾರೆ.

ಮಾರ್ಚ್ 1ರ ಮಧ್ಯಾಹ್ನ 2 ಗಂಟೆ ವೇಳೆಗೆ ರಾಜ್ಯ ನಾಯಕರು ಹನೂರಿನಲ್ಲಿ ಬಹಿರಂಗ ಸಮಾವೇಶ ನಡೆಸಿ ಬಳಿಕ ಕೊಳ್ಳೇಗಾಲದಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಮಾರ್ಚ್ 2ರಂದು ಚಾಮರಾಜನಗರದಲ್ಲಿ ಆದಿಶಕ್ತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ನಾಯಕರು ರೋಡ್ ಶೋ ನಡೆಸಲಿದ್ದು, ಗುಂಡ್ಲುಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈಗಾಗಲೇ ಕಾರ್ಯಕ್ರಮದ ಪೂರ್ವ ತಯಾರಿ ಆರಂಭಗೊಂಡಿದ್ದು, ಕಾರ್ಯಕ್ರಮದಲ್ಲಿ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ.












Click it and Unblock the Notifications