ಕೊರೊನಾ ತಂದ ಆಘಾತ: ಬಿಳಿಗಿರಿರಂಗನ ಬೆಟ್ಟ ದೇವಾಲಯಕ್ಕೆ ಬೀಗ
ಚಾಮರಾಜನಗರ, ಏಪ್ರಿಲ್ 9: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬಿಳಿಗಿರಿ ರಂಗನಾಥ ಬೆಟ್ಟದಲ್ಲಿ ಏಪ್ರಿಲ್ 2 ರಂದು ನಡೆದ ಮಹಾ ಸಂಪ್ರೋಕ್ಷಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಮತ್ತು ಪ್ರಧಾನ ಅರ್ಚಕರು ಸೇರಿದಂತೆ ಬಹುತೇಕರಿಗೆ ಕೊರೊನಾ ದೃಢವಾಗಿದೆ. ಸದ್ಯ ಆತಂಕದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಬಿಳಿಗಿರಿರಂಗನ ದೇಗುಲದ ಗರ್ಭಗುಡಿಗೆ ಬೀಗ ಹಾಕಲಾಗಿದೆ.
ಹದಿನೆಂಟು ಮಂದಿಗೆ ಸೋಂಕು ದೃಢ
ಈಗಿನ ಪರಿಸ್ಥಿತಿಯಲ್ಲಿ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥ ಬೆಟ್ಟ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಸುಮಾರು ಹದಿನೆಂಟು ಮಂದಿಗೆ ಸೋಂಕು ಹರಡಿರುವುದು ದೃಢವಾಗಿದೆ. ಅರ್ಚಕರಾದ ರವಿಕುಮಾರ್, ಇವರ ಪತ್ನಿ ರೂಪ, ಮಗ ವಿಲಾಸ್, ಅರ್ಚಕರಾದ ನಾಗರಾಜ್ ಭಟ್, ನಾರಾಯಣ್, ದೇವಾಲಯದ ಸಿಬ್ಬಂದಿಗಳಾದ ಕುಮಾರ, ಬದ್ರಿರಾಮು, ರಾಘವೇಂದ್ರ, ಎಚ್.ರಾಜು, ವರದರಾಜು ಸೇರಿದಂತೆ ಹಲವರಿಗೆ ಸೋಂಕು ಹರಡಿದೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದ ಮಹಾ ಸಂಪ್ರೋಕ್ಷಣೆ ಬಳಿಕ ಮೊದಲಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ರವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮಹಾ ಸಂಪ್ರೋಕ್ಷಣೆಯಲ್ಲಿ ಭಾಗಿಯಾಗಿದ್ದ ಬಹುತೇಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈಗಾಗಲೇ 54 ಮಂದಿಯ ಗಂಟಲ ದ್ರವ್ಯ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ 18 ಮಂದಿಗೆ ಸೋಂಕು ಪತ್ತೆಯಾಗಿದೆ.

ಬಿಳಿಗಿರಿರಂಗನ ಬೆಟ್ಟದಲ್ಲೀಗ ಕೊರೊನಾ ಆತಂಕ
ದೇಗುಲದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇನ್ನೆಷ್ಟು ಮಂದಿಗೆ ಸೋಂಕು ತಗುಲಿದೆಯೋ ಗೊತ್ತಿಲ್ಲ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗುತ್ತಿದೆ. ಇನ್ನು ನಾಲ್ವರು ಅರ್ಚಕರು ಸೇರಿದಂತೆ ಒಟ್ಟು 18 ಮಂದಿಗೆ ಕೊರೊನಾ ದೃಢವಾಗಿರುವ ಹಿನ್ನಲೆಯಲ್ಲಿ ಬಿಳಿಗಿರಿರಂಗನ ಪೂಜೆ ಕೈಂಕರ್ಯಗಳು ಸ್ಥಗಿತಗೊಳಿಸಲಾಗಿದ್ದು, ಗರ್ಭಗುಡಿಗೆ ಬೀಗ ಹಾಕಲಾಗಿದೆ.

ಕೊರೊನಾ ಸೋಂಕಿತರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು ತಗುಲಿದ ವಿಷಯ ತಿಳಿಯುತ್ತಿದ್ದಂತೆಯೇ ಬಿಳಿಗಿರಿರಂಗನ ದೇವಾಲಯದ ಆಸುಪಾಸಿನ ಮನೆಗಳು ಬಾಗಿಲು ಹಾಕಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈಗ ಬಿಳಿಗಿರಿರಂಗನಬೆಟ್ಟದಲ್ಲಿ ಕೊರೊನಾದ ಭಯ ಅರ್ಚಕರು ಸೇರಿದಂತೆ ಭಕ್ತರನ್ನು ಕಾಡತೊಡಗಿದೆ.












Click it and Unblock the Notifications