ಐಟಿ : ಬೆಂಗಳೂರಿಗೆ ಡಿಚ್ಚಿ ನೀಡಲಿದೆ ಕೊಚ್ಚಿ, ಎಚ್ಚರ!
ಕೊಚ್ಚಿ, ಸೆ. 19 : ಕಳೆದ ಐದು ವರ್ಷದ ಅವಧಿಯಲ್ಲಿ ಕೊಚ್ಚಿಯಲ್ಲಿನ ಐಟಿ ಕ್ಷೇತ್ರದ ಬೆಳವಣಿಗೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಐಟಿ ಕ್ಷೇತ್ರದ ಬೆಳವಣಿಗೆ ದ್ವಿಗುಣಗೊಂಡಿದ್ದು ಬಿಜಿನಸ್ ಪ್ರೋಸೆಸ್ ಮ್ಯಾನೆಜ್ ಮೆಂಟ್ ಬೆಳವಣಿಗೆ ಆಶ್ಚರ್ಯ ಹುಟ್ಟಿಸುವಂತಿದೆ. ಇದಕ್ಕೆ ಅಲ್ಲಿನ ಸರ್ಕಾರ ಉದಾರನೀತಿಗಳೇ ಕಾರಣ ಎಂಬ ಮಾತು ಕೇಳಿಬರುತ್ತಿದೆ.(ಐಟಿ, ಕೈಗಾರಿಕೆಗಳಿಗೆ ಹೊಸ ನೀತಿ : ಸಿಎಂ)
ಭಾರತದಲ್ಲೇ ಐಟಿ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸಿದ್ದ ಬೆಂಗಳೂರಿಗೆ ಕೊಚ್ಚಿ ಪರ್ಯಾಯವಾಗಿ ಬೆಳೆಯುತ್ತಿದೆಯೇ ಎಂಬ ಅನುಮಾನ ಸಹ ಮೂಡಿದರೆ ತಪ್ಪಲ್ಲ. ಉಳಿದಂತೆ ದೆಹಲಿ, ಮುಂಬೈ, ಪುಣೆ, ಹೈದ್ರಾಬಾದ್ ಮತ್ತು ಚೆನೈಗೆ ಕೇಂದ್ರಿಕೃತವಾಗಿದ್ದ ಐಟಿ ಕ್ಷೇತ್ರ ಕೊಚ್ಚಿಯಲ್ಲಿ ಗಣನೀಯ ಬೆಳವಣಿಗೆ ಕಂಡಿದೆ.

ಅಹಮದಾಬಾದ್, ಕೋಲ್ಕತ್ತಾ ಮತ್ತು ಜೈಪುರ ಕೊಚ್ಚಿಯ ರೀತಿಯಲ್ಲೇ ಬೆಳವಣಿಗೆ ಕಾಣುತ್ತಿವೆ. ಚಂಡೀಗಢ, ಇಂದೋರ್, ಭುವನೇಶ್ವರ, ವಿಶಾಕಪಟ್ಟಣ, ತಿರುವನಂತಪುರ ಮತ್ತು ಕೊಯಂಬತ್ತೂರ್ ಸಹ ರೇಸ್ ನಲ್ಲಿವೆ ಎಂದು ಸಾಫ್ಟ್ವೇರ್ ಸೇವೆಗಳ ರಾಷ್ಟ್ರೀಯ ಕಂಪನಿಗಳ ಸಮಿತಿ (ನಾಸ್ಕಾಮ್) ವರದಿ ಹೇಳಿದೆ.
ಮೇಲಿನ ನಗರಗಳು ದೇಶದ ಎರಡನೇ ದರ್ಜೆ ಮಹಾನಗರಗಳಾಗಿ ಈಗಾಗಲೇ ರೂಪುಗೊಂಡಿದ್ದು ಐಟಿ ಕ್ಷೇತ್ರದಲ್ಲೂ ಪೈಪೋಟಿ ನೀಡುತ್ತಿವೆ. ಇಲ್ಲಿ ದೊರೆಯುತ್ತಿರುವ ಸಂಪನ್ಮೂಲ ಮತ್ತು ಕಡಿಮೆ ವೆಚ್ಚ ಇದಕ್ಕೆ ಪೂರಕವಾಗಿದೆ ಎಂದು ವರದಿ ಉಲ್ಲೇಖಿಸಿದೆ.(ಅಮೆಜಾನ್ ತೆರಿಗೆ ಹೇರಿಕೆಗೆ ದಿಗ್ವಿಜಯ್ ಡಿಚ್ಚಿǃ)
ತಿರುವನಂತಪುರಕ್ಕೆ ಹೋಲಿಸಿದರೆ ಕೊಚ್ಚಿಗೆ ಐಟಿ ಕ್ಷೇತ್ರ ಕಾಲಿಟ್ಟಿದ್ದು ಸ್ವಲ್ಪ ತಡವಾಗಿಯೇ. ಆದರೆ ಕಳೆದೊಂದು ದಶಕದಲ್ಲಿ ಕೊಚ್ಚಿ ಗಣನೀಯ ಬೆಳವಣಿಗೆ ಸಾಧಿಸಿದೆ. ಕೊಚ್ಚಿ ಸುಮಾರು 35 ಸಾವಿರ ಜನರಿಗೆ ಐಟಿ ಕ್ಷೇತ್ರದಡಿ ಉದ್ಯೊಗ ಕಲ್ಪಿಸಿದೆ ಎಂದು ಅರ್ಬಿಟ್ರೋನ್ ಟೆಕ್ನಾಲಜೀಸ್ ಇಂಡಿಯಾದ ನಿರ್ದೇಶಕ ಶೈಲೇನ್ ಸಗೂನನ್ ಹೇಳುತ್ತಾರೆ.
ಸರ್ಕಾರ ನೀಡುವ ಸಹಕಾರ, ಬಂಡವಾಳ ಹೂಡಿಕೆಗೆ ಇರುವ ಅವಕಾಶ, ಅಗತ್ಯ ಶಕ್ತಿ ಮತ್ತು ಸಂಪನ್ಮೂಲ, ಸಲಕರಣೆ ಪೂರೈಕೆ, ನೋಂದಣಿ ಮತ್ತು ಇತರೆ ಸಂಗತಿಗಳಿಗೆ ಹೋಲಿಸಿದರೆ ಕೊಚ್ಚಿ ಎಲ್ಲರಿಗಿಂತ ಉತ್ತಮವಾಗಿದೆ ಎಂದು ಬೆಂಗಳೂರಿನಿಂದ ಕೊಚ್ಚಿಗೆ ತಮ್ಮ ವ್ರೆಂಚ್ ಸಲ್ಯೂಷನ್ ಸ್ಥಳಾಂತರಿಸಿರುವ ಅಜು ಪೀಟರ್ ಹೇಳುತ್ತಾರೆ. ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ಕೊಚ್ಚಿ ಮತ್ತು ಕೇರಳ ಸರ್ಕಾರ ಸಹಕಾರದಿಂದ ವರ್ತಿಸುತ್ತಿದೆ ಎಂದು ಹೇಳುತ್ತಾರೆ.











Click it and Unblock the Notifications