ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!
ನವದೆಹಲಿ, ಫೆಬ್ರವರಿ 11: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಇಂಧನ ದರ ಎಂದಿಗೆ ಸ್ಥಿರತೆ ಕಾಣುವುದೋ, ಸರ್ಕಾರ ಎಂದಿಗೆ ಈ ಬಗ್ಗೆ ಗಮನ ಹರಿಸುವುದೋ ಎಂದು ಕಾದಿದ್ದ ವಾಹನ ಸವಾರರಿಗೆ ನಿರಾಶೆ ಉಂಟು ಮಾಡುವ ಸುದ್ದಿ ಬಂದಿದೆ. ಕೇಂದ್ರ ಇಂಧನ ಸಚ್ವ ಧರ್ಮೇಂದ್ರ ಪ್ರಧಾನ್ ಅವರು ಇಂಧನದ ಮೇಲೆ ಹಾಕಿರುವ ಅಬಕಾರಿ ಸುಂಕ ತಗ್ಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ
ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆಗೆ ಅನೇಕ ಕಾರಣಗಳಿದ್ದರೂ ಸದ್ಯಕ್ಕೆ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ಗೆ 60 ಯುಎಸ್ ಡಾಲರ್ ನಷ್ಟಾಗಿದೆ. ಇಂಧನ ಬೇಡಿಕೆ ಸುಧಾರಣೆಯ ನಿರೀಕ್ಷೆಯಲ್ಲಿ ತೈಲ ಸಂಸ್ಥೆಗಳು ಪೂರೈಕೆ ತಡೆ ಹಿಡಿದಿರುವುದು ಜಾಗತಿಕವಾಗಿ ತೈಲ ಬೆಲೆಯಲ್ಲಿ ಭಾರಿ ವ್ಯತ್ಯಾಸಕ್ಕೆ ಕಾರಣವಾಗಿದೆ.
ಫೆ.9ರಂದು ಪೆಟ್ರೋಲ್ ದರ ದಾಖಲೆ ದರ ಮುಟ್ಟಿದ್ದೇಕೆ?
ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.
ರಾಜ್ಯ ಸರ್ಕಾರಗಳು ತೆರಿಗೆ ತಗ್ಗಿಸಬಹುದು
ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ದೇಶದಲ್ಲಿ ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಮೇಲೆ 13 ರು ಹಾಗೂ ಡೀಸೆಲ್ ಮೇಲೆ 16 ರು ಸುಂಕ ಹಾಕಲಾಗುತ್ತಿದೆ. ರಾಜ್ಯಗಳು ಹಾಕುವ ಸೆಸ್ ಕಡಿಮೆ ಮಾಡುವುದರಿಂದ ಕನಿಷ್ಠ 2 ರಿಂದ 5 ರು ತನಕವಾದರೂ ಪ್ರತಿ ಲೀಟರ್ ಮೇಲಿನ ಬೆಲೆ ಹೊರೆಯನ್ನು ತಗ್ಗಿಸಬಹುದಾಗಿದೆ.
ಇಂಧನ ದರ ಸುಮಾರು 5 ರು ನಷ್ಟು ಇಳಿಕೆ ಹುಸಿ
ಇಂಧನ ದರ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ ಬಗ್ಗೆ ಮಾಹಿತಿ ಇತ್ತು. ಮೇ 2020ರಿಂದ ಇಲ್ಲಿ ತನಕ ಪೆಟ್ರೋಲ್ ಬೆಲೆ 18.01 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 15.44 ರು ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ. ಆದರೆ, ಈಗ ಸುಂಕ ಇಳಿಸುವಂತೆ ವಾಹನ ಸವಾರರು, ವಿಪಕ್ಷಗಳಿಂದ ಸತತವಾಗಿ ಆಗ್ರಹಿಸುತ್ತಿದ್ದು ಇಂಧನ ಇಲಾಖೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ, ಬಜೆಟ್ ನಲ್ಲಿ ಹೆಚ್ಚಿನೆ ಸೆಸ್ ಹಾಕಲಾಗಿದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೆಸ್ ಹಾಕಲಾಗಿದ್ದು, ಪೆಟ್ರೋಲ್ ಬೆಲೆ 2 ರು ಹಾಗೂ ಡೀಸೆಲ್ 4 ರು ಹೆಚ್ಚಳವಾಗುವ ವರದಿ ಬಂದಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಸೆಸ್ ನಿಂದಾಗಿ ಇಂಧನ ಬೆಲೆ ಏರಿಕೆಯಾಗುವುದಿಲ್ಲ ಎಂದಿದ್ದಾರೆ.
