Vande Bharat Yatri Seva Anubandh: ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಯೋಜನೆ, ಏನಿದು?- ಇಲ್ಲಿದೆ ಮಾಹಿತಿ
ನವದೆಹಲಿ, ನವೆಂಬರ್, 28: ದೇಶದಲ್ಲಿ ಅತಿ ವೇಗದ ಐಷರಾಮಿ ವಂದೇ ಭಾರತ್ ರೈಲು ತುಂಬಾ ಜನಪ್ರಿಯತೆಯನ್ನು ಪಡೆಯುತ್ತಲೇ ಇದ್ದು, ಇದೀಗ ಈ ರೈಲುಗಳ ಸೇವಾ ಗುಣಮಟ್ಟ ಹೆಚ್ಚಿಸುವ ಹಿನ್ನೆಲೆ ಭಾರತೀಯ ರೈಲ್ವೆ ಹೊಸ ಅಭಿಯಾನ ಪ್ರಾರಂಭ ಮಾಡಲು ಮುಂದಾಗಿದೆ. "ಯಾತ್ರಿ ಸೇವಾ ಅನುಬಂಧ" ಅನ್ನುವ ಹೆಸರಿನ ಈ ಅಭಿಯಾನದಡಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ನಿರ್ಧರಿಸಿದೆ. ಹಾಗದರೆ ಈ ಅಭಿಯಾನದಿಂದ ಪ್ರಯಾಣಿಕರಿಗೆ ಏನೆಲ್ಲ ಅನುಕೂಲಗಳಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಅಭಿಯಾನವು ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯಗಳಿಗಾಗಿ ಹೆಚ್ಚಿನ ಆಯ್ಕೆಗಳನ್ನು ನೀಡಲು ಮತ್ತು ಮೌಲ್ಯವರ್ಧಿತ ಸೇವೆಗಳ ಮೂಲಕ ಪ್ರಯಾಣದ ಅನುಕೂಲತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಯಾತ್ರಿ ಸೇವಾ ಅನುಬಂಧ ಅನ್ನುವ ಅಭಿಯಾನದಡಿ ಪ್ರಯಾಣಕರಿಗೆ ಮೌಲ್ಯ ವರ್ಧಿತ ಸೇವೆಗಳ ವೆಚ್ಚ ಕಡಿತ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ.

ವಂದೇ ಭಾರತ್ ರೈಲುಗಳ ಪೈಕಿ 6 ರೈಲುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿ ಮಾಡಲು ನಿರ್ಧಾರ ಮಾಡಿದೆ. ಒಂದು ವೇಳೆ ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ದೇಶಾದ್ಯಂತ ಎಲ್ಲ ವಂದೇ ಭಾರತ್ ರೈಲುಗಳಲ್ಲೂ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಈ ಅಭಿಯಾನದಡಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣಿಕರಿಗೆ ಆಹಾರ, ಪಾನೀಯ ಸೇರಿದಂತೆ ಹಲವು ಆಯ್ಕೆಗಳು ಲಭ್ಯವಾಗಲಿವೆ. ಅಲ್ಲದೆ ಇದರ ಜೊತೆ ಸಾಕಷ್ಟು ಮೌಲ್ಯ ವರ್ಧಿತ ಸೇವೆಗಳು ಇರಲಿವೆ ಎಂದು ತಿಳಿಸಿದೆ.
ರೈಲು ಪ್ರಯಾಣಿಕರಿಗೆ ಇನ್ಫೋಟೈನ್ಮೆಂಟ್ ವ್ಯವಸ್ಥೆ, ಪ್ರಯಾಣಿಕ ಸ್ನೇಹಿ ಅನುಕೂಲತೆಗಳೂ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿವೆ. ರೈಲಿನ ಸ್ವಚ್ಛತಾ ವೆಚ್ಚ ತಗ್ಗಿಸೋದಕ್ಕೂ ಯಾತ್ರಿ ಸೇವಾ ಅನುಬಂಧ ಅಭಿಯಾನದಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. ಇದರ ನೇರ ಲಾಭ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಖಾಸಗಿ ಸಂಸ್ಥೆಗಳು ಪ್ರಯಾಣಿಕರಿಗೆ ಆಹಾರ ಹಾಗೂ ಪಾನೀಯ ಒದಗಿಸಲಿವೆ. ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯ ಸಿಗಲಿವೆ ಎಂದು ಭಾರತೀಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ. ಜೊತೆಗೆ ರೈಲಿನ ಬಾಗಿಲುಗಳ ನಿರ್ವಹಣೆ, ಶೌಚಾಲಯಗಳಲ್ಲಿ ನೀರು ಸೋರಿಕೆಯಂತಹ ಸಣ್ಣ ಪುಟ್ಟ ನಿರ್ವಹಣಾ ಕೆಲಸಗಳನ್ನೂ ಖಾಸಗಿ ಸಂಸ್ಥೆಯೇ ನಿರ್ವಹಣೆ ಮಾಡಲಿದೆ.
ಅಲ್ಲದೆ ಸೇವಾ ಸಂಸ್ಥೆಗಳು ಪ್ರಯಾಣಿಕರ ಅನುಕೂಲತೆಯ ದೃಷ್ಟಿಯಿಂದ ಕೋಚ್ಗಳಲ್ಲಿ ಸ್ವಚ್ಛತಾ ಕಾರ್ಯವನ್ನೂ ನಿರ್ವಹಿಸಲಿವೆ. ಭಾರತೀಯ ರೈಲ್ವೆ ನಿಗದಿಪಡಿಸಿದ ಮೆನು ಹಾಗೂ ದರದ ಅನ್ವಯವೇ ಈ ಸೇವಾ ಸಂಸ್ಥೆಗಳು ಪ್ರಯಾಣಕರಿಗೆ ಆಹಾರ ಒದಗಿಸಲಿವೆ.
ಅತಿ ಹೆಚ್ಚು ಪರವಾನಗಿ ದರ ನೀಡುವ ಕಂಪನಿಗಳಿಗೆ ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಸೇವೆ ಒದಗಿಸಲು ಅವಕಾಶ ನೀಡಲಿದೆ. ಸೇವಾ ಸಂಸ್ಥೆಗಳು ನೀಡುವ ಗುಣಮಟ್ಟ ಹಾಗೂ ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪರವಾನಗಿ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಕನಿಷ್ಟ 120 ಕೋಟಿ ರೂಪಾಯಿ ವಾರ್ಷಿಕ ಆದಾಯವಿರುವ ಕಂಪನಿ ಹಾಗೂ ಕನಿಷ್ಟ ಪಕ್ಷ 900 ನೌಕರರು ಇರುವ ಕಂಪನಿಗೆ ಗುತ್ತಿಗೆ ನೀಡಲು ಇಲಾಖೆ ತೀರ್ಮಾನ ಮಾಡಿದೆ. ಈ ಸಂಸ್ಥೆಗಳು ಆಹಾರ, ಪಾನೀಯ ಹಾಗೂ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸಿದ ಅನುಭವ ಹೊಂದಿರಬೇಕು.
ಈಗಾಗಲೇ ತೇಜಸ್, ರಾಜಧಾನಿ, ಶತಾಬ್ಧಿ ಹಾಗೂ ವಂದೇ ಭಾರತ್ ರೈಲುಗಳಲ್ಲಿ ಈ ರೀತಿಯ ಕ್ಯಾಟರಿಂಗ್ ಸೇವೆ ನೀಡುವ ಗುತ್ತಿಗೆದಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವಂದೇ ಭಾರತ್ ರೈಲುಗಳಲ್ಲಿ ಇದೇ ರೀತಿಯ ಸೇವೆಯನ್ನು ಇನ್ನಷ್ಟು ಮೌಲ್ಯ ವರ್ಧಿತ ಸೇವೆಗಳ ಜೊತೆ ಉನ್ನತೀಕರಿಸಿ ನೀಡಲು ತೀರ್ಮಾನ ಮಾಡಲಾಗಿದೆ. ಈ ಮೂಲಕ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ತಮ್ಮ ಪ್ರಯಾಣವನ್ನು ಮತ್ತಷ್ಟು ಆರಾಮದಾಯಕ ಹಾಗೂ ಮೌಲ್ಯ ವರ್ಧಿತವನ್ನಾಗಿಸಲು ಇಲಾಕೆ ನಿರ್ಧಾರ ಮಾಡಿದೆ.












Click it and Unblock the Notifications