ವಿಜಯ್ ಮಲ್ಯ ಮದ್ಯದಂಗಡಿ ಮುಚ್ಚಳಕ್ಕೆ ಆದೇಶ
ಬೆಂಗಳೂರು, ಡಿ. 17: ಉದ್ಯಮಿ ವಿಜಯ ಮಲ್ಯ ಒಡೆತನದ ಯುಬಿ (ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ ಲಿ) ಸಂಸ್ಥೆಯನ್ನು ಮುಚ್ಚಿಯಾದರೂ ತನ್ನ ಸಾಲ ತೀರಿಸಬೇಕೆಂದು ಕೋರಿ ಬಿಎನ್ ಪಿ ಪಾರಿಬಾಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠ ಪುರಸ್ಕರಿಸಿದೆ.
ಹೈಕೋರ್ಟಿನ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ನ್ಯಾಯಮೂರ್ತಿ ಎನ್. ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಡಿ.17ರಂದು ಸಂಸ್ಥೆ ಮುಚ್ಚುವ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಬೇಕಿದೆ. ಇದಕ್ಕೆ ತಡೆ ನೀಡುವಂತೆ ಯುಬಿಎಚ್ಎಲ್ ಸಂಸ್ಥೆಯ ಪರ ವಕೀಲರು ಮಾಡಿದ ಮನವಿಯನ್ನೂ ಪೀಠ ಸೋಮವಾರ ತಿರಸ್ಕರಿಸಿತು.

'ಸುಮಾರು 6 ಸಾವಿರ ಕೋಟಿ ರೂ. ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಲ ನೀಡಿವೆ. ಅದರಲ್ಲಿ ಸಾರ್ವಜನಿಕರ ಹಣವೂ ಸೇರಿದೆ. ಈ ವಿಷಯದಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಒಂದು ವೇಳೆ ಸಂಸ್ಥೆ ಮುಚ್ಚಬೇಕು ಎನ್ನುವ ಏಕಸದಸ್ಯ ಪೀಠ ನ.19ರಂದು ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದರೆ, ಸಾರ್ವಜನಿಕರ ಹಣ ವಸೂಲಿಗೆ ನ್ಯಾಯಾಲಯಗಳೇ ಅಡ್ಡ ಬರುತ್ತಿವೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡುತ್ತದೆ'ಎಂದು ನ್ಯಾಯಪೀಠ ಹೇಳಿದೆ.
ಕಿಂಗ್ ಫಿಷರ್ ಏರ್ ಲೈನ್ಸ್ ಕಂಪೆನಿಗೆ ವಿಮಾನ ಖರೀದಿಸಲು ಫ್ರಾನ್ಸ್ ಮೂಲದ ಬಿಎನ್ ಪಿ ಪಾರಿಬಾಸ್ ಕಂಪೆನಿ 200 ಕೋಟಿ ರೂ. ಸಾಲ ನೀಡಿತ್ತು. ಈ ಸಮಯದಲ್ಲಿ ಸಾಲಕ್ಕೆ ಯುಬಿ ಸಮೂಹ ಸಂಸ್ಥೆಯನ್ನು ಖಾತ್ರಿಯಾಗಿ ನೀಡಿತ್ತು. ಯುಬಿ ಕಂಪೆನಿಯನ್ನು ಮಾರಾಟ ಮಾಡಿ ತನಗೆ ಆ ಮೊತ್ತ ಪಾವತಿಸಬೇಕೆಂದು ಪಾರಿ ಬಾಸ್ ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ ಇತ್ತೀಚೆಗೆ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಯುಬಿ ಮೇಲ್ಮನವಿ ಸಲ್ಲಿಸಿತ್ತು.












Click it and Unblock the Notifications