ಭರಚುಕ್ಕಿಯಲ್ಲಿ ಬಯೋ ಡೈವರ್ಸಿಟಿ ಪಾರ್ಕ್; ಏನೇನೆಲ್ಲಾ ಇರುವುದಿಲ್ಲಿ?
ಚಾಮರಾಜನಗರ, ನವೆಂಬರ್ 6: ಎತ್ತರೆತ್ತರದಿಂದ ಕಡುಕಪ್ಪು ಹೆಬ್ಬಂಡೆಗಳ ನಡುವೆ ಹಾಲಿನಂತೆ ಹರಿವ ನೀರನ್ನು ನೋಡುವುದೇ ಸೊಬಗು. ಈ ಸೊಬಗನ್ನು ಧಾರೆಯೆರೆಯುತ್ತಿದ್ದ ಭರಚುಕ್ಕಿ ಈಗ ಮತ್ತಷ್ಟು ರೋಮಾಂಚಕ ಅನುಭವ ನೀಡಲು ಸಜ್ಜಾಗುತ್ತಿದೆ. ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿರುವ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತ ವಿಶ್ವದ ಗಮನ ಸೆಳೆಯಲು ಅಣಿಯಾಗುತ್ತಿದೆ. ಶೀಘ್ರದಲ್ಲೇ ಇಲ್ಲಿ ಪ್ರವಾಸಿ ಆಕರ್ಷಣೆಯೊಂದು ಸೇರ್ಪಡೆಗೊಳ್ಳಲಿದ್ದು, ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದು ಈ ತಾಣದ ಖ್ಯಾತಿ ಇಮ್ಮಡಿಯಾಗಲಿದೆ.
155 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಈ ಬಯೋ ಪಾರ್ಕ್ ಗೆ ಸರ್ಕಾರ ನೂರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ. ವೀಕೆಂಡ್ ಗಳಲ್ಲಿ, ರಜಾ ದಿನಗಳಲ್ಲಿ ಭರಚುಕ್ಕಿಯತ್ತ ಮುಖ ಮಾಡುವ ಜನರಿಗೂ ಇನ್ನಷ್ಟು ಸೌಂದರ್ಯ ಕಣ್ತುಂಬಿಕೊಳ್ಳುವ ಅವಕಾಶ ಒದಗಿಬರಲಿದೆ.

ಸಿದ್ಧಗೊಂಡಿರುವ ಕ್ರಿಯಾ ಯೋಜನೆ
ಈಗಾಗಲೇ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗ ಇದರ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಸರ್ಕಾರದ ಅನುಮೋದನೆ ಇಂದು ಅಥವಾ ನಾಳೆ ಸಿಗುವ ನಿರೀಕ್ಷೆ ಇದೆ. ಈ ಉದ್ದೇಶಿತ ಪಾರ್ಕ್ ಭರಚುಕ್ಕಿ ಜಲಪಾತದ ಸಮೀಪವೇ ನಿರ್ಮಾಣಗೊಳ್ಳಲಿದ್ದು ಜಲಪಾತದ ಸೌಂದರ್ಯವನ್ನೂ ಹೆಚ್ಚಿಸಲಿದೆ. ಅಪರಿಚಿತವಾಗಿಯೇ ಉಳಿದಿದ್ದ ಜಲಪಾತವನ್ನು 2007ರಲ್ಲಿ ರಾಜ್ಯ ಸರ್ಕಾರ ಭರಚುಕ್ಕಿಯಲ್ಲಿ ಜಲಪಾತೋತ್ಸವ ಮಾಡುವ ಮೂಲಕ ಎಲ್ಲರಿಗೆ ಪರಿಚಯಿಸುವ ಕೆಲಸ ಮಾಡಲಾಗಿತ್ತು. ಈಗ ಈ ಪಾರ್ಕ್ ಮೂಲಕ ಪ್ರವಾಸಿಗರನ್ನು ಹೆಚ್ಚಿಸುವ ಉದ್ದೇಶವೂ ಇದೆ.

ಪಾರ್ಕ್ ನಲ್ಲಿ ಏನೇನಿದೆ?
ಈ ಉದ್ಯಾನ ಸೋಲಾರ್ ಬೆಂಬಲಿತವಾಗಿದ್ದು, ಬೋನ್ಸಾಯ್ ಗಾರ್ಡನ್, ಆರ್ಕಿಡ್ ಒಳಗೊಂಡ ವನ, ನಕ್ಷತ್ರ ಆಕಾರದ ಉದ್ಯಾನ, ಬಿದಿರು ವನ, ಅಪರೂಪದ ಸಸ್ಯಗಳ ಟ್ರೀ ಪಾರ್ಕ್, ಸೋಲಿಗರ ಬದುಕು ತೋರುವ ಟ್ರೈಬಲ್ ಪಾರ್ಕ್, ಮ್ಯೂಸಿಯಂ, ಆಂಪಿ ಥಿಯೇಟರ್, ವನ್ಯ ಜೀವಿ ಪಾರ್ಕ್, ವೆಟ್ ಲ್ಯಾಂಡ್ ಪಾರ್ಕ್, ಚಿಟ್ಟೆ ಪಾರ್ಕ್ ಒಳಗೊಂಡಂತೆ 21 ಬಗೆಯ ವಿಶೇಷ ವಿನ್ಯಾಸದ ಕಲ್ಪನೆಯಲ್ಲಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜತೆಗೆ ಫುಡ್ ಕೋರ್ಟ್ ಕೂಡ ನಿರ್ಮಾಣಗೊಳ್ಳಲಿದೆ. ಸುಮಾರು 1.5 ಕಿ.ಮೀ. ಅಂತರದ ಸ್ಕೈವಾಕ್ ಪಥವಿರಲಿದೆ. ಎಲ್ಲಾ ವ್ಯವಸ್ಥೆಗಳನ್ನೂ ಒಂದೆಡೆಗೆ ತಂದು ಜನರನ್ನು ಆಕರ್ಷಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.

54 ವಿವಿಧ ಪಾರ್ಕ್ ಗಳ ನಿರ್ಮಾಣ
ಮಲೆ ಮಹದೇಶ್ವರ ಬೆಟ್ಟ ಹುಲಿ ಸಂರಕ್ಷಣಾ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರು ಈ ಕುರಿತು ಮಾಹಿತಿ ನೀಡಿದ್ದು, ವನ್ಯ ಜೀವಿಗಳ ಸಂರಕ್ಷಣೆ ಮತ್ತು ಅರಣ್ಯ ನಾಶ ತಡೆಗಟ್ಟುವ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸಲಾಗುತ್ತಿದೆ, ಈ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದರು. ಈ ಸ್ಥಳದಲ್ಲಿ ಒಟ್ಟು 54 ವಿವಿಧ ಪಾರ್ಕ್ ಗಳ ನಿರ್ಮಾಣ ಮಾಡಲಿದ್ದು ಪ್ರತೀ ಪಾರ್ಕ್ ಗೂ ತಲಾ ಎರಡು ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದರು. ಈ ಪಾರ್ಕ್ ಗಳನ್ನು ಹಂತ ಹಂತವಾಗಿ ನಿರ್ಮಾಣ ಮಾಡುತ್ತಾ ಹೋಗಲಿದ್ದು, ಇದರಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.

ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಭೂಮಿಪೂಜೆ
ಮೊದಲ ಹಂತದಲ್ಲಿ ಪ್ರವೇಶ ದ್ವಾರ, ಫುಡ್ ಕೋರ್ಟ್ ಹಾಗೂ ನೀರಿನ ಕಾರಂಜಿ ನಿರ್ಮಾಣಗೊಳ್ಳಲಿದ್ದು ಇದಕ್ಕೆ ಒಟ್ಟು 4.2 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ ಅರಣ್ಯ ಇಲಾಖೆ 1 ಕೋಟಿ ಮತ್ತು ಪ್ರವಾಸೋದ್ಯಮ ಇಲಾಖೆ 3.2 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದು ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಪ್ರವಾಸೋದ್ಯಮ ಸಚಿವರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಭೂಮಿ ಪೂಜೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications