ಉದ್ಯೋಗ ಕಡಿತ ಕುರಿತಂತೆ ಟಿಸಿಎಸ್ ಸಂಸ್ಥೆಯಿಂದ ಮಹತ್ವದ ಘೋಷಣೆ
ಬೆಂಗಳೂರು, ಏಪ್ರಿಲ್ 17: ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ 4.5 ಲಕ್ಷ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿದೆ. ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಕಾರಣ ಸಂಸ್ಥೆಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ ಎಂದು ಘೋಷಿಸಿದೆ.
ಉತ್ತಮ ಲಾಭದೊಂದಿಗೆ ಮಾರ್ಚ್ ತ್ರೈಮಾಸಿಕಕ್ಕೆ ಟಿಸಿಎಸ್ ಲಗ್ಗೆ ಇಟ್ಟಿದೆ. ಕೊರೊನಾವೈರಸ್ ನಿಂದಾಗಿ ಕಳೆದ ತ್ರೈಮಾಸಿಕದಲ್ಲಿ ಆದಾಯಕ್ಕೆ ಭಾರಿ ಪೆಟ್ಟು ಬಿದ್ದಿದೆ. ಈ ಅವಧಿಯಲ್ಲಿ ನೀಡಿದ ಆಫರ್ ಗಳನ್ನು ನಾವು ಗೌರವಿಸುತ್ತೇವೆ. ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಟಿಸಿಎಸ್ ಎಂಡಿ ಹಾಗೂ ಸಿಇಒ ರಾಜೇಶ್ ಗೋಪಿನಾಥನ್ ತಿಳಿಸಿದರು.
ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಮಾತನಾಡಿ, ಸುಮಾರು 40,000 ಆಫರ್ ಗಳನ್ನು ಫ್ರೆಶರ್ಸ್ ಗೆ ನೀಡಲಾಗಿದ್ದು, ಈ ವರ್ಷದಲ್ಲೇ ಅವರನ್ನು ಸಂದರ್ಶನದ ಮೂಲಕ ಸಂಸ್ಥೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ. ಆದರೆ, ಸದ್ಯಕ್ಕೆ ಉದ್ಯೋಗಿಗಳಿಗೆ ಸಂಬಳ ಏರಿಕೆ ಮಾಡುವುದಿಲ್ಲ, ಉದ್ಯೋಗ ಕಡಿತ ಇರುವುದಿಲ್ಲ. ಸಂಸ್ಥೆಯ ಅಟ್ರಿಷನ್ ದರ ಶೇ 12.1 ರಷ್ಟಿದೆ. ಭಾರತದಲ್ಲಿ 3.55 ಲಕ್ಷ ಉದ್ಯೋಗಿಗಳಿದ್ದು, ಶೇ 90 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕರ್ನಾಟಕದಲ್ಲಿಂದು ಐಟಿ -ಬಿಟಿ ಸಚಿವ ಡಾ. ಅಶ್ವಥ ನಾರಾಯಣ ಅವರು ಐಟಿ ಬಿಟಿ ಮುಖ್ಯಸ್ಥರ ಜೊತೆ ಸಭೆ ನಡೆಸಿ "ಯಾವುದೇ ಹೊಸ ಪ್ರಾಜೆಕ್ಟ್ ಸಿಗುತ್ತಿಲ್ಲ, ಸಂಸ್ಥೆಯ ಆದಾಯ ಕುಸಿದಿದೆ ಎಂಬ ಕಾರಣಕ್ಕೆ ಮುನ್ಸೂಚನೆ ನೀಡದೆ ಸಂಸ್ಥೆ ಬಾಗಿಲು ಮುಚ್ಚುವುದು, ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದು ಸರಿಯಲ್ಲ, ಇಂಥ ಸಂದರ್ಭದಲ್ಲಿ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗಲಿದೆ. ಉದ್ಯೋಗ ಕಡಿತದ ಬದಲು ಸಂಬಳ ಕಡಿತ ಮಾಡಿ, ಅಥವಾ ಬೇರೆ ಮಾರ್ಗ ಕಂಡುಕೊಳ್ಳಿ ಎಂದು ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications