ಬಂಡೀಪುರ ಹೆದ್ದಾರಿ ವಿಸ್ತರಣೆಗಿಲ್ಲ ಹಸಿರು ನಿಶಾನೆ!
ಚಾಮರಾಜನಗರ, ಜನವರಿ 12: ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ ಆದರೆ ಇವರೆಲ್ಲರು ರಸ್ತೆ ಬಗ್ಗೆಯೇ ಮಾತನಾಡುತ್ತಾರೆ. ಕಾರಣ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 67 ಕಿರಿದಾಗಿದೆ. ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಸಾಮಾನ್ಯ ರಸ್ತೆಗಿಂತ ಕಡೆಯಾಗಿದೆ.
ದೂರದಿಂದ ಬರುವವರಿಗೆ ಇದೊಂದು ರಾಷ್ಟ್ರೀಯ ಹೆದ್ದಾರಿನಾ ಎಂಬ ಸಂಶಯ ಮೂಡುವುದು ಸಹಜ. ಏಕೆಂದರೆ ಸೌಲಭ್ಯವಂಚಿತ ಈ ರಸ್ತೆಯಲ್ಲಿ ಸಾಗುವುದೇ ಸಾಹಸ. ಇಂಥ ರಸ್ತೆಯನ್ನು ಅಭಿವೃದ್ಧಿ ಮಾಡಬೇಕೆನ್ನುವ ಒತ್ತಡ ಒಂದೆಡೆಯಾದರೆ, ಮತ್ತೊಂದೆಡೆ ಅಭಿವೃದ್ಧಿಗೆ ಕಾನೂನು ತೊಡಕುಗಳು ಎದುರಾಗಿವೆ. ಇದರಿಂದಾಗಿ ಬಂಡೀಪುರ ಮೂಲಕ ಊಟಿಗೆ ತೆರಳುವ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಗುಂಡ್ಲುಪೇಟೆ ಪಟ್ಟಣದಿಂದ ಮೇಲುಕಾಮನಹಳ್ಳಿ ಗ್ರಾಮದವರೆಗೆ 20 ಕಿ.ಮೀ. ದೂರದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಹಸಿರು ನಿಶಾನೆ ದೊರೆತಿದ್ದು, ಈಗಾಗಲೇ ಸುಮಾರು ರು. 48ಕೋಟಿಗಳ ವೆಚ್ಚದಲ್ಲಿ ಕಾಮಗಾರಿಯೂ ನಡೆಯುತ್ತಿದೆ.[ಬಂಡೀಪುರ ಸಫಾರಿಗಾಗಿ ಬಂತು ಪರಿಸರ ಸ್ನೇಹಿ ಬಸ್!]

ಆದರೆ ಹೆದ್ದಾರಿಯನ್ನು ವಿಸ್ತರಣೆ ಮಾಡಿ ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಕಾರಣ ರಸ್ತೆಯ ಎರಡು ಬದಿಯಲ್ಲೂ ಮರಗಳಿದ್ದು ಅವುಗಳನ್ನು ತೆರವುಗೊಳಿಸಿದರೆ ರಸ್ತೆ ವಿಸ್ತರಣೆ ಮಾಡಿ ಅಭಿವೃದ್ಧಿ ಮಾಡಬಹುದು ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಬೇಕೆಂದು ರಸ್ತೆ ಅಭಿವೃದ್ಧಿ ಪ್ರಾಧಿಕಾರ ಸಂಸದ ಆರ್.ಧ್ರುವನಾರಾಯಣ್ ಅವರಿಗೆ ಮನವಿ ಮಾಡಲಾಗಿದೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]
ಈ ಸಂಬಂಧ ಸಂಸದರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಈ ಸಂದರ್ಭ ಅರಣ್ಯಾಧಿಕಾರಿಗಳು ಅರಣ್ಯ ಕಾಯ್ದೆಯ ನಿಯಮದಂತೆ ಸೂಕ್ಷ್ಮ ಅರಣ್ಯ ವಲಯಕ್ಕೆ ಸೇರಿದ ಹಾಗೂ ಸಂರಕ್ಷಿತ ಅಭಯಾರಣ್ಯದಲ್ಲಿ ರಸ್ತೆಯ ಅಗಲವನ್ನು ಹೆಚ್ಚಿಸಲು ಸಾಧ್ಯವಿಲ್ಲ ಹಾಗೂ ರಸ್ತೆಯ ಬದಿಯಲ್ಲಿನ ಮರಗಳನ್ನು ಕಡಿಯಲು ಅವಕಾಶವಿಲ್ಲ. ಬದಲಾಗಿ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಮರಗಳ ಕೊಂಬೆಗಳನ್ನು ಮಾತ್ರ ಕತ್ತರಿಸಲು ಅನುಮತಿ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇರುವ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯ ನಡೆಯುತ್ತಿದೆ.












Click it and Unblock the Notifications