ಗೂಳಿಪುರದಲ್ಲಿ ನ್ಯಾಯಾಲಯದಿಂದ ನೋಟೀಸ್ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ
ಚಾಮರಾಜನಗರ, ಅಕ್ಟೋಬರ್.30:ಆಟೋ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ನಡೆದಿದ್ದು, ಆತ್ಮಹತ್ಯೆಗೆ ನ್ಯಾಯಾಲಯದಿಂದ ನೋಟೀಸ್ ಬಂದಿದ್ದೇ ಕಾರಣ ಎನ್ನಲಾಗಿದೆ.
ಗೂಳಿಪುರ ಗ್ರಾಮದ ನಿವಾಸಿ, ಆಟೋ ಚಾಲಕ ಮಹೇಶ್ ಅಲಿಯಾಸ್ ಬೆಳ್ಳಪ್ಪ(26) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಕಳೆದ ಒಂದೂವರೆ ವರ್ಷಗಳ ಹಿಂದೆ ಹುರಳಿನಂಜನಪುರ ಬಳಿ ಮಾಡಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟೀಸ್ ಬಂದಿತ್ತು.
ಇದನ್ನು ನೋಡಿದ ಬಳಿಕ ಭಯಗೊಂಡಿದ್ದನಲ್ಲದೆ, ತನ್ನನ್ನು ಬಂಧಿಸಿ ಜೈಲಿಗೆ ಹಾಕಿಬಿಡುತ್ತಾರೆ ಎಂದೆಲ್ಲ ಚಿಂತಿಸುತ್ತಿದ್ದನಂತೆ. ಈ ನಡುವೆ ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ಮನೆಯಿಂದ ಹೊರಗೆ ಹೋದವನು ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗ್ಗೆ ಎದ್ದು ನೋಡಿದಾಗ ಆತ ಇರಲಿಲ್ಲ. ಹುಡುಕಾಟ ನಡೆಸಿದ ವೇಳೆ ಗ್ರಾಮದ ಹೊರ ವಲಯದ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಚಾಮರಾಜನಗರ ತಾಲೂಕಿನ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications