ಪೆಟ್ರೋಲ್ ಬೆಲೆ ತಟಸ್ಥ, ಡೀಸೆಲ್ ಮತ್ತೆ ದುಬಾರಿ: ಮುಂದುವರಿದ ಗೋಳು
ನವದೆಹಲಿ, ಅಕ್ಟೋಬರ್ 10: ಗಗನಕ್ಕೇರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಆಸೆ ಮುಂದುವರಿದಿದೆ! ಬುಧವಾರವೂ ತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ.
ಆದರೆ, ಈ ದಿನದ ತೈಲ ಬೆಲೆ ಗ್ರಾಹಕರಿಗೆ ಕೊಂಚ ಸಮಾಧಾನ ಮೂಡಿಸಿದೆ. ದಿನವೂ ಏರಿಕೆಯಾಗುತ್ತಿದ್ದ ಪೆಟ್ರೋಲ್ ಬೆಲೆ ಇಂದು ಸ್ಥಿರವಾಗಿರುವುದು ವಿಶೇಷ. ಹೀಗಾಗಿ ಪೆಟ್ರೋಲ್ ವಾಹನಗಳ ಮಾಲೀಕರು ತುಸು ನೆಮ್ಮದಿಯಿಂದ ಇರಬಹುದು.
ಡೀಸೆಲ್ ದರ ಮಾತ್ರ ತನ್ನ ಸಂಪ್ರದಾಯವನ್ನು ಮುಂದುವರಿಸಿದೆ. ಎಲ್ಲ ಪ್ರಮುಖ ಮೆಟ್ರೊ ನಗರಗಳಲ್ಲಿಯೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.
ತೈಲ ಬೆಲೆಯನ್ನು ನಿಯಂತ್ರಣಕ್ಕೆ ತರುವ ಕೇಂದ್ರ ಸರ್ಕಾರದ ಪ್ರಯತ್ನಗಳು ಫಲಪ್ರದವಾಗಿಲ್ಲ. ಅಬಕಾರಿ ಸುಂಕ ಇಳಿಕೆ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಂದ ದರ ಕಡಿತದಿಂದ 2.5 ರೂಪಾಯಿ ಇಳಿಕೆಯಾಗಿದ್ದು, ಪ್ರಯೋಜನವಾಗಿಲ್ಲ. ಕೆಲವು ರಾಜ್ಯಗಳಲ್ಲಿ ಐದು ರೂಪಾಯಿ ತೆರಿಗೆ ಇಳಿಕೆ ಮಾಡಿದ್ದರೂ ಮತ್ತೆ ತೈಲ ಬೆಲೆ ಆ ಇಳಿಕೆಯನ್ನು ದಾಟುವತ್ತ ಓಡುತ್ತಿದೆ.

ದೆಹಲಿಯಲ್ಲಿ ತೈಲ ಬೆಲೆ
ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ದರದಲ್ಲಿ 24 ಪೈಸೆ ಹೆಚ್ಚಳವಾಗಿದೆ. ಪ್ರತಿ ಲೀಟರ್ ಡೀಸೆಲ್ಗೆ 74.35 ರೂಪಾಯಿ ದರವಿದೆ. ಪೆಟ್ರೋಲ್ ಬೆಲೆ ಲೀಟರ್ಗೆ 83.26ರಷ್ಟಿದೆ.

ವಾಣಿಜ್ಯ ನಗರಿಯಲ್ಲಿ ದರ
ಮುಂಬೈನಲ್ಲಿ ಡೀಸೆಲ್ ದರ 25 ಪೈಸೆ ಏರಿಕೆ ಕಂಡಿದೆ. ಲೀಟರ್ ಡೀಸೆಲ್ 77.93 ರೂಪಾಯಿಗೆ ಮಾರಾಟವಾಗುತ್ತಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಳಿತ ಉಂಟಾಗಿಲ್ಲ. ಮಂಗಳವಾರದಂತೆ ಬುಧವಾರವೂ ಲೀಟರ್ಗೆ 87.73 ರೂ. ದರವಿದೆ.

ಇನ್ನೆರಡು ಮೆಟ್ರೋ ನಗರಗಳಲ್ಲಿ..
ನೆರೆಯ ಚೆನ್ನೈನಲ್ಲಿ ಡೀಸೆಲ್ ಬೆಲೆ 78.61 ರೂ. ಇದ್ದರೆ, ಪೆಟ್ರೋಲ್ ಬೆಲೆ 85.50 ರೂ. ಇದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 84.09ಕ್ಕೆ ನಿಂತಿದೆ. ಡೀಸೆಲ್ ದರ 76.20ಕ್ಕೆ ಹೆಚ್ಚಳ ಕಂಡಿದೆ.
|
ಸಿಲಿಕಾನ್ ಸಿಟಿಯಲ್ಲಿ ತೈಲ ಬೆಲೆ
ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 82.91 ರೂ.ನಷ್ಟಿದೆ. ಡೀಸೆಲ್ ಬೆಲೆಯು ಲೀಟರ್ಗೆ 74.49 ರೂಪಾಯಿಗೆ ತಲುಪಿದೆ. ಕಳೆದ ಹತ್ತು ದಿನಗಳಲ್ಲಿ ಒಮ್ಮೆ ಮಾತ್ರ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಅದು ಕೇಂದ್ರ ಸರ್ಕಾರ ಸುಂಕ ಕಡಿತ ಘೋಷಿಸಿದ ದಿನ. ಅದರ ನಂತರ ಈಗಾಗಲೇ ಸುಮಾರು 1.50 ರೂ.ನಷ್ಟು ತೈಲ ಬೆಲೆ ಏರಿಕೆಯಾಗಿದೆ.
|
ದೆಹಲಿ ಸವಾರರು ನೆರೆ ರಾಜ್ಯದಲ್ಲಿ!
ರಾಜಧಾನಿ ನವದೆಹಲಿಯಲ್ಲಿ ನೆರೆಯ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಗೆ ಹೋಲಿಸಿದರೆ ತೈಲ ಬೆಲೆ ಅಧಿಕ. ಹೀಗಾಗಿ ರಾಜಧಾನಿಯ ಗಡಿ ಭಾಗದಲ್ಲಿರುವ ವಾಹನ ಮಾಲೀಕರು ನೋಯ್ಡಾ ಮತ್ತು ಗುರುಗ್ರಾಮಗಳಿಗೆ ತೆರಳಿ ತೈಲ ಖರೀದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಕೇಂದ್ರದ ಮನವಿಯಂತೆ ತೈಲದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದರಿಂದ ಆ ರಾಜ್ಯಗಳಲ್ಲಿ ಬೆಲೆ ಇಳಿಕೆಯಾಗಿದೆ. ಹೀಗಾಗಿ ದೆಹಲಿಯ ನಾಗರಿಕರು ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಳ್ಳಲು ಎಂಟು-ಹತ್ತು ಕಿ.ಮೀ. ಪ್ರಯಾಣಿಸಲೂ ಹಿಂದೇಟು ಹಾಕುತ್ತಿಲ್ಲ.
ತೆರಿಗೆ ಕಡಿತ ಮಾಡದ ದೆಹಲಿ ಸರ್ಕಾರದ ನಿರ್ಧಾರಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications