Bharat Jodo Yatra in Karnataka : ಭಾರತ್ ಜೋಡೋ ಯಾತ್ರೆ ಉತ್ತಮ ಸ್ಪಂದನೆ; ಯಾವ ಶಕ್ತಿಯಿಂದಲೂ ನಿಲ್ಲಿಸಲಾಗಲ್ಲ: ರಾಹುಲ್
ಚಾಮರಾಜನಗರ, ಸೆಪ್ಟೆಂಬರ್ 30: ''ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ, ವಿಪಕ್ಷಗಳ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳಲಾಗುತ್ತಿದೆ'' ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ಕೊಟ್ಟು ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮ ಮಾತು ಪ್ರಸಾರವಾಗುತ್ತಿಲ್ಲ, ಮಾಧ್ಯಮಗಳು ಅವರ ಹಿಡಿತದಲ್ಲಿದೆ, ಸಂಸತ್ತು- ವಿಧಾನಸಭೆಗಳಲ್ಲಿ ಜನರ ಸಮಸ್ಯೆ ಮಾತನಾಡಿದರೇ ಮೈಕ್ ಆಫ್ ಆಗಲಿದೆ, ಎಲ್ಲಾ ಸಂಸ್ಥೆಗಳು ಅವರ ಹಿಡಿತದಲ್ಲಿದ್ದು ವಿಪಕ್ಷಗಳ ಸ್ವಾತಂತ್ರ್ಯದ ಮಾರ್ಗವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಹೆಸರು ಹೇಳದೇ ಕಿಡಿಕಾರಿದ್ದಾರೆ.
ಸಂವಿಧಾನ ರಕ್ಷಣೆ, ಭಾರತದ ಧ್ವಜದ ರಕ್ಷಣೆಗಾಗಿ ಈ ಪಾದಯಾತ್ರೆ, ಜನರ ದುಃಖ- ದುಮ್ಮಾನಗಳನ್ನು ಕೇಳಲು ಜನರ ಬಳಿಗೆ ನಾವು ತೆರಳುತ್ತಿದ್ದೇವೆ. ಮಳೆ, ಬಿಸಿಲು ಏನೆ ಬಂದರೂ ಬೆಳಗ್ಗೆಯಿಂದ ಸಂಜೆವರೆಗೆ ನಡೆದಿದ್ದೇವೆ, ಲಕ್ಷಾಂತರ ಜನರು ಹುರುಪು ತುಂಬಿದ್ದು ಯಾವ ಶಕ್ತಿಯೂ ಈ ಪಾದಯಾತ್ರೆ ನಿಲ್ಲಿಸಲಾಗಲ್ಲ ಎಂದು ಗುಡುಗಿದರು.
ಭಾರತದ ಉಳಿವಿಗಾಗಿ ಯಾತ್ರೆ
ನಮ್ಮ ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ ಕಾಣಲ್ಲ, ಈ ಯಾತ್ರೆಯಲ್ಲಿ ಎಲ್ಲಾ ಧರ್ಮ, ಜಾತಿಯ ಜನರು ನಡೆಯುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಯಾರಿಗೇ ಏನೇ ತೊಂದರೆ ಆದರೂ ಮೊದಲು ಸಹಾಯ ಮಾಡುತ್ತಾರೆಯೇ ಹೊರತು ಜಾತಿ-ಭಾಷೆ ಕೇಳಲ್ಲ, ಇದು ನಮ್ಮ ಭಾರತ, ಈ ಭಾರತ ಉಳಿವಿಗಾಗಿ ಯಾತ್ರೆ ಎಂದು ಭಾರತ್ ಜೋಡೋದ ಮಹತ್ವ ತಿಳಿಸಿದರು.
