ಎಲ್ಲೇಮಾಳದಲ್ಲಿ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಮೂಕ ಯುವಕ
ಚಾಮರಾಜನಗರ, ಸೆಪ್ಟೆಂಬರ್.16: ಮೂಕ ಯುವಕನೊಬ್ಬ ಮನನೊಂದು ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎಲ್ಲೇಮಾಳ ಗ್ರಾಮದಲ್ಲಿ ನಡೆದಿದೆ. ಆದರೆ ತಕ್ಷಣವೇ ಆತನ ಮನವೊಲಿಸಿ ಕೆಳಗಿಳಿಸುವಲ್ಲಿ ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಹನೂರು ಸಮೀಪದ ಚಿಗತಾಪುರ ಗ್ರಾಮದ ಪರಶಿಮೂರ್ತಿ ಎಂಬುವರ ಪುತ್ರ ಗುರುರಾಜ್ (25) ಎಂಬಾತನೇ ಟವರ್ ಏರಿ ಆತಂಕ ಸೃಷ್ಠಿ ಮಾಡಿದವ. ಈತ ಮನೆಯವರ ಜೊತೆಯಲ್ಲಿ ಜಗಳ ಮಾಡಿಕೊಂಡು ಎಲ್ಲೇಮಾಳ ಗ್ರಾಮದಲ್ಲಿರುವ ಏರ್ಟೆಲ್ ಟವರ್ ಏರುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿ ಮಾಡಿದ್ದ.
ಈತನನ್ನು ಕೆಳಗೆ ಇಳಿಯುವಂತೆ ಗ್ರಾಮಸ್ಥರು ಹೇಳಿದರೂ ಇಳಿಯದೆ ಅಲ್ಲಿಯೇ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೈಸನ್ನೆ ಮೂಲಕ ಬೆದರಿಕೆ ಹಾಕಿದ್ದಾನೆ.

ಈ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡಿ ಗ್ರಾಮದಲ್ಲಿದ್ದ ಜನ ಸ್ಥಳದಲ್ಲಿ ನೆರೆದಿದ್ದಾರೆ. ಅಷ್ಟರಲ್ಲೇ ಮಾಹಿತಿ ತಿಳಿದು ಸ್ಥಳಕ್ಕೆ ಹನೂರು ಅಗ್ನಿಶಾಮಕ ದಳದ ಅಧಿಕಾರಿ ಶೇಷ ಮತ್ತು ಸಿಬ್ಬಂದಿ ಆನಂದ್, ಪ್ರವೀಣ್, ನಾಗೇಶ್, ಗಿರೀಶ್ ಆಗಮಿಸಿದ್ದು, ಅಷ್ಟರಲ್ಲೇ ಆತ ತುದಿ ತಲುಪಿ ಕುಳಿತಿದ್ದನು.

ಇದನ್ನು ನೋಡಿದ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ಕೈಸನ್ನೆಯ ಮೂಲಕ ಆತನ ಮನವೊಲಿಸಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದರಿಂದ ಕೊನೆಗೂ ಆತ ತಾನು ಏರಿದ್ದ 250 ಅಡಿ ಎತ್ತರದ ಟವರ್ನಿಂದ ಕೆಳಕ್ಕೆ ಇಳಿದಿದ್ದಾನೆ. ಬಳಿಕ ಆತನನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾದರಲ್ಲದೆ, ಸ್ಥಳದಲ್ಲಿ ಉಂಟಾಗಿದ್ದ ಆತಂಕದ ವಾತಾವರಣವನ್ನು ತಿಳಿಗೊಳಿಸಿದರು.












Click it and Unblock the Notifications