ಆಫರ್ ಒಪ್ಪಿಕೊಳ್ಳಿ, ಕೇಸ್ ಕ್ಲೋಸ್ ಮಾಡಿ: ಸರ್ಕಾರಕ್ಕೆ ಮಲ್ಯ ಮನವಿ
ಲಂಡನ್, ಮೇ 14: ಉದ್ದೇಶಪೂರ್ವಕ ಸುಸ್ತಿದಾರ, ದೇಶಭ್ರಷ್ಟ ಆರ್ಥಿಕ ಅಪರಾಧಿ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಕೊರೊನಾವೈರಸ್ ಭೀತಿಯ ನಡುವೆ ಮತ್ತೊಮ್ಮೆ ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾತುಕತೆಗೆ ಮುಂದಾಗಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರು ಪಾವತಿಸಲು ಸಿದ್ಧ ನನ್ನ ಮೇಲಿನ ಎಲ್ಲಾ ಕೇಸ್ ಕ್ಲೋಸ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪಿಎಸ್ಯು ಬ್ಯಾಂಕುಗಳಿಗೆ ಶೇ 100ರಷ್ಟು ಪಾವತಿಸಲು ಸಿದ್ಧನಿರುವುದಾಗಿ ನಾನು ಪ್ರತಿ ಬಾರಿ ಹೇಳಿದಾಗಲೂ ಮಾಧ್ಯಮಗಳು, ನಾನು ಇಂಗ್ಲೆಂಡ್ನಿಂದ ಭಾರತಕ್ಕೆ ಗಡಿಪಾರಾಗುವುದಕ್ಕೆ ಭಯಭೀತನಾಗಿದ್ದೇನೆ, ಸುಳ್ಳು ಹೇಳುತ್ತಿದ್ದೇನೆ ಎಂದು ಹೇಳುತ್ತವೆ. ನಾನು ಲಂಡನ್ ಅಥವಾ ಭಾರತದ ಜೈಲಿನಲ್ಲಿಯೇ ಇರಲಿ, ಸಾಲ ಮರಳಿಸಲು ಬಯಸಿದ್ದೇನೆ. ಆದರೆ, ನಾನು ಆಫರ್ ಮಾಡಿರುವುದನ್ನು ಮೊದಲು ತೆಗೆದುಕೊಳ್ಳಲು ಬ್ಯಾಂಕುಗಳು ಏಕೆ ಸಿದ್ಧವಿಲ್ಲ? ಎಂದು ಪ್ರಶ್ನಿಸಿದ್ದಾರೆ.
ವಿಜಯ್ ಮಲ್ಯ ಅವರಿಂದ 1, 145 ಬಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್(1 GBP = 94.7784 INR) ಸಾಲದ ಮೊತ್ತ ಹಿಂಪಡೆಯಲು ಎಸ್ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಯತ್ನಿಸುತ್ತಿದೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ಮಲ್ಯರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ, ಸಿಬಿಐ ಮನವಿ ಸಲ್ಲಿಸಿವೆ. ಸುಮಾರು 9,000 ಕೋಟಿ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಮಲ್ಯ ಪ್ರಮುಖ ಆರೋಪಿಯಾಗಿದ್ದಾರೆ.
|
ಮಲ್ಯ ಮಾಡಿರುವ ಟ್ವೀಟ್ ಏನು?
ಕೋವಿಡ್19 ಆರ್ಥಿಕ ಪ್ಯಾಕೇಜ್ ಬಗ್ಗೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಎಷ್ಟು ಬೇಕಾದರೂ ಕರೆನ್ಸಿ ಅವರು ಪ್ರಿಂಟ್ ಮಾಡಬಹುದು, ಆದರೆ, ನನ್ನಂಥ ಸಣ್ಣ ಕೊಡುಗೆದಾರನೊಬ್ಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಶೇ 100ರಷ್ಟು ಸಾಲ ಮರು ಪಾವತಿ ಮಾಡುತ್ತೇನೆ ಎಂದರೆ ಒಪ್ಪುತ್ತಿಲ್ಲವೇಕೆ? ಷರತ್ತಿಲ್ಲದೆ ನನ್ನ ದುಡ್ಡು ತೆಗೆದುಕೊಳ್ಳಿ ಹಾಗೂ ಕ್ಲೋಸ್ ಮಾಡಿ ಎಂಬರ್ಥದಲ್ಲಿ ಮಲ್ಯ ಟ್ವೀಟ್ ಮಾಡಿದ್ದಾರೆ.