ಜನಾಭಿಪ್ರಾಯ ಸಂಗ್ರಹ
ನಾನು ನಿತ್ಯ 6-7 ಗಂಟೆ ನಡೆಯುತ್ತೇನೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಯಲಿದೆ. ನನ್ನೊಂದಿಗೆ ಲಕ್ಷಾಂತರ ಜನರು ಹೆಜ್ಜೆ ಹಾಕಿದ್ದಾರೆ, ಶ್ರೀಸಾಮಾನ್ಯರು ನಮ್ಮ ಬಳಿ ಬಂದು ಬೆಲೆ ಏರಿಕೆ, ರೈತರ ಮೇಲಾಗುತ್ತಿರುವ ದಬ್ಬಾಳಿಕೆ, ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ, ನಾವು ಹೆಚ್ಚು ನಡೆಯುತ್ತೇವೆ ಈ ಮೂಲಕ ಜನರ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಜನರ ಧನಿಯಾಗುವುದು ಯಾತ್ರೆ ಉದ್ದೇಶ
ನಿಮ್ಮ ಮಾತನ್ನು ಕೇಳುವ ಉದ್ದೇಶ ಈ ಪಾದಯಾತ್ರೆಯದ್ದು. ಪ್ರಜಾಪ್ರಭುತ್ವದ ಹಲವು ಸಂಸ್ಥೆಗಳನ್ನು ವಿರೋಧ ಪಕ್ಷಗಳಿಗೆ ಬಂದ್ ಮಾಡಲಾಗಿದೆ. ಎಲ್ಲವೂ ಸರಕಾರದ ಹಿಡಿತದಲ್ಲಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಬಿಡುತ್ತಿಲ್ಲ, ವಿಧಾನಸಭೆಗೆ ಹೋಗಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಇದೊಂದೇ ದಾರಿಯಾಗಿದೆ. ಅದಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ನಡೆಯುತ್ತಿರುವ 40% ಕಮಿಷನ್ ಭ್ರಷ್ಟಾಚಾರ, ರೈತರಿಗೆ, ಬಡವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಮತ್ತು ಕೊನೆಯಲ್ಲಿ ರಾಗಾ, ರಾಗಾ ಎಂಬ ಘೋಷಣೆಗಳು ಮೊಳಗಿದವು, ಘೋಷಣೆಗಳು ಕೂಗುತ್ತಿದ್ದಂತೆ ಹರಿಪ್ರಸಾದ್ ಇನ್ನೂ ಕೂಗಿ ಎಂದು ಕೈ ಏರಿಸಿ ಉತ್ಸಾಹ ತುಂಬುತ್ತಿದ್ದದ್ದು ಕಂಡು ಬಂದಿತು.
ಸಂವಿಧಾನ ಪುಸ್ತಕ ಹಾಗೂ ಪೀಠಿಕೆ ಉಡುಗೊರೆ
ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ದೇವನೂರು ಮಹಾದೇವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತೀಯ ಸಂವಿಧಾನ ಪುಸ್ತಕ ಹಾಗೂ ಪೀಠಿಕೆ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
ವೇದಿಕೆ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಲಾಯಿತು. ಒಂದು ನಗಾರಿಯನ್ನು ಡಿಕೆಶಿ, ಸಿದ್ದರಾಮಯ್ಯ ಹಾಗೂ ರಾಗಾ ಒಗ್ಗಟ್ಟಾಗಿ ಬಾರಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಜಾನಪದ ಕಲಾತಂಡಗಳೊಂದಿಗೆ ಹೊರಟ ಪಾದಯಾತ್ರೆ ಹೊರಟಿದ್ದು 12 ಗಂಟೆ ಹೊತ್ತಿಗೆ ಕೆಬ್ಬೆಕಟ್ಟೆ ಬಳಿ ಸೋಲಿಗರು ಮತ್ತು ಆ್ಯಕ್ಸಿಜನ್ ಸಂತ್ರಸ್ತರೊಟ್ಟಿಗೆ ಸಂವಾದ ಏರ್ಪಡಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದು ರಾಗಾ ಜೊತೆ ನಾಯಕರುಗಳು ಮುಂಚೂಣಿಯಲ್ಲಿ ನಡೆಯುತ್ತಿದ್ದಾರೆ.