ಬಂಡೀಪುರ ಅಭಯಾರಣ್ಯ: ಮೇವಿಲ್ಲದೆ ವನ್ಯಜೀವಿಗಳ ಪರದಾಟ
ಚಾಮರಾಜನಗರ: ವಾಡಿಕೆಯ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಬೆಳೆ ಬೆಳೆಯಲಾಗದೆ, ಜಾನುವಾರುಗಳಿಗೆ ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಪರದಾಡುತ್ತಿರುವ ಬೆನ್ನಲ್ಲೇ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟೀಯ ಉದ್ಯಾನವನದ ಅರಣ್ಯದಲ್ಲಿ ವನ್ಯಪ್ರಾಣಿಗಳು ನೀರು ಮತ್ತು ಮೇವಿಲ್ಲದೆ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದ ಕಾರಣದಿಂದ ಅರಣ್ಯದಲ್ಲಿರುವ ಕೆರೆ, ಕೊಳಗಳು ತುಂಬಿಲ್ಲ. ಇದ್ದ ನೀರು ಈಗಾಗಲೇ ಬತ್ತುತಿದೆ. ಮತ್ತೊಂದು ಕಡೆ ಅರಣ್ಯದಲ್ಲಿ ಲಂಟಾನ ಬೆಳೆದು ಮೇವಿಗೆ ಕೊರತೆಯುಂಟಾಗಿದೆ.
ಇನ್ನೊಂದೆಡೆ ಬಿಸಿಲಿನ ತೀವ್ರತೆಗೆ ಹುಲ್ಲು, ಸೇರಿದಂತೆ ಮೇವಿನ ಗಿಡಗಳು ಒಣಗಿವೆ. ಇದರಿಂದ ಜಿಂಕೆಗಳು ಸೇರಿದಂತೆ ಹಸಿರು ಮೇವು ತಿಂದು ಬದುಕುವ ಪ್ರಾಣಿಗಳು ಆಹಾರವಿಲ್ಲದೆ ಪರದಾಡುವಂತಾಗಿದೆ. ಅವು ಮೇವು ಮತ್ತು ನೀರು ಅರಸಿಕೊಂಡು ಕಾಡಿನಿಂದ ನಾಡಿನತ್ತ ಮುಖ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ.[ಹುಲಿ ಕಳೇಬರ ಪತ್ತೆ; ವಿಷವುಣಿಸಿ, ಉಗುರು- ಹಲ್ಲು ಹೊತ್ತೊಯ್ದರೆ?]

ಬಂಡೀಪುರ ಅರಣ್ಯ ಪ್ರದೇಶ ಹುಲಿಗಳಿಗೆ ಆಶ್ರಯ ತಾಣವಾಗಿದೆ. ಹೀಗಿರುವಾಗ ಇಲ್ಲಿರುವ ಹುಲಿಗಳು ಇನ್ನಿತರ ಪ್ರಾಣಿಗಳನ್ನು ತಿಂದು ಬದುಕುವುದು ಅನಿವಾರ್ಯವಾಗಿದೆ. ಒಂದು ವೇಳೆ ಅವುಗಳು ನಾಡಿನತ್ತ ಬಂದು ಜಾನುವಾರುಗಳ ಮೇಲೆ ದಾಳಿ ಮಾಡಲು ಆರಂಭಿಸಿದರೆ ಮನುಷ್ಯ ಮತ್ತು ವನ್ಯ ಪ್ರಾಣಿಗಳ ನಡುವೆ ಸಂಘರ್ಷ ಆರಂಭವಾಗುವುದಂತು ಖಚಿತ.

ಅರಣ್ಯದಲ್ಲಿ ಈಗಾಗಲೇ ಹಸಿಮೇವು ಬಿಸಿಲಿಗೆ ಒಣಗಿ ನಿಂತಿವೆ. ಕೆರೆಕಟ್ಟೆಗಳಲ್ಲಿ ನೀರು ಬತ್ತಿದೆ. ಹೀಗಾಗಿ ಕಾಡು ಪ್ರಾಣಿಗಳು ನೀರು ಮತ್ತು ಮೇವಿಗಾಗಿ ಎಲ್ಲೆಂದರಲ್ಲಿ ಅಲೆಯ ತೊಡಗಿವೆ. ಒಂದು ವೇಳೆ ಅವು ಕಾಡು ಬಿಟ್ಟು ನಾಡಿನತ್ತ ಮುಖ ಮಾಡಿದರೆ ಕಾಡಂಚಿನ ಜನರ ಬದುಕು ಅಯೋಮಯವಾಗುತ್ತದೆ.[ಭದ್ರಾ ಅಭಯಾರಣ್ಯದಲ್ಲಿ 2 ಹುಲಿಗಳಿಗೆ ವಿಷವಿಟ್ಟು ಕೊಂದರಾ?]
ಬೇಸಿಗೆಯ ತೀವ್ರತೆ ಹೆಚ್ಚಾಗುವ ಮುನ್ನವೇ ಅರಣ್ಯ ಇಲಾಖೆ ಏನಾದರೊಂದು ಕ್ರಮ ಕೈಗೊಂಡು ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆ ತಪ್ಪಿದಲ್ಲ.












Click it and Unblock the Notifications