ಮಲ್ಯ ಪರ ವಕೀಲ ಫಿಲೀಫ್ ಮಾರ್ಷಲ್
ನನ್ನ ಕಕ್ಷಿದಾರರನ್ನು ಬೇಕಂತಲೇ ದಿವಾಳಿ ಎಂದು ಘೋಷಿಸಿ, ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಭಾರತ ಹಾಗೂ ಯುಕೆಯಲ್ಲಿ ಸರಿಯಾಗಿ ವಿಚಾರಣೆ ನಡೆಸಬೇಕಿದೆ. ಬ್ಯಾಂಕ್ ಸಾಲ ಮರುಪಾವತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಆದರೆ, ಒಂದೇ ಸಾರಿ ಎಲ್ಲವನ್ನು ತೀರಿಸುವ ನಮ್ಮ ಆಫರ್ ಗೆ ಬ್ಯಾಂಕುಗಳು ಒಪ್ಪಿಲ್ಲ. ಜೊತೆಗೆ ಜಾರಿ ನಿರ್ದೇಶನಾಲಯದ ಪ್ರವೇಶದಿಂದ ಈಗ ಸಾಲ ಮರು ಪಾವತಿ ಕಷ್ಟಸಾಧ್ಯವಾಗಿದೆ ಎಂದು ಮಲ್ಯ ಪರ ವಕೀಲ ಫಿಲೀಫ್ ಮಾರ್ಷಲ್ ಎಂದು ಪ್ರತಿಕ್ರಿಯಿಸಿದ್ದಾರೆ.

ಮಲ್ಯ ವಿರುದ್ಧ ತಿರುಗಿಬಿದ್ದಿರುವ ಬ್ಯಾಂಕ್ ಗಳು
ವಿಜಯ್ ಮಲ್ಯ ಅವರನ್ನು ದಿವಾಳಿ ಎಂದು ಘೋಷಣೆ ಮಾಡುವಂತೆ ಬ್ಯಾಂಕ್ ಆಫ್ ಬರೋಡ, ಕಾರ್ಪೋರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಬ್ರಿಟನ್ ಹೈಕೋರ್ಟ್ ಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಜಯ್ ಮಲ್ಯ ಈ ಹಿಂದೆ ತಮ್ಮ ಮಾಲೀಕತ್ವದ ಕಿಂಗ್ ಫಿಶರ್ ಸಂಸ್ಥೆಯ ಸಾಲವನ್ನು ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಲಾಗದೆ, ಭಾರತೀಯ ಬ್ಯಾಂಕ್ ಗಳಿಗೆ ವಂಚಿಸಿದ್ದಾರೆ. ಅವರ ವಿರುದ್ದ ವಂಚನೆ ಮತ್ತು ಅಕ್ರಮ ಹಣ ಹಣ ವರ್ಗಾವಣೆ ಆರೋಪವಿದೆ.

ಮಲ್ಯಗೆ ವರವಾಗಿರುವ ಎಂಎಲ್ ಎ ಟಿ ಒಪ್ಪಂದ
A mutual legal assistance treaty (MLAT) ಎಂದು ಕರೆಯುವ ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಂಡ್ 1995ರಲ್ಲಿ ಸಹಿ ಮಾಡಿವೆ. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳಲು ಅವಕಾಶ ಇದೆ. ಇಲ್ಲಿ ತನಕ ಈ ಒಪ್ಪಂದ ಬಳಸಿಕೊಂಡು ಒಬ್ಬರನ್ನು ಮಾತ್ರ ಇಂಗ್ಲೆಂಡಿನಿಂದ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ವಿನುಭಾಯಿ ಪಟೇಲ್ ಅವರು ಗಡಿಪಾರು ಮಾಡಿದರೂ ನನ್ನ ಅಭ್ಯಂತರವಿಲ್ಲ ಎಂದಿದ್ದರಿಂದ ಕೆಲಸ ಸುಲಭವಾಗಿತ್ತು. ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರಲು ಇಲ್ಲಿನ ತನಿಖಾ ಸಂಸ್ಥೆಗಳಿಗೆ ಕನಿಷ್ಟ 10 ರಿಂದ 15 ವರ್ಷಗಳಾದರೂ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications