ನಿವೃತ್ತಿಯಂಚಿನಲ್ಲಿ ಚಾಣಕ್ಷ್ಯ"ರಾಣ"; ಇವನ ಬುದ್ಧಿಮತ್ತೆಗೆ ಸಾಟಿ ಏನು?
ಚಾಮರಾಜನಗರ,
ನವೆಂಬರ್ 11: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಧಿಕಾರಿಗಳವರೆಗೆ ಸ್ನೇಹಿತನಾಗಿ ಕಾಡುಗಳ್ಳರು, ಬೇಟೆಗಾರರಿಗೆ ಸಿಂಹಸ್ವಪ್ನವಾಗಿರುವ ಅರಣ್ಯ ಪತ್ತೆದಾರಿ ರಾಣಾ ನಿವೃತ್ತಿಯಂಚಿನಲ್ಲಿದ್ದು, ಮುಂದಿನ ಪತ್ತೆದಾರಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. id="toptextpromo"> id='are-slot-1' class='oiad oi-axt oiadv'>ಬಂಡೀಪುರಕ್ಕೆ
ಪತ್ತೆದಾರಿ ಶ್ವಾನವಾಗಿ ರಾಣಾ ಬಂದ ಬಳಿಕ ಅರಣ್ಯದಲ್ಲಿ ಕಾಡುಗಳ್ಳರು, ಬೇಟೆಗಾರರು ಅರಣ್ಯ ಸಿಬ್ಬಂದಿ ಕಣ್ಣು ತಪ್ಪಿಸಿ ನಡೆಸುತ್ತಿದ್ದ ದುಷ್ಕೃತ್ಯಗಳನ್ನು ತಡೆಯುವಲ್ಲಿ ರಾಣಾನ ಪಾತ್ರವಿರುವುದನ್ನು ಮರೆಯುವಂತಿಲ್ಲ. id='are-slot-2' class='oiad oi-axt oiadv'>
2015ಕ್ಕೆ ಬಂಡೀಪುರಕ್ಕೆ ಬಂದ ರಾಣಾ
ಅರಣ್ಯದ ಕಾವಲುಗಾರ ಜರ್ಮನ್ ಶಫರ್ಡ್ ರಾಣಾ ಶ್ವಾನವನ್ನು ಮಧ್ಯ ಪ್ರದೇಶದ ಭೋಪಾಲ್ ಪೊಲೀಸ್ ಪಡೆಯ 23ನೇ ಬೆಟಾಲಿಯನ್ ಕೇಂದ್ರದಲ್ಲಿ 9 ತಿಂಗಳ ಕಾಲ ತರಬೇತಿ ನೀಡಿ 2015 ಜೂನ್ನಲ್ಲಿ ಬಂಡೀಪುರ ಅರಣ್ಯವನ್ನು ಕಾಯಲು ನಿಯೋಜನೆಗೊಳಿಸಲಾಗಿತ್ತು. ಇದು ಮರಗಳ್ಳರ ಪತ್ತೆ, ಹುಲಿ, ಚಿರತೆ ಚರ್ಮ ಸಾಗಾಣಿಕೆ, ಹುಲಿ ಉಗುರು, ಆನೆ ದಂತ, ಜೆಂಕೆ, ಕಾಡು ಹಂದಿಗಳ ಇನ್ನಿತರ ಪ್ರಾಣಿಗಳನ್ನು ಬೇಟೆಯಾಡುವ ಬೇಟೆಗಾರರನ್ನು ಪತ್ತೆ ಹಚ್ಚುವಲ್ಲಿ ನಿಪುಣತೆ ಪಡೆದುಕೊಂಡಿತ್ತು. ಅಲ್ಲಿಂದ ಇಲ್ಲಿವರೆಗೂ ಅದರೊಂದಿಗೆ ಕೆಲಸ ಮಾಡಿದ ಅರಣ್ಯಾಧಿಕಾರಿಗಳಿಗೆ ಇದೀಗ ಅದು ನಿವೃತ್ತಿಯಾಗುತ್ತಿರುವುದು ಬೇಸರ ತಂದಿದೆ.

ಹುಲಿ, ಕಳ್ಳರ ಜಾಡು ಹಿಡಿಯುತ್ತಿದ್ದ ರಾಣಾ
ರಾಣಾನನ್ನು ಬಂಡೀಪುರಕ್ಕೆ ನೀಡಿದ್ದು ವಿಶ್ವ ವನ್ಯಜೀವಿ ನಿಧಿ ಹಾಗೂ ಟ್ರಾಫಿಕ್ ಇಂಡಿಯಾ ಸಂಸ್ಥೆ. ಬಂಡೀಪುರಕ್ಕೆ ರಾಣಾ ಬಂದ ಬಳಿಕ ಹಲವು ಕೃತ್ಯಗಳು ಪತ್ತೆಯಾಗಿರುವುದನ್ನು ಗಮನಿಸಬಹುದಾಗಿದೆ. ಎನ್.ಬೇಗೂರಿನಲ್ಲಿ ತೇಗದ ಮರ ಕಳ್ಳರ ಮತ್ತು ಬಂಡೀಪುರದ ವಿಂಡ್ ಫ್ಲವರ್ ಬಳಿ ಶ್ರೀಗಂಧದ ಮರಕಳ್ಳರ ಪತ್ತೆ ಹಚ್ಚಿದ್ದರೆ, ತಮಿಳುನಾಡಿನ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ಟೀ ಎಸ್ಟೇಟ್ನಲ್ಲಿ ಕಾವಲುಗಾರನ ರುಂಡದೊಂದಿಗೆ ಪರಾರಿಯಾಗಿದ್ದ ನರಭಕ್ಷಕ ಹುಲಿಯನ್ನು ಹುಡುಕಿದ್ದು, ಹಂಚೀಪುರ ಗ್ರಾಮದಲ್ಲಿ ಅಪರೂಪದ ಕಪ್ಪು ಚಿರತೆಗೆ ವಿಷಪ್ರಾಶನ ಮಾಡಿದ್ದ ಪ್ರಕರಣ ಬೇಧಿಸಿ ವ್ಯಕ್ತಿಯನ್ನು ಬಂಧಿಸುವಲ್ಲಿಯೂ ಇದರ ಪಾತ್ರವಿತ್ತು. ಶ್ರೀರಂಗಪಟ್ಟಣದ ಬಳಿ 60 ಕೆ.ಜಿ. ಶ್ರೀಗಂಧ ಕದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿಯೂ ಯಶಸ್ವಿಯಾಗಿತ್ತು.

ಹಿಂದಿ, ಇಂಗ್ಲಿಷ್ ಭಾಷೆ ಅರ್ಥ ಮಾಡಿಕೊಳ್ಳುತ್ತಿದ್ದ ನಿಪುಣ
ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ತನಗೆ ನೀಡುವ ಕಾರ್ಯವನ್ನು ಚಾಚೂ ತಪ್ಪದೆ ಮಾಡುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಹತ್ತು ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಪತ್ತೆದಾರಿ ನಿಪುಣ ರಾಣಾ ಇನ್ನೇನು ಕೆಲವೇ ದಿನಗಳಲ್ಲಿ ತನ್ನ ವೃತ್ತಿಯಿಂದ ನಿವೃತ್ತಿಯಾಗುತ್ತಿರುವ ವಿಷಯ ಇಡೀ ಬಂಡೀಪುರ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪ್ರಿಯರಿಗೆ ಬೇಸರವನ್ನುಂಟು ಮಾಡಿದೆ. ಈ ಪತ್ತೆದಾರಿ ನೈಪುಣ್ಯ ಹೊಂದಿರುವ ರಾಣಾನ ಸ್ಥಾನವನ್ನು ತುಂಬಲು ಮತ್ತೆರಡು ಶ್ವಾನಗಳು ಅರಣ್ಯ ಇಲಾಖೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ರಾಣಾನಂತೆ ಕಾಯನಿರ್ವಹಿಸುವ ಭರವಸೆ
ಅರಣ್ಯ ರಕ್ಷಣೆಯಲ್ಲಿ ತನ್ನದೇ ಪಾತ್ರವಹಿಸಿದ್ದ ರಾಣಾನ ಕಾರ್ಯಕ್ಷಮತೆಯನ್ನು ನೋಡಿದ ಬಳಿಕ ನಾಗರಹೊಳೆ ಅಭಯಾರಣ್ಯ, ಬಿಳಿಗಿರಿರಂಗನಬೆಟ್ಟ ಹಾಗೂ ಕಾಳಿ ಸಂರಕ್ಷಿತ ಪ್ರದೇಶದಲ್ಲಿಯೂ ಶ್ವಾನವನ್ನು ಬಳಸಿಕೊಳ್ಳಲು ಚಿಂತನೆ ನಡೆದಿತ್ತು. ಅರಣ್ಯದಲ್ಲಿ ರಾಣಾನಂತಹ ಪತ್ತೆದಾರಿ ಶ್ವಾನವಿದ್ದರೆ ಕಾಡುಕಳ್ಳರ ಕೃತ್ಯಗಳಿಗೆ ಬ್ರೇಕ್ ಹಾಕಲು ಸಾಧ್ಯ ಎಂದೂ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಅಪರಾಧಗಳ ಬೇಧಿಸುವಲ್ಲಿ ಯಶಸ್ಸು ಕಂಡಿರುವ ರಾಣಾ ಇನ್ನು ಕೆಲವೇ ದಿನಗಳಲ್ಲಿ ನಿವೃತ್ತಿಯಾಗಲಿದೆ. ಇದರಿಂದ ಅರಣ್ಯದಲ್ಲಿ ಅಪರಾಧಗಳ ಪತ್ತೆ ಕಾರ್ಯ ವಿಳಂಬವಾಗಲಿದೆ. ಮುಂದಿನ ದಿನಗಳಲ್ಲಿ ರಾಣಾ ಸ್ಥಾನ ತುಂಬಲು ಬರುವ ಶ್ವಾನಗಳು ರಾಣಾನಂತೆ ಕಾರ್ಯ ನಿರ್ವಹಿಸಲಿ ಎನ್ನುವುದೇ ಎಲ್ಲರ ಆಶಯವಾಗಿದೆ.












Click it and Unblock the Notifications