ಈಗ ಇನ್ಫೋಸಿಸ್ ನಲ್ಲಿ ಎಲ್ಲ ಸರಿ ಇದೆ ಎಂದ ನಾರಾಯಣಮೂರ್ತಿ
ಬೆಂಗಳೂರು, ನವೆಂಬರ್ 16: "ಇನ್ಫೋಸಿಸ್ ನಲ್ಲಿ ಈಗ ಎಲ್ಲವೂ ಸರಿಯಿದೆ. ಅಲ್ಲಿನ ಎಲ್ಲ ಸಮಸ್ಯೆಗಳನ್ನು ಈಗಿನ ಅಧ್ಯಕ್ಷ ನಂದನ್ ನಿಲೇಕಣಿ ಸರಿಯಾಗಿ ನಿರ್ವಹಿಸುತ್ತಿದ್ದಾರೆ. ಆ ಸಾಮರ್ಥ್ಯ ಅವರಿಗಿದೆ" ಎಂದು ಇನ್ಫೋಸಿಸ್ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಬುಧವಾರ ಹೇಳಿದ್ದಾರೆ.
"ಖಂಡಿತವಾಗಿಯೂ ಎಲ್ಲ ಸರಿ ಇದೆ. ಹೂಡಿಕೆದಾರರ ಸಭೆಯಲ್ಲಿ ನಾನು ಭಾಷಣ ಮಾಡಿದ್ದನ್ನು ನೆನಪಿಸಿಕೊಳ್ಳಿ. ಅಧ್ಯಕ್ಷರಾಗಿ ನಂದನ್ ಇದ್ದಾರೆ. ಇನ್ನು ಮುಂದೆ ನಾವೆಲ್ಲ ನೆಮ್ಮದಿಯಾಗಿ ನಿದ್ದೆ ಮಾಡಬಹುದು ಎಂದಿದ್ದೆ" ಎಂಬುದನ್ನು ಮಾಧ್ಯಮದವರಿಗೆ ಮೂರ್ತಿ ಹೇಳಿದ್ದಾರೆ. ಪ್ರಸಕ್ತ ಸಾಲಿನ ಇನ್ಫೋಸಿಸ್ ಪ್ರಶಸ್ತಿಗಳನ್ನು ವಿತರಿಸಿದ ನಂತರ ಮಾತನಾಡಿದ್ದಾರೆ.

"ನಂದನ್ ತುಂಬ ಸಂಘಟಿತವಾದ ವ್ಯಕ್ತಿ. ಸಂಕೀರ್ಣವಾದ ಆಲೋಚನೆಗಳನ್ನು ಸರಳಗೊಳಿಸುವುದು ಅವರ ಸಾಮರ್ಥ್ಯ. ಕಂಪನಿಯಲ್ಲಿ ತುಂಬ ಸಂಕೀರ್ಣತೆಯಿರುವುದರಿಂದ ಅವರಿಗೆ ತುಂಬ ಕೆಲಸ ಇದೆ. ಎಲ್ಲವನ್ನೂ ಅವರಿಗೆ ಬಿಡೋಣ ಮತ್ತು ನಾವೆಲ್ಲ ಸುಮ್ಮನಿರೋಣ. ಆಗ ಅವರ ಕೆಲಸವನ್ನು ಚೆನ್ನಾಗಿ ಮಾಡಲು ಸಾಧ್ಯ" ಎಂದಿದ್ದಾರೆ.
ಇಸ್ರೇಲಿ ತಂತ್ರಜ್ಞಾನ ಸಂಸ್ಥೆ ಪನಾಯ ಖರೀದಿ ವ್ಯವಹಾರಕ್ಕೆ ಕೆಲ ದಿನಗಳ ಹಿಂದಷ್ಟೇ ನಿಲೇಕಣಿ ಕ್ಲೀನ್ ಚಿಟ್ ನೀಡಿದ್ದರು. ಆ ಬಗ್ಗೆ ನಾರಾಯಣಮೂರ್ತಿ ನಿರಾಶೆ ವ್ಯಕ್ತಪಡಿಸಿದ್ದರು. ಇನ್ನು ಹೊಸ ಸಿಇಒ ಆಯ್ಕೆ ವಿಚಾರವಾಗಿ ಮಾತನಾಡಿದ್ದ ಅವರು, ಸ್ವತಃ ಉತ್ತಮ ಸಿಇಒ ಆಗಿರುವ ನಂದನ್ ನಿಲೇಕಣಿ ಅವರಿಗೆ ಯಾರ ಸಲಹೆಯ ಅಗತ್ಯವೂ ಇಲ್ಲ ಎಂದಿದ್ದಾರೆ.
ಈ ಹಿಂದಿನ ಸಿಇಒ ಹಾಗೂ ಎಂ.ಡಿ. ವಿಶಾಲ್ ಸಿಕ್ಕಾ ಅವರು ತಿಕ್ಕಾಟದ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ಮಧ್ಯಂತರ ಸಿಇಒ ಆಗಿ ನಂದನ್ ನಿಲೇಕಣಿ ಅಧಿಕಾರ ಸ್ವೀಕರಿಸಿದ್ದರು.












Click it and Unblock the Notifications