ನಿರ್ದೇಶಕರ ವೈಫಲ್ಯ ಮುಚ್ಚಿಡಲು ಮೂರ್ತಿ ಮೇಲೆ ಆರೋಪ: ಬಾಲಕೃಷ್ಣನ್
ಬೆಂಗಳೂರು, ಆಗಸ್ಟ್ 23: ಇನ್ಫೋಸಿಸ್ ನ ನಿರ್ದೇಶಕ ಮಂಡಳಿಯು ತನ್ನ ವೈಫಲ್ಯವನ್ನು ಮರೆಮಾಚುವುದಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆಗೆ ಕಂಪೆನಿಯ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್.ನಾರಾಯಣಮೂರ್ತಿ ಅವರನ್ನು ದೂಷಿಸುತ್ತಿದೆ ಎಂದು ಕಂಪೆನಿಯ ಮಾಜಿ ಚೀಫ್ ಫೈನಾನ್ಷಿಯಲ್ ಆಫೀಸರ್ (ಸಿಎಫ್ ಒ) ವಿ.ಬಾಲಕೃಷ್ಣನ್ ಅಭಿಪ್ರಾಯ ಪಟ್ಟಿದ್ದಾರೆ.
ಕಂಪೆನಿಯ ಸುತ್ತ ಇದ್ದ ನಾರಾಯಣ ಮೂರ್ತಿ ಅವರ ಪ್ರಭಾವಳಿ ಕೂಡ ಕಣ್ಮರೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆವರು ಮಾತನಾಡಿದ್ದಾರೆ.

ನಾರಾಯಣ ಮೂರ್ತಿ ಕಂಪೆನಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಕಂಪೆನಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದೀರ್ಘಾವಧಿ ದೃಷ್ಟಿಯಿಂದ ಕಾರ್ಪೋರೇಟ್ ಆಡಳಿತ ಮತ್ತು ನಿರ್ದೇಶಕ ಮಂಡಳಿಯ ಉತ್ತರದಾಯಿತ್ವದ ಬಗ್ಗೆ ಪ್ರಶ್ನೆ ಮಾಡಿದರು ಎಂದಿದ್ದಾರೆ ಬಾಲಕೃಷ್ಣ.
ಇನ್ಫೋಸಿಸ್ ನ ಮಾಜಿ ನಿರ್ದೇಶಕರೊಬ್ಬರ ಪೈಕಿ ಒಬ್ಬರಾದ ಓಂಕಾರ್ ಗೋಸ್ವಾಮಿ ಅವರು ನಾರಾಯಣ ಮೂರ್ತಿ ಅವರ ಬಗ್ಗೆ ಬರೆದಿರುವುದನ್ನು ಪ್ರಸ್ತಾವಿಸಿದ ಅವರು, ಕೆಲ 'ಪಂಡಿತರು' ಮತ್ತು ಕಂಪೆನಿಯ ಮಾಜಿ ನಿರ್ದೇಶಕರು ನಾರಾಯಣ ಮೂರ್ತಿ ಅವರನ್ನು ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ. ಇದು ತೀರಾ ವಿಚಿತ್ರ ಎನಿಸುತ್ತದೆ ಎಂದಿದ್ದಾರೆ.
ಮೂರ್ತಿ ಅವರನ್ನು ಟೀಕಿಸುವ ಬೋರ್ಡ್ ನ ನಡೆಯು ತನ್ನ ವೈಫಲ್ಯವನ್ನು ಮುಚ್ಚಿಡಲು ತೆಗೆದುಕೊಂಡಿರುವುದು ಎಂಬುದಂತೂ ಸ್ಪಷ್ಟ ಎಂದು ಅವರು ಹೇಳಿದ್ದಾರೆ.
ಇನ್ನು ಕಂಪೆನಿಯ ಸಿಇಒ ಆಗಿ ನಂದನ್ ನಿಲೇಕಣಿಯನ್ನು ವಾಪಸ್ ಕರೆತಂದರೆ ಅವರ ಅನುಭವ, ಗ್ರಾಹಕರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದಿಂದ ಒಳ್ಳೆ ಆಯ್ಕೆಯಾಗುತ್ತದೆ ಎಂದು ಕೂಡ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications