ಬಜೆಟ್: ರಾಜ್ಯಕ್ಕೆ ಚೊಂಬು ಕೊಟ್ಟ ಕೇಂದ್ರ, 25 ಸಂಸದರನ್ನು ಅಭಿನಂದಿಸಬೇಕೇ?
ಬೆಂಗಳೂರು, ಫೆ 2: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23ರ ಬಜೆಟ್ ನಿರಾಶಾದಾಯಕ ಬಜೆಟ್ ಎಂದು ವಿರೋಧ ಪಕ್ಷದವರು ವ್ಯಾಖ್ಯಾನಿಸಿದ್ದಾರೆ. ಆಡಳಿತ ಪಕ್ಷದವರು ಕಳಪೆ ಬಜೆಟ್ ಆಗಿದ್ದರೂ ಅತ್ಯುತ್ತಮ ಬಜೆಟ್ ಎಂದು, ಉತ್ತಮ ಬಜೆಟ್ ಆಗಿದ್ದರೂ ಉಪಯೋಗವಿಲ್ಲದ ಬಜೆಟ್ ಎಂದು ವಿರೋಧ ಪಕ್ಷದವರು ಟೀಕಿಸುವುದು ಸಹಜ.
ಸಾಮಾನ್ಯವಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರ ಅಧಿಕಾರದಲ್ಲಿದ್ದರೆ, ಜೊತೆಗೆ ಹೆಚ್ಚು ಸಂಸದರನ್ನು ದೆಹಲಿಗೆ ಕಳುಹಿಸಿದ್ದರೆ, ಕೇಂದ್ರದ ಅನುದಾನಗಳಲ್ಲಿ ತಾರತಮ್ಯ ಆಗುವ ಸಾಧ್ಯತೆ ಕಮ್ಮಿ. ಆದರೆ, 25 ಸಂಸದರನ್ನು ಕಳುಹಿಸಿದ್ದರೂ, ಕರ್ನಾಟಕಕ್ಕೆ ವಿಶೇಷ ಮನ್ನಣೆ ಏನೂ ಕೇಂದ್ರದಿಂದ ಸಿಕ್ಕಿಲ್ಲ ಎನ್ನುವುದು ಸ್ಪಷ್ಟ.
ಪ್ರಸಕ್ತ ಸಾಲಿನ ಬಜೆಟಿನಲ್ಲಿ ಪ್ರಮುಖವಾಗಿ ಉಲ್ಲೇಖವಾದ ಅಂಶವೇನೆಂದರೆ ಅದು ನದಿ ಜೋಡಣೆ. ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಚರ್ಚೆಯಲ್ಲಿದ್ದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಬಜೆಟ್ ನಲ್ಲಿ ಹಣ ತೆಗೆದಿಡಲಾಗಿದೆ. "5 ನದಿಗಳ ಜೋಡಣೆಗೆ ಕೇಂದ್ರ ಬಜೆಟ್ ನಲ್ಲಿ 44,605 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತದೆ" ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ನದಿ ಜೋಡಣೆಯಿಂದ ಕರ್ನಾಟಕಕ್ಕೆ ಏನೇನೂ ಪ್ರಯೋಜನವಿಲ್ಲ ಎನ್ನುವುದು ನೀರಾವರಿ ತಜ್ಞರು ಅಭಿಪ್ರಾಯ ಪಡುತ್ತಾರೆ. ಯಾಕೆಂದರೆ ಈ ಯೋಜನೆಯಿಂದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಹೆಚ್ಚಿನ ಲಾಭವೇ ಹೊರತು, ಕರ್ನಾಟಕಕ್ಕೆ ಇಲ್ಲ ಎನ್ನುವುದು. "ಎಲ್ಲ ರಂಗದಲ್ಲೂ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ ಹಾಗೂ ಕರ್ನಾಟಕದ ಹೆಸರನ್ನೂ ಪ್ರಸ್ತಾಪ ಮಾಡದಂತಹ ಬಜೆಟ್, ರಾಜ್ಯದ 25 ಸಂಸದರನ್ನು ಮತ್ತು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ವಿಶೇಷ ಆದ್ಯತೆಯನ್ನು ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಮೂಲಭೂತ ಸೌಕರ್ಯ ಮತ್ತು ರೈಲ್ವೇ ವಿಭಾಗದಲ್ಲಿ ಪ್ರಾತಿನಿಧ್ಯತೆ ಸಿಗಬಹುದು ಎನ್ನುವ ಅಂದಾಜಿನಲ್ಲಿತ್ತು ರಾಜ್ಯ ಸರಕಾರ. ವಿವಿಧ ಇಲಾಖೆಗಳಿಗೆ ಕೇಂದ್ರದಿಂದ ಬರುವ ಅನುದಾನವನ್ನು ಸರಕಾರ ಬಹುಪಾಲು ನೆಚ್ಚಿಕೊಂಡಿತ್ತು. ಆದರೆ, ಬಜೆಟಿನಲ್ಲಿ ರಾಜ್ಯ ಬಯಸಿದ್ದೆಲ್ಲಾ ಸಿಗಲಿಲ್ಲ ಎನ್ನುವುದು ಸತ್ಯ. ಆದರೆ, ಇದನ್ನು ಬಹಿರಂಗವಾಗಿ ಹೇಳುವ ಪರಿಸ್ತಿತಿಯಲ್ಲಿ ಮುಖ್ಯಮಂತ್ರಿಗಳಿಲ್ಲ. (ಚಿತ್ರ: ಪಿಟಿಐ)

