ವಿಲೀನದ ಬಗ್ಗೆ ಬ್ಯಾಂಕ್ ನೌಕರರ ಆತಂಕ, ವಿಜಯ ಬ್ಯಾಂಕ್ ಸಿಇಒ ಏನೆಂದರು?
ಬೆಂಗಳೂರು, ಸೆಪ್ಟೆಂಬರ್ 20: ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಜತೆಗೆ ವಿಜಯ ಬ್ಯಾಂಕ್ ವಿಲೀನ ಆದ ನಂತರವೂ ತನ್ನದೇ ಅಸ್ಮಿತೆ ಉಳಿಸಿಕೊಳ್ಳಲಿದೆ ಎಂದು ಕಾರ್ಯನಿರ್ವಹಣಾ ನಿರ್ದೇಶಕ ಹಾಗೂ ಸಿಇಒ ಆಗಿರುವ ಶಂಕರ್ ನಾರಾಯಣನ್ ಪತ್ರ ಬರೆದು, ಸಿಬ್ಬಂದಿಗೆ ಭರವಸೆ ನೀಡಿದ್ದಾರೆ.
ಮೂರೂ ಬ್ಯಾಂಕ್ ಗಳ ವಿಲೀನಕ್ಕೆ ಸರಕಾರ ಪ್ರಸ್ತಾವ ಮಾಡಿದೆ. ಇದು ಒಂದೇ ಸಲಕ್ಕೆ ಮಾಡುವುದಕ್ಕೆ ಸಲಹೆ ಮಾಡಿರುವುದಾಗಿ ತಿಳಿಸಿದ್ದಾರೆ. ನಮ್ಮ ಬ್ಯಾಂಕ್ ನ ಸಾಮರ್ಥ್ಯವನ್ನು ಗುರುತಿಸಿ, ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕ್ ಜತೆ ಸೇರಲು ಸರಕಾರ ಪ್ರಸ್ತಾವ ಮಾಡಿದೆ. ಆದರೆ ಮೂರೂ ಬ್ಯಾಂಕ್ ತನ್ನದೇ ಗುರುತನ್ನು ಉಳಿಸಿಕೊಳ್ಳಲಿದೆ ಹಾಗೂ ಒಟ್ಟಾಗುವುದರ ಲಾಭ ಪಡೆಯಲಿವೆ ಎಂದಿದ್ದಾರೆ.
ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!
ಜಾಗತಿಕ ಮಟ್ಟದಲ್ಲಿ ಬ್ಯಾಂಕ್ ಬೆಳೆಯಲು ಹಾಗೂ ಇನ್ನೂ ಉತ್ತಮ ಸಾಧನೆ ಮಾಡಲು ಇದರಿಂದ ನೆರವಾಗುತ್ತದೆ ಎಂದು ತಮ್ಮ ಪತ್ರದಲ್ಲಿ ಅವರು ತಿಳಿಸಿದ್ದಾರೆ. ವಿಲೀನ ಪ್ರಕ್ರಿಯೆ ಹಾಗೂ ಅದನ್ನು ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಇರುವ ಗೊಂದಲ ನಿವಾರಿಸಲು ಹಾಗೂ ಸಿಬ್ಬಂದಿಯಲ್ಲಿ ಭರವಸೆ ತುಂಬಲು ಬ್ಯಾಂಕ್ ಆಡಳಿತದಿಂದ ಈ ಪ್ರಯತ್ನ ನಡೆದಿದೆ.
ಕಾರ್ಪೊರೇಟ್ ಕಚೇರಿ ಹಾಗೂ ಪ್ರಾದೇಶಿಕ ಕಚೇರಿ ಸಿಬ್ಬಂದಿಯನ್ನು ಉದ್ದೇಶಿಸಿ ಮಂಗಳವಾರ ನಾರಾಯಣನ್ ವೆಬ್ ಕ್ಯಾಸ್ಟ್ ಮೂಲಕ ಮಾತನಾಡಿದ್ದಾರೆ. ಮೂರೂ ಬ್ಯಾಂಕ್ ಗಳು ಪ್ರತ್ಯೇಕ ಬ್ಯಾಲೆನ್ಸ್ ಶೀಟ್ ಜತೆ ಮುಂದುವರಿಯುತ್ತವೆ ಮತ್ತು ಮೂರನ್ನೂ ಒಟ್ಟು ಮಾಡಿ, ಆ ನಂತರ ಲೆಕ್ಕ ಹಾಕಲಾಗುತ್ತದೆ ಎಂದಿದ್ದಾರೆ.
ಬ್ಯಾಂಕ್ ಗೆ ಹೊಸ ಹೆಸರು ಇಡಬಹುದಾದರೂ ಲೋಗೋ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅಂದಾಜು ವಿಜಯ ಬ್ಯಾಂಕ್ ನ ಐನೂರು ಶಾಖೆಗಳನ್ನು ಮುಚ್ಚಬಹುದು ಎಂಬುದನ್ನು ಸಹ ಅವರು ಹೇಳಿದ್ದಾರೆ. ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಕ್ಕೆ ದಕ್ಷಿಣ ಭಾರತದಲ್ಲಿ ಇರುವ ಶಾಖೆಗಳು ಕಡಿಮೆ.
ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?
ಮೊದಲಿಗೆ ದೇನಾ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್ ವಿಲೀನವಾಗಿ, ಆ ನಂತರ ಬ್ಯಾಂಕ್ ಆಫ್ ಬರೋಡದ ಜತೆ ಸೇರಿಸಲಾಗುತ್ತದೋ ಅಥವಾ ಮೂರನ್ನೂ ಒಂದೇ ಸಲಕ್ಕೆ ವಿಲೀನ ಮಾಡಲಾಗುತ್ತದೋ ಎಂಬುದು ಇನ್ನೂ ಖಾತ್ರಿ ಆಗಿಲ್ಲ. ಒಟ್ಟಾರೆ ಮೂರೂ ಬ್ಯಾಂಕ್ ಗಳಿಗೂ ಕೆಲವು ಸವಾಲುಗಳಿರುವುದು ಮಾತ್ರ ನಿಜ.
ಈ ವಿಲೀನ ಪ್ರಕ್ರಿಯೆಯಿಂದ ಬ್ಯಾಡ್ ಲೋನ್ ಸಮಸ್ಯೆಯು ನಿವಾರಣೆ ಆಗುವುದಿಲ್ಲ ಮತ್ತು ದೊಡ್ಡ ಬ್ಯಾಂಕ್ ಗಳನ್ನು ಸೃಷ್ಟಿ ಮಾಡುವುದು ಯಾರಿಗೂ ಒಳಿತಲ್ಲ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಅಭಿಪ್ರಾಯ ಪಟ್ಟಿದೆ.