ಎಫ್ಡಿಐ ಹರಿವಿನಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ: ಕೋವಿಡ್ ನಡುವೆಯೂ ಗಮನಾರ್ಹ ಸಾಧನೆ
ಬೆಂಗಳೂರು, ಮಾರ್ಚ್ 12: ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮಹತ್ವದ ಸಾಧನೆಯತ್ತ ಸಾಗಿದೆ. ಲಾಕ್ಡೌನ್ನ ತಿಂಗಳಿನ ಅವಧಿಯಲ್ಲಿ ಇಡೀ ದೇಶದಲ್ಲಿಯೇ ಅತ್ಯಧಿಕ ವಿದೇಶಿ ನೇರ ಬಂಡವಾಳ ಹೂಡಿಕೆ ರಾಜ್ಯದಲ್ಲಿ ನಡೆದಿದೆ. 2020ರ ಅಂತ್ಯಕ್ಕೆ ರಾಜ್ಯದಲ್ಲಿ 61,174 ಕೋಟಿ ರೂ ಹರಿದುಬಂದಿದ್ದು, ಇದರಲ್ಲಿ 37,000 ಕೋಟಿ ರೂ ಕಳೆದ ಆರು ತಿಂಗಳಲ್ಲಿ ಬಂದಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸಚಿವಾಲಯದ ಕೈಗಾರಿಕೆಗಳ ಉತ್ತೇಜನ ಮತ್ತು ಆಂತರಿಕ ವ್ಯಾಪಾರ (ಡಿಪಿಐಐಟಿ) ದಾಖಲೆಗಳ ಪ್ರಕಾರ, ಜನವರಿ-ಮಾರ್ಚ್ ಅವಧಿಯ ಮೊದಲ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಎರಡನೆಯ ತ್ರೈಮಾಸಿಕ ಅವಧಿಯಾದ ಏಪ್ರಿಲ್-ಜೂನ್ ತಿಂಗಳಲ್ಲಿ ಕರ್ನಾಟಕದ ಎಫ್ಡಿಐ ಶೇ 25ರಷ್ಟು ಕುಸಿತ ಕಂಡಿದೆ. ಆದರೆ ಅದರ ಬಳಿಕ ಗಣನೀಯ ಪ್ರಗತಿ ಕಂಡಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಒಟ್ಟಾರೆಯಾಗಿ ಈ ವರ್ಷ ಕರ್ನಾಟಕಕ್ಕಿಂತಲೂ ಗುಜರಾತ್ ಮತ್ತು ಮಹಾರಾಷ್ಟ್ರ ಅಧಿಕ ಎಫ್ಡಿಐ ಹರಿವು ಕಂಡಿದೆ. ದೆಹಲಿ ಮತ್ತು ತಮಿಳುನಾಡು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಈ ಐದು ರಾಜ್ಯಗಳು ಕಳೆದ ವರ್ಷ ಜತೆಗೂಡಿ ಒಟ್ಟು 4.78 ಲಕ್ಷ ಕೋಟಿ ಅಂದರೆ, ಒಟ್ಟು ಎಫ್ಡಿಐನ ಶೇ 88ರಷ್ಟು ಪಾಲು ಪಡೆದುಕೊಂಡಿವೆ. ಕರ್ನಾಟಕವು ದೇಶದ ಒಟ್ಟಾರೆ ಎಫ್ಡಿಐ ಹರಿವಿನ ಶೇ 13ರಷ್ಟು ಪಾಲು ಹೊಂದಿದ್ದರೆ, ಎಲ್ಲ ರಾಜ್ಯಗಿಂತ ಮುಂಚೂಣಿಯಲ್ಲಿರುವ ಗುಜರಾತ್ ಪಾಲು ಶೇ 36ರಷ್ಟಿದೆ. ಮಹಾರಾಷ್ಟ್ರ ಶೇ 27ರಷ್ಟು, ದೆಹಲಿ ಮತ್ತು ತಮಿಳುನಾಡು ಸೇರಿ ಶೇ 12ರಷ್ಟು ಎಫ್ಡಿಐ ಪಡೆದಿವೆ. ಮುಂದೆ ಓದಿ.

ಅಂದಾಜಿಗಿಂತಲೂ ಅಧಿಕ ಎಫ್ಡಿಐ
ವಿಶೇಷವೆಂದರೆ ಕರ್ನಾಟಕವು ಅಂದಾಜಿಸಿದ್ದಕ್ಕಿಂತಲೂ ಅಧಿಕ ಮೊತ್ತದ ವಿದೇಶಿ ನೇರ ಬಂಡವಾಳವನ್ನು ಸ್ವೀಕರಿಸಿದೆ. ಲಾಕ್ಡೌನ್ ಹಾಗೂ ಇತರೆ ಸಾಂಕ್ರಾಮಿಕ ನಿಯಂತ್ರಣ ನಿರ್ಬಂಧಗಳ ನಡುವೆಯೂ ಕರ್ನಾಟಕಕ್ಕೆ ಏಪ್ರಿಲ್-ಜೂನ್ ಅವಧಿಯಲ್ಲಿ 10,254 ಕೋಟಿ ರೂ ಎಫ್ಡಿಐ ಬಂದಿದೆ. ಇದು ನಮ್ಮ ಲೆಕ್ಕಾಚಾರಕ್ಕಿಂತಲೂ ಅದಿಕ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂರನೇ ಅವಧಿಯಲ್ಲಿ ಏರಿಕೆ
ಎರಡನೆಯ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಜುಲೈ-ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಒಟ್ಟಾರೆ ಎಫ್ಡಿಐನಲ್ಲಿ ಸುಮಾರು ಶೇ 68ರಷ್ಟು ಪಾಲು ಬಂದಿದೆ. ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಿದೆ. ಅಕ್ಟೋಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಕಳೆದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಶೇ 16ರಷ್ಟು, ಅಂದರೆ 19,995 ಕೋಟಿ ರೂ ಎಫ್ಡಿಐ ಆಗಮಿಸಿದೆ.

ದೇಶದ ಒಟ್ಟಾರೆ ಎಫ್ಡಿಐ ಹರಿವು
ದೇಶದ ಒಟ್ಟಾರೆ ಎಫ್ಡಿಐ ಹರಿವು ಎರಡನೆಯ ತ್ರೈಮಾಸಿಕ ಅವಧಿಯಲ್ಲಿ ಶೇ 48ರಷ್ಟು ಕುಸಿದಿದ್ದು, ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ 250ರಷ್ಟು ಹೆಚ್ಚಿದೆ. ಆದರೆ ಕೊನೆಯ ಮೂರು ತಿಂಗಳಲ್ಲಿ ಇದು ಶೇ 9ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿತಕಂಡಿದೆ.

ಮತ್ತಷ್ಟು ಬೆಳೆಯುವ ನಿರೀಕ್ಷೆ
'ಸಾಂಕ್ರಾಮಿಕದ ಅವಧಿಯಲ್ಲಿ ನಾವು ಆಂತರಿಕವಾಗಿ ಅಂದಾಜಿಸಿದ್ದಕ್ಕಿಂತಲೂ ಅಧಿಕ ಎಫ್ಡಿಐ ಅನ್ನು ಸೆಳೆದುಕೊಂಡಿದ್ದೇವೆ. ನಾವು ಪರಿಚಯಿಸಿದ ಸುಧಾರಣೆಗಳು ಅನುಷ್ಠಾನಗೊಳ್ಳುವುದರಿಂದ ಈ ತ್ರೈಮಾಸಿಕ ಅವಧಿಯಲ್ಲಿ ಮತ್ತು ಮುಂದಿನ ಕೆಲವು ತಿಂಗಳಲ್ಲಿ ಅದು ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ. ಭೂ ಬ್ಯಾಂಕ್ ಸ್ಥಾಪನೆ, ಉದ್ಯಮ ನಿರ್ವಹಣೆ ಸರಳೀಕರಣ, ಹೂಡಿಕೆಸ್ನೇಹಿ ಪರಿಸರ ವ್ಯವಸ್ಥೆ ಸೃಷ್ಟಿಯಲ್ಲಿ ನಾವು ನಮ್ಮ ಜತೆಗೇ ಸ್ಪರ್ಧೆ ಮಾಡುತ್ತಿದ್ದೇವೆ. ಪ್ರತಿ ತ್ರೈಮಾಸಿಕ ಅವಧಿಯಲ್ಲಿಯೂ ಅದರ ಹಿಂದಿನ ಅವಧಿಗಿಂತ ಸುಧಾರಣೆಯಾಗಬೇಕು ಎನ್ನುವುದು ನಮ್ಮ ಗುರಿ' ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.












Click it and Unblock the Notifications