ಆರ್ ಬಿಐ ಸುದೀರ್ಘ ಸಭೆ ಅಂತ್ಯ: ಮಾರುಕಟ್ಟೆಗೆ ಬರಲಿದೆ 8 ಸಾವಿರ ಕೋಟಿ
ಮುಂಬೈ, ನವೆಂಬರ್ 19: ಸೋಮವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಗಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಂಡಳಿಯ ಸುದೀರ್ಘ ಸಭೆ, ರಾತ್ರಿ ವೇಳೆಗೆ ಕೊನೆಗೂ ಅಂತ್ಯಗೊಂಡಿದೆ.
ಕೇಂದ್ರ ಸರ್ಕಾರ ಮತ್ತು ಆರ್ ಬಿಐ ನಡುವಿನ ಮನಸ್ತಾಪ-ತಿಕ್ಕಾಟದ ಕಾರಣ ಆರ್ಥಿಕ ವಲಯದಲ್ಲಿ ಅನೇಕ ಸಮಸ್ಯೆಗಳು ತಲೆದೋರಿದ್ದವು.
ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜಿನಾಮೆ ನೀಡಲಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಈ ನಡುವೆ ಕೇಂದ್ರ ಸರ್ಕಾರ ಸತತ ಸಭೆಗಳನ್ನು ನಡೆಸಿ ಸಂಘರ್ಷಕ್ಕೆ ತೇಪೆ ಹಚ್ಚಲು ಪ್ರಯತ್ನಿಸಿತ್ತು. ಹೀಗಾಗಿ ಸೋಮವಾರದ ಸಭೆ ಮಹತ್ವ ಪಡೆದುಕೊಂಡಿತ್ತು.
ಕೇಂದ್ರದ ಸತತ ಒತ್ತಡದ ಬಳಿಕ ಆರ್ ಬಿಐ ಮುಕ್ತ ಮಾರುಕಟ್ಟೆಗೆ 8 ಸಾವಿರ ಕೋಟಿ ರೂ.ಗಳ ಬಿಡುಗಡೆಯನ್ನು ಹೆಚ್ಚಿಸಲು ಒಪ್ಪಿಕೊಂಡಿದೆ.

ಮಾರುಕಟ್ಟೆಗೆ ಹೆಚ್ಚಿನ ನಗದು ಪೂರೈಕೆ ಮಾಡುವುದು ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷಗಳಲ್ಲಿ ಒಂದು ಅಂಶವಾಗಿತ್ತು.
ಸಭೆಯಲ್ಲಿ ಊರ್ಜಿತ್ ಪಟೇಲ್ ಮತ್ತು ಅವರ ಅಧೀನದ ನಾಲ್ವರು ಅಧಿಕಾರಿಗಳು ಹಾಗೂ ಸರ್ಕಾರದಿಂದ ನೇಮಕಗೊಂಡ 13 ಮಂಡಳಿ ಸದಸ್ಯರು ಸರ್ಕಾರ ಮತ್ತು ಆರ್ ಬಿಐ ನಡುವಿನ ವಿವಾದದ ಕುರಿತಾದ ಎಲ್ಲ ಸಂಗತಿಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದರು.
ಅವುಗಳಲ್ಲಿ ಕೆಲವು ಸಮಸ್ಯೆಗಳನ್ನು ಈಗಾಗಲೇ ಅಸ್ತಿತ್ವದಲ್ಲಿ ಇರುವ ಸಮಿತಿಗಳಿಂದ ಪರಿಶೀಲನೆಗೆ ಒಳಪಡಿಸುವುದಾಗಿ ನಿರ್ಧರಿಸಲಾಯಿತು.
ಅಲ್ಲದೆ, ಆರ್ ಬಿಐ ತನ್ನಲ್ಲಿನ ಹೆಚ್ಚುವರಿ ಮೀಸಲು ಹಣವನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂಬ ಬೇಡಿಕೆಯಂತಹ ಮಹತ್ವದ ವಿಚಾರದ ಕುರಿತು ಹೊಸ ಸಮಿತಿಯನ್ನು ರಚಿಸಿ ಅದರ ಮೂಲಕ ಪರಿಶೀಲನೆಗೆ ಒಳಪಡಿಸಲಾಗುವುದು.
ಸಮಿತಿಯ ಸಂರಚನೆಯನ್ನು ಸರ್ಕಾರ ಮತ್ತು ಆರ್ ಬಿಐ ಸೇರಿ ಜಂಟಿಯಾಗಿ ನಿರ್ಧರಿಸಲಿವೆ.
ಸರ್ಕಾರಿ ಸ್ವಾಮ್ಯದ ಮೇಲೆ ಹೇರಿರುವ ಸಾಲ ನೀಡಿಕೆ ಮೇಲಿನ ನಿಯಂತ್ರಣದ ಕುರಿತು ಹಣಕಾಸು ಉಸ್ತುವಾರಿ ಮಂಡಳಿಯು ಪರಿಶೀಲನೆ ನಡೆಸಲಿದೆ.
ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ನೆರವಾಗುವ ಯೋಜನೆಗಳಿಗೆ ಆದ್ಯತೆ ನೀಡಲು ಕೂಡ ಮಂಡಳಿಯಲ್ಲಿ ಸಲಹೆ ನೀಡಲಾಯಿತು.












Click it and Unblock the Notifications