ಚಾಮರಾಜನಗರ ಕೆ ಎಸ್ ಆರ್ ಟಿಸಿ ಡಿಪೋಗೆ ಕನ್ನ: 28 ಲಕ್ಷ ಕಳವು
ಚಾಮರಾಜನಗರ, ಅಕ್ಟೋಬರ್ 18: ಚಾಮರಾಜನಗರದ ಕೆಎಸ್ಆರ್ ಟಿಸಿ ಬಸ್ ಡಿಪೋದಲ್ಲಿ ಮೂರು ದಿನಗಳಿಂದ ಬಸ್ ಪ್ರಯಾಣಿಕರಿಂದ ಸಂಗ್ರಹಿಸಿದ್ದ ಸುಮಾರು 28 ಲಕ್ಷ ರುಪಾಯಿಯನ್ನು ಖತರ್ನಾಕ್ ಕಳ್ಳರು ಕದ್ದ ಘಟನೆ ಬೆಳಕಿಗೆ ಬಂದಿದೆ. ನಗರದ ಎಪಿಎಂಸಿ ಬಳಿ ಇರುವ ಕೆಎಸ್ಆರ್ ಟಿಸಿ ಬಸ್ ಡಿಪೋಗೆ ಲಗ್ಗೆಯಿಟ್ಟ ಕಳ್ಳರು, ಹಣ ಸಂಗ್ರಹಿಸಿಟ್ಟಿದ್ದ ಅಲ್ಮೇರಾ ತೆರೆದು, 28 ಲಕ್ಷ ಕಳವು ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಕೆಎಸ್ಆರ್ ಟಿಸಿ ಬಸ್ ಡಿಪೋದಲ್ಲಿ ನಗದು ಶಾಖೆ ಸಿಬ್ಬಂದಿ ಬಾಗಿಲು ತೆರದು ನೋಡಿದಾಗ ಕಳ್ಳತನವಾಗಿರುವ ಅಂಶ ಬೆಳಕಿಗೆ ಬಂದಿದೆ. ಕೂಡಲೇ ಇಲಾಖೆಯ ವಿಭಾಗೀಯ ಅಧಿಕಾರಿಗಳಿಗೆ ಮತ್ತು ಡಿಪೋ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಕೆಎಸ್ಆರ್ ಟಿಸಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದರು.[ಬೆಳಗಾವಿ: ಆನೆ ದಂತ, ಹುಲಿ ಚರ್ಮ ಸೇರಿ ಕೋಟ್ಯಂತರ ರುಪಾಯಿ ವಸ್ತು ವಶ]
ಶ್ವಾನದಳದೊಂದಿಗೆ ಬಂದ ಪೊಲೀಸರು ಪ್ರಕರಣದ ಬಗ್ಗೆ ಭದ್ರತಾ ವಿಭಾಗ ಮತ್ತು ನಗದು ಶಾಖೆಯ ಸಿಬ್ಬಂದಿಯನ್ನು ವಿಚಾರಣೆ ಮಾಡಿದರು. ಬಸ್ ಡಿಪೋದ ನಗದು ಶಾಖೆಯಲ್ಲಿ ಸರಿಯಾದ ಭದ್ರತೆ ಇಲ್ಲದಿರುವುದು ಕಳ್ಳತನಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಜತೆಗೆ ಎಲ್ಲವನ್ನೂ ತಿಳಿದ ಕೆಎಸ್ಆರ್ ಟಿಸಿ ಸಿಬ್ಬಂದಿಯೇ ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.[ಏರ್ ಫೋರ್ಸ್ ನಲ್ಲಿ ತರಬೇತಿ ಸೀಟು: ಯುವತಿಗೆ ವಂಚಿಸಿ ನಾಪತ್ತೆ]
ಎರಡು ದಿನಗಳು ಸರ್ಕಾರಿ ರಜೆ ಇದ್ದಿದ್ದರಿಂದ ಬಸ್ ಪ್ರಯಾಣದಲ್ಲಿ ಸಂಗ್ರಹವಾದ ಹಣವನ್ನು ಡಿಪೋದ ಅಲ್ಮೇರಾದಲ್ಲಿ ಇರಿಸಲಾಗಿತ್ತು, ಆದರೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಅಲ್ಲದೆ ಇಲ್ಲಿ ಸಿಸಿ ಟಿವಿ ಕ್ಯಾಮರಾ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ನಿತ್ಯವೂ ಬಸ್ ಡಿಪೋದಲ್ಲಿ ಲಕ್ಷಾಂತರ ರುಪಾಯಿಗಳ ವ್ಯವಹಾರ ನಡೆಯುತ್ತಿದ್ದರೂ ಇಲ್ಲಿ ಸಿಸಿ ಕ್ಯಾಮರಾ ಅಳವಡಿಸದಿರುವ ಬಗ್ಗೆಯೂ ಸಂಶಯ ಮೂಡಿದೆ.