ಚಿನ್ನಾಭರಣ ಮಳಿಗೆಗಳು ಇಂದು ಮತ್ತು ನಾಳೆಯೂ ಬಂದ್
ಮುಂಬೈ, ಮಾರ್ಚ್, 03: ಎರಡು ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿಗೆ ಪಾನ್ ಕಾರ್ಡ್ ಕಡ್ಡಾಯ ಮತ್ತು ಆಭರಗಳ ವಹಿವಾಟಿನ ಮೇಲೆ ಶೇ. 1ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಚಿನ್ನಾಭರಣ ವರ್ತಕರು ದೇಶದಾದ್ಯಂತ ಮುಷ್ಕರ ಆರಂಭಿಸಿದ್ದಾರೆ.
ಬುಧವಾರ ಮುಷ್ಕರ ಆರಂಭ ಮಾಡಲಾಗಿದ್ದು ಇಂದು ಮತ್ತು ನಾಳೆ ಸಹ ಆಭರಣದ ಅಂಗಡಿಗಳು ಬಾಗಿಲು ಹಾಕಿರಲಿವೆ. ದೇಶದ 300ಕ್ಕೂ ಹೆಚ್ಚು ಆಭರಣ ವರ್ತಕರ ಸಂಘಗಳು ಮುಷ್ಕರವನ್ನು ಬೆಂಬಲಿಸಿದ್ದು ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ, ಕೋಲ್ಕತ್ತ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನಾಭರಣ ವರ್ತಕರು ಮಳಿಗೆಗಳನ್ನು ಮುಚ್ಚಿದ್ದಾರೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
ಕೇರಳ ಮತ್ತು ಗುಜರಾತ್ನ ರಾಜ್ಕೋಟ್ ನಲ್ಲಿ ಮಂಗಳವಾರದಿಂದಲೇ ಮುಷ್ಕರ ಆರಂಭಿಸಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 2016-17ರ ಬಜೆಟ್ನಲ್ಲಿ ಶೇ 1ರಷ್ಟು ಅಬಕಾರಿ ಸುಂಕವನ್ನು ವಿಧಿಸುವುದಾಗಿ ಹೇಳಿರುವುದು ಚಿನ್ನಾಭರಣ ತಯಾರಿಕೆ ಮತ್ತು ಮಾರಾಟ ವಲಯಕ್ಕೆ ತೀವ್ರ ನಿರಾಸೆ ಮೂಡಿಸಿದೆ ಎಂದು ವರ್ತಕರ ಸಂಘ ಆರೋಪಿಸಿದೆ.[ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]
ಸಣ್ಣ ವ್ಯಾಪಾರಿಗಳಿಗೆ ಈ ಅಬಕಾರಿ ಸುಂಕ ತೀವ್ರ ಹೊಡೆತ ನೀಡಲಿದೆ. ಸಿಗುವ ಅಲ್ಪ ಲಾಭವನ್ನು ಅಬಕಾರಿ ಸುಂಕದ ಹೆಸರಿನಲ್ಲಿ ಸರ್ಕಾರಕ್ಕೆ ನೀಡಬೇಕಾಗುತ್ತಿದೆ ಎಂದು ವರ್ತಕರು ಆರೋಪಿಸಿದ್ದಾರೆ. ಚಿನ್ನಾಭರಣ ಮಳಿಗೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಧವಾರ ಒಂದೇ 100 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳ ವಹಿವಾಟು ಸ್ಥಗಿತಗೊಂಡಿತ್ತು. ಬೆಂಗಳೂರು ಕೆಲ ಭಾಗ, ಹುಬ್ಬಳ್ಳಿ, ಮಂಗಳೂರು ಹಾಗೂ ಬೆಳಗಾವಿಯಲ್ಲಿ ಬುಧವಾರ ಎಂದಿನಂತೆ ವಹಿವಾಟು ನಡೆಯಿತು.
ನಿಮ್ಮ ಊರಿನ ಚಿನ್ನದ ದರ ನೋಡಿಕೊಂಡು ಬನ್ನಿ