ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು, ಒಂದು ವಾರ ಸಫಾರಿ ಬಂದ್
ಬಂಡೀಪುರ, ಫೆಬ್ರವರಿ 25:ಕಳೆದ ನಾಲ್ಕು ದಿನಗಳಿಂದ ವ್ಯಾಪಿಸಿರುವ ಕಾಡ್ಗಿಚ್ಚಿಗೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಪಾರ ಹಾನಿಯಾಗಿದೆ. ಹಾಗಾಗಿ ಒಂದು ವಾರಗಳ ಕಾಲ ಸಫಾರಿ ಸ್ಥಗಿತಗೊಳಿಸಲಾಗಿದೆ.
ಸಫಾರಿ ವಲಯ ಕೂಡ ನಾಶವಾಗಿದ್ದು ಇದೀಗ ಕಾಡ್ಗಿಚ್ಚು ಕೇರಳ ಭಾಗಕ್ಕೂ ತಲುಪಿದೆ. ಹುಣಸೂರಿ ವಲಯದಿಂದ ಇಂದು 60 ಸಿಬ್ಬಂದಿಗಳು ತೆರಳಿದ್ದಾರೆ. ಒಟ್ಟಾರೆ 3500 ಹೆಕ್ಟೇರ್ ಅಂದರೆ ಸುಮಾರು 8650 ಎಕರೆ ಕಾಡು ಭಸ್ಮವಾಗಿದ್ದು, ಗೋಪಾಲಸ್ವಾಮಿ ಬೆಟ್ಟ ವಲಯ ಸ್ಮಶಾನದ ರೀತಿ ಗೋಚರಿಸುತ್ತಿದೆ.
ಬೆಂಕಿಯ ಮುನ್ಸೂಚನೆ ದೊರೆತ ಕಾಡು ಪ್ರಾಣಿಗಳು ದಿಕ್ಕಾಪಾಲಾಗಿದ್ದರೆ, ಸಾವಿರಾರು ಸರೀಸೃಪಗಳು ಸುಟ್ಟು ಕರಕಲಾಗಿವೆ. ತನ್ನ ವ್ಯಾಪ್ತಿ ಬಿಟ್ಟು ತೆರಳದ ಹುಲಿಗಳೂ ಕೂಡ ಬೇರೆಡೆಗೆ ಪಲಾಯನ ಮಾಡಿವೆ. 500ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

ಮೊದಲಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಕುಂದಕೆರೆ ವಲಯದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು, ನಂತರ ಶುಕ್ರವಾರ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ, ಶನಿವಾರ ಮದ್ದೂರು ಮತ್ತು ಬಂಡೀಪುರ ವಲಯದಲ್ಲಿ ಬೆಂಕಿಯ ರುದ್ರ ನರ್ತನವೇ ಆಯಿತು.
ಶನಿವಾರ ರಾತ್ರಿ ಇಡೀ 500ಕ್ಕೂ ಹೆಚ್ಚು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರು ಮತ್ತು ಗ್ರಾಮಸ್ಥರು ಪಟ್ಟ ಶ್ರಮದಿಂದಾಗಿ ಭಾನುವಾರ ಬೆಳಗಿನ ಜಾವ ಬೆಂಕಿ ಸ್ವಲ್ಪ ಹತೋಟಿಗೆ ಬಂದಿತ್ತು. ಆದರೆ ಬಿಸಿಲಿನ ಝಳ, ಗಾಳಿಗೆ ಭಾನುವಾರ ಮತ್ತೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲದೆ ಮದ್ದೂರು ಮತ್ತು ಬಂಡೀಪುರ ವಲಯಕ್ಕೂ ಬೆಂಕಿ ಆವರಿಸಿದೆ.












Click it and Unblock the Notifications