ಸಿಎಂ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿ
ದೇಶದ ಆರ್ಥಿಕ ವ್ಯವಸ್ಥೆಗೆ ಪ್ರಮುಖ ಪಾಲುದಾರ ನಗರವಾಗಿರುವ ಬೆಂಗಳೂರಿಗೆ ಬಜೆಟಿನಲ್ಲಿ ವಿಶೇಷ ಮಾನ್ಯತೆ ಏನೂ ಸಿಕ್ಕಿಲ್ಲ. ನಿಮ್ಹಾನ್ಸ್ ಸಂಸ್ಥೆಯಲ್ಲಿ ಟೆಲಿ ಮೆಂಟಲ್ ಆರೋಗ್ಯ ಕಾರ್ಯಕ್ರಮಕ್ಕೆ ನೋಡಲ್ ಕೇಂದ್ರ ಆರಂಭ ಮಾಡುವ ವಿಚಾರ ಬಿಟ್ಟರೆ, ನಗರಕ್ಕೆ ಹೊಸ ಯೋಜನೆಗಳು ಘೋಷಣೆಯಾಗಿಲ್ಲ. ದೇಶದ ಜಿಎಸ್ಟಿ ಪಾವತಿ ನಗರಗಳ ಪೈಕಿ ಬೆಂಗಳೂರು ಮುಂಚೂಣಿಯಲ್ಲಿ ಬರುವುದರಿಂದ, ಹಲವು ಅಭಿವೃದ್ದಿ ಕಾರ್ಯಕಳಿಗೆ ಅನುದಾನ ನೀಡುವಂತೆ ಸಿಎಂ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದರು. (ಚಿತ್ರ: ಪಿಟಿಐ)
Recommended Video

ರಸಗೊಬ್ಬರ ಸಬ್ಸಿಡಿಗೆ ನೀಡುವ ಅನುದಾನದಲ್ಲಿ ಶೇಕಡಾ 25 ರಷ್ಟು ಕಡಿತ
ಮನಮೋಹನ್ ಸಿಂಗ್ ಅವಧಿಯಿಂದಲೂ ಮಾಸಿಕ ಸಂಬಳದಾರರ ಸ್ಲ್ಯಾಬ್ನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಈ ಬಾರಿಯಾದರೂ, ಕೋವಿಡ್ ನಿಂದಾಗಿ ಸ್ವಲ್ಪಮಟ್ಟಿನ ನಿರಾಳತೆ ಸಿಗಬಹುದು ಎಂದು ಅಂದಾಜಿಸಲಾಗಿತ್ತು, ಅದು ಹುಸಿಯಾಗಿದೆ. ಹೊಸ ಉದ್ಯೋಗ ಸೃಷ್ಟಿಸುವ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಬಜೆಟಿನಲ್ಲಿ ಸಿಗಲಿಲ್ಲ. ರಸಗೊಬ್ಬರ ಸಬ್ಸಿಡಿಗೆ ನೀಡುವ ಅನುದಾನದಲ್ಲಿ ಶೇಕಡಾ 25 ರಷ್ಟು ಕಡಿತ ಆಗಿರುವುದು ಕೃಷಿ ವಲಯಕ್ಕೆ ಪೆಟ್ಟು ಬೀಳುವ ಸಾಧ್ಯತೆಯಿದೆ.
|
ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಲೇವಡಿ
"ದೇಶದಲ್ಲಿ ನಿರುದ್ಯೋಗದ ಪ್ರಮಾಣ ಐತಿಹಾಸಿಕ ಮೈಲಿಗಲ್ಲನ್ನು ತಲುಪಿರುವ ಸಂಧರ್ಭದಲ್ಲಿ ಮಂಡಿಸಲಾಗಿರುವ ಕೇಂದ್ರ ಆಯವ್ಯಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ಯಾವುದೇ ಪ್ರೋತ್ಸಾಹಕರ ಯೋಜನೆಗಳನ್ನು ಘೋಷಿಸದೇ ಇರುವುದು ವಿಪರ್ಯಾಸ. ಉದ್ಯೋಗಾವಕಾಶ ಹೆಚ್ಚಿಸಲು ಬಡತನ ಕಡಿಮೆ ಮಾಡಲು ಯಾವುದೇ ಯೋಜನೆಗಳನ್ನು ಘೋಷಿಸದ ಸಪ್ಪೆ ಬಜೆಟ್" ಎಂದು ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.













Click it and Unblock the Notifications