ಠಾಣೆ ಮೇಲೆ ಧ್ವಜ ಹಾರಿಸಿ ಸೆರೆವಾಸ, ಪೊಲೀಸರ ಲಾಠಿ ಕಿತ್ತು ಬಿಸಾಕುತ್ತಿದ್ದ ಲಲಿತಾ ಟಾಗೆಟ್
ಚಾಮರಾಜನಗರ,ಆಗಸ್ಟ್ 14 : ಭಾರತ ಸ್ವಾತಂತ್ರ್ಯ ಪಡೆಯಲು ಸಾವಿರಾರು ಹೋರಾಟಗಾರರ ಶ್ರಮ, ಬಲಿದಾನಗಳಿವೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಪ್ರತಿಭಟನೆಯಲ್ಲಿ ಚಾಮರಾಜನಗರ ಜಿಲ್ಲೆಯ ಲಲಿತಾ ಟಾಗೆಟ್ ಎಂಬುವವರು ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದಾರೆ. ಅದು ಕೇವಲ 14 ನೇ ವಯಸ್ಸಿನಲ್ಲೆ.
ಬೀದಿಗಳಲ್ಲಿ ಅಂದು ಹೋರಾಟಗಾರರು ಕೂಗುತ್ತಿದ್ದ ಸ್ವಾತಂತ್ರ್ಯದ ಘೋಷಣೆಗಳಿಂದ ಸ್ಪೂರ್ತಿಗೊಂಡು ಚಳವಳಿಗೆ ಧುಮುಕಿದ್ದರು. ಕುಟುಂಬಸ್ಥರ ಮಾತು ಕೇಳದೆ ಬ್ರಿಟಿಷರ ವಿರುದ್ಧದ ಮೆರವಣಿಗೆಗಳಲ್ಲಿ ಭಾಗವಹಿಸಿ, ಘೋಷಣೆಗಳನ್ನು ಕೂಗಿ ಗಮನ ಸೆಳೆದಿದ್ದರು.
ಜಿಲ್ಲೆಯ ಗಂಗಾಮತಸ್ಥರ ಬೀದಿಯಲ್ಲಿ ವಾಸಿಸುತ್ತಿರುವ ಲಲಿತಾ ಟಾಗೆಟ್ ಎಂಬ ಹಿರಿಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ. ಈಗಲೂ ಯುವಜನತೆಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಅಂದು ಅವರು ಮಾಡಿದ ಹೋರಾಟ, ತೋರಿದ್ದ ಧೈರ್ಯವನ್ನು ಈಗಲೂ ನೆನಪಿಸಿಕೊಂಡು ನಸುನಗುತ್ತಾರೆ.

1947 ರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಟಾಗೆಟ್ ಅವರನ್ನು ಪೊಲೀಸರು ಬಂಧಿಸಿ ಮೈಸೂರಿನ ಜೈಲಿನಲ್ಲಿ ಸುಮಾರು ಒಂದು ತಿಂಗಳು ಇರಿಸಿದ್ದರು. ಈ ವೇಳೆ ಸ್ವಾತಂತ್ರ್ಯ ಚಳವಳಿಯ ನೇತೃತ್ವವಹಿಸಿದ್ದ ಮುಖಂಡರು ಹೇಳಿಕೊಟ್ಟಂತೆ ಸೆರೆಮನೆಯಲ್ಲಿ "ತನಗೆ ತುಪ್ಪ ಬೇಕು, ಮೊಸರು ಬೇಕು, ಚಟ್ನಿಪುಡಿ ಇಲ್ಲದೆ ಊಟ ಮಾಡುವುದಿಲ್ಲ" ಎಂದು ರಂಪಾಟ ಮಾಡಿ ಊಟ ಬಿಟ್ಟು ಜೈಲು ಸಿಬ್ಬಂದಿ ನಿದ್ದೆಗೆಡಿಸಿದ್ದರಂತೆ. ನಂತರ ಸೆರೆಮನೆಯಿಂದ ವಾಪಸ್ ಆದ ಬಳಿಕ "ಮೈಸೂರು ಚಲೋ" ಹೋರಾಟಕ್ಕೆ ಭಾಗವಹಿಸಿ 14 ನೇ ವಯಸ್ಸಿನಲ್ಲೇ ಹೋರಾಟದ ಕಿಚ್ಚನ್ನು ತೋರಿದ್ದರು.
ಛಾವಣಿಯಿಂದ ಹಾರಿ ಪ್ರತಿಭಟನೆಯಲ್ಲಿ ಭಾಗಿ; ಪ್ರತಿಭಟನೆ, ಮೆರವಣಿಗೆಗಳಲ್ಲಿ ಮುಂದಿರುತ್ತಿದ್ದ ಟಾಗೆಟ್ ಅವರು ಕೆಲವೊಮ್ಮೆ ಪೊಲೀಸರ ಲಾಠಿಗಳನ್ನು ಕಿತ್ತುಕೊಂಡು ಬಿಸಾಡುತ್ತಿದ್ದರಂತೆ. ಪೊಲೀಸ್ ಠಾಣೆಗಳ ಬಳಿ ತೆರಳಿ ಅಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪರಾರಿಯಾಗುತ್ತಿದ್ದರಂತೆ. ತನ್ನ ತಾಯಿ ಮನೆಯಲ್ಲಿ ಕೂಡಿ ಹಾಕಿದ್ದರೂ ಕೂಡ ಛಾವಣಿ ಹೆಂಚು ಇಳಿಸಿ ಹೊರಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗುವುದು ಸಾಮಾನ್ಯವಾಗಿತ್ತು ಎಂದು ಲಲಿತಾ ಟಾಗೆಟ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಪೊಲೀಸರ ವಿರುದ್ಧ ಘೋಷಣೆ; "ಆಗ ನನಗೆ ಬಹಳ ಧೈರ್ಯ, ಈ ದೇಶ ನನ್ನದು, ಈ ಊರು ನಮ್ಮದು, ಆಕಾಶವೂ ನಮ್ಮದು, ಭೂಮಿ ನನ್ನದೇ ಎಂದು ಘೋಷಣೆ ಕೂಗುತ್ತಿದ್ದೆ. ಚಿಕ್ಕ ವಯಸ್ಸಾಗಿದ್ದರಿಂದ ಪೊಲೀಸರು ಹೊಡೆಯುತ್ತಿರಲಿಲ್ಲ. ಆದ್ದರಿಂದ ನಾನು ರಂಪಾಟ ಮಾಡುತ್ತಿದ್ದೆ. ಈಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ಖುಷಿ ಕೊಡುತ್ತದೆ" ಎಂದು ತಮ್ಮ ಹೋರಾಟದ ಸಂಗತಿಗಳನ್ನು ನೆನೆಪಿಸಿಕೊಂಡರು.

"ದೇಶ ನಮ್ಮದು-ಇಲ್ಲಿನ ಜನರು ನಮ್ಮವರೇ, ವೈರತ್ವ-ಶತೃತ್ವ ಮರೆತು ಒಂದಾಗಿ ಬಾಳೋಣ, ಆ ಕಾಲಕ್ಕಿಂತ ಈಗ ಎಲ್ಲರೂ ಜಾಗೃತರಾಗಿದ್ದಾರೆ, ದೇಶಾಭಿಮಾನ ಎಲ್ಲರಲ್ಲೂ ಇದೆ, ಭಾರತದಲ್ಲಿ ಹುಟ್ಟಿರುವುದೇ ನನ್ನ ಪುಣ್ಯ" ಎಂದು ಲಲಿತಾ ಟಾಗೆಟ್ ತಿಳಿಸಿದ್ದಾರೆ.
ಇನ್ನು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಸೇರಿದಂತೆ ಜನಾರ್ದನ ಪ್ರತಿಷ್ಠಾನ ಮುಂತಾದ ಸಂಘ-ಸಂಸ್ಥೆಗಳು ಲಲಿತಾ ಟಾಗೆಟ್ ಅವರಿಗೆ ಸನ್ಮಾನಿಸಿ, ತಿರಂಗ ಕೊಟ್ಟು ಗೌರವಿಸಿದ್ದಾರೆ.












Click it and Unblock the Notifications