ನಿರ್ಗಮನದ ಹೊಸ್ತಿಲಲ್ಲಿ ಇನ್ಫೋಸಿಸ್ಸಿನ 'ಸೇನಾಪತಿ'
ಬೆಂಗಳೂರು, ಅ.8: ಕ್ರಿಸ್ ಎಂದೇ ಜನಪ್ರಿಯವಾಗಿರುವ ಸೇನಾಪತಿ ಗೋಪಾಲಕೃಷ್ಣನ್ ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜೀಸ್ ನ ಏಳು ಜನ ಸ್ಥಾಪಕರಲ್ಲಿ ಒಬ್ಬರು. ಸದ್ಯಕ್ಕೆ ಸಂಸ್ಥೆ ಉಪಾಧ್ಯಕ್ಷರಾಗಿರುವ ಕ್ರಿಸ್ ಇನ್ನೆರಡು ದಿನಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಅ.10ಕ್ಕೆ ತಮ್ಮ ಐಟಿ ವೃತ್ತಿ ಬದುಕಿನ ಅಧ್ಯಾಯ ಮುಗಿಸುತ್ತಿದ್ದಾರೆ.
ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕ್ರಿಸ್, ಜಾಗತಿಕ ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಂಸ್ಥೆಯನ್ನು ಬಹು ಎಚ್ಚರಿಕೆಯಿಂದ ಮುನ್