ಅಬಕಾರಿ ಸುಂಕ ಇಳಿಕೆ ಇಲ್ಲ: ಧರ್ಮೇಂದ್ರ ಪ್ರಧಾನ್
ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್, ಇಂಧನ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡುವ ಯಾವುದೇ ಪ್ರಸ್ತಾವನೆ ಬಂದಿಲ್ಲ ಹಾಗೂ ಸರ್ಕಾರ ಈ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ಮುಂಬೈನಲ್ಲಿ ಸರಾಸರಿ ಪೆಟ್ರೋಲ್ ಬೆಲೆ 94 ರು ಹಾಗೂ ಡೀಸೆಲ್ ಬೆಲೆ 84.63 ರು ನಷ್ಟಿದ್ದು, ದೇಶದ ಹಲವೆಡೆ 100 ರು ಗಡಿ ದಾಟಿದೆ. ರೀಟೈಲ್ ಪಂಪ್ ದರಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಮೇಲೆ ಆಧಾರವಾಗಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಶೇ 85ರಷ್ಟು ಇಂಧನ ಆಮದು ಮಾಡಿಕೊಳ್ಳಲಾಗುತ್ತಿದೆ. ಕಚ್ಚಾತೈಲ ಬೆಲೆ ತಗ್ಗಿದರೆ ಸರ್ಕಾರಿ ಸ್ವಾಮ್ಯ ಮೂರು ತೈಲ ಸಂಸ್ಥೆಗಳು ಇಂಧನ ದರ ತಗ್ಗಿಸುವ ಸ್ವಾತಂತ್ರ್ಯವನ್ನು ಹೊಂದಿವೆ ಎಂದು ಹೇಳಿದರು.
ಅಬಕಾರಿ ಸುಂಕ ಏರಿಕೆ ಇಳಿಕೆ
2017ರಲ್ಲಿ ಅಬಕಾರಿ ಸುಂಕ ಇಳಿಕೆ ಮಾಡಿದ್ದ ಸರ್ಕಾರ, ಪೆಟ್ರೋಲ್, ಡೀಸೆಲ್ ದರದಲ್ಲಿ 2 ರು ಇಳಿಕೆಗೆ ಕಾರಣವಾಗಿತ್ತು. 2018ರ ಅಕ್ಟೋಬರ್ 5ರಂದು 1.5 ರು ಸುಂಕ ಇಳಿಕೆಯಾಗಿತ್ತು. ನಂತರ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಟ್ ಹಾಗೂ ಸೆಸ್ ತಗ್ಗಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು.
ಅಬಕಾರಿ ಸುಂಕ ತಗ್ಗಿದ್ದರಿಂದ 2018ರಲ್ಲಿ ದೆಹಲಿಯಲ್ಲಿ ಪೆಟ್ರೋಲ್ 84 ರು ಪ್ರತಿ ಲೀಟರ್ ಹಾಗೂ ಡೀಸೆಲ್ 75.45 ರು ಪ್ರತಿ ಲೀಟರ್ ನಷ್ಟಿತ್ತು. ಸದ್ಯ 87.60 ರು ಹಾಗೂ 77.73 ರು ನಷ್ಟಾಗಿದೆ, ಇನ್ನೂ ಬೆಲೆ ಹೆಚ್ಚಾಗುತ್ತಲೇ ಇದೆ.