ದಸರಾ: ಸರ್ಕಾರದ ನಿರ್ಣಯಕ್ಕೆ ಸಂಸದ ಶ್ರೀನಿವಾಸ್ಪ್ರಸಾದ್ ಅಸಮಾಧಾನ
ಮೈಸೂರು, ಸೆಪ್ಟೆಂಬರ್ 29: ಇಂದು ಆರಂಭವಾದ ದಸರಾ ಉತ್ಸವಕ್ಕೆ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ಪ್ರಸಾದ್ ಪ್ರತಿಭಟನಾರ್ಥಕವಾಗಿ ಗೈರಾಗಿದ್ದಾರೆ.
ರಾಜ್ಯದಲ್ಲಿ ಬರ-ನೆರೆ ಒಟ್ಟೊಟ್ಟಿಗೆ ಆಗಿವೆ ಇಂಥಹಾ ಪರಿಸ್ಥಿತಿಯಲ್ಲಿ ಅದ್ಧೂರಿ ದಸರಾ ಮಾಡುತ್ತಿರುವುದು ಸರಿಯಲ್ಲ ಎಂಬ ನಿಲವು ತಳೆದಿರುವ ಸಂಸದ ಶ್ರೀನಿವಾಸ್ ಪ್ರಸಾದ್ ದಸರಾ ಕಾರ್ಯಕ್ರಮಕ್ಕೆ ಗೈರಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ವೈಭವೋಪೇತ ದಸರಾ ಬದಲಾಗಿ ಸಾಂಪ್ರದಾಯಿಕವಾಗಿ ಸರಳ ದಸರಾ ಆಚರಣೆ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ರಾಜ್ಯಸರ್ಕಾರ ಅದನ್ನು ತಿರಸ್ಕರಿಸಿ ಅದ್ಧೂರಿ ಖರ್ಚು ಮಾಡುತ್ತಿದೆ' ಎಂದು ಹೇಳಿದ್ದಾರೆ.

'ಮಾನವೀಯ ದೃಷ್ಟಿಯಿಂದ ನಾನು ದಸರಾನಲ್ಲಿ ಪಾಲ್ಗೊಳ್ಳುತ್ತಿಲ್ಲ, ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಕಷ್ಟಗಳಿಗೆ ನಾವು ಸ್ಪಂದಿಸಬೇಕಿದೆ ಎಂದು ಶ್ರೀನಿವಾಸ್ಪ್ರಸಾದ್ ಹೇಳಿದರು.
'ದಸರಾ ಆಚರಣೆಗೆ ನನ್ನ ಆಕ್ಷೇಪಣೆ ಇಲ್ಲ, ಮುಖ್ಯಮಂತ್ರಿಗಳು ಮೈಸೂರಿಗೆ ಬರಲಿ, ಚಾಮುಂಡೇಶ್ವರಿ ಸಮ್ಮುಖದಲ್ಲಿ ದಸರಾಕ್ಕೆ ಚಾಲನೆ ನೀಡಲಿ, ಆದರೆ ಅದ್ಧೂರಿ ಆಚರಣೆ ಬೇಡ ಎಂಬುದಷ್ಟೆ ನನ್ನ ಸಲಹೆ' ಎಂದು ಶ್ರೀನಿವಾಸ್ಪ್ರಸಾದ್ ಹೇಳಿದರು.
'ಅನಗತ್ಯ ಖರ್ಚುಗಳು ಬೇಡ ಎಂದು ಸಲಹಾ ಸಮಿತಿಯಲ್ಲಿ ಸಲಹೆ ಇಟ್ಟಿದ್ದೆ, ಆದರೆ ಅದ್ಧೂರಿಯಾಗಿಯೇ ಆಚರಿಸುವುದಾಗಿ ಹೇಳಿದ್ದರು' ಹಾಗಾಗಿ ಮನಸ್ಸು ಒಪ್ಪದೆ ದಸರಾದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದರು.












Click it and Unblock the Notifications