ಮಹದೇಶ್ವರ ಬೆಟ್ಟದಲ್ಲಿ ಬಿ.ಸಿ.ಪಾಟೀಲ್ ಅಮಾವಾಸ್ಯೆ ಪೂಜೆ; ಜನರ ಆಕ್ಷೇಪ
ಚಾಮರಾಜನಗರ, ಅಕ್ಟೋಬರ್ 16: ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ನಿನ್ನೆ ಮತ್ತು ಇಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು, ಈ ನಿರ್ಬಂಧ ಸರ್ಕಾರಿ ಕೆಲಸಕ್ಕೆ ತೆರಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದರು.
ಆದರೆ ನಿನ್ನೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಮಾವಾಸ್ಯೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಚಿವರು ಕುಟುಂಬ ಸಮೇತ ಹುಲಿ ವಾಹನ ಸೇವೆ ಸಲ್ಲಿಸಿದರು. ಸಚಿವರಿಗೋಸ್ಕರ ಹುಲಿ ವಾಹನ ಉತ್ಸವಕ್ಕೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿತ್ತು.

ಕೃಷಿ ಸಚಿವರಿಗೆ ಮಹದೇಶ್ವರ ಬೆಟ್ಟದಲ್ಲಿ ಯಾವ ಸರ್ಕಾರಿ ಕೆಲಸವೂ ಇರಲಿಲ್ಲ. ಆದರೆ ಸರ್ಕಾರಿ ಕೆಲಸದ ನೆಪದಲ್ಲಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಮಾವಾಸ್ಯೆ ಪೂಜೆಗಾಗಿಯೇ ಸಚಿವ ಬಿ.ಸಿ. ಪಾಟೀಲ್ ಬಂದು ನಿನ್ನೆ ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಿದ್ದರು. ಸಚಿವರೊಡನೆ ಹಲವು ಹಿಂಬಾಲಕರು ಬಂದಿದ್ದರು. ಹಾಗಾದರೆ ಸಚಿವರಿಗೊಂದು ಕಾನೂನು, ಸಾರ್ವಜನಿಕರಿಗೊಂದು ಕಾನೂನೇ ಎಂದು ಪ್ರಶ್ನಿಸಿದ್ದಾರೆ. ನಮ್ಮನ್ನು ತಡೆದು, ಸಚಿವರಿಗೆ ಅನುಮತಿ ನೀಡಿದ್ದೀರ. ಇದು ಯಾವ ರೀತಿಯ ನಿರ್ಬಂಧ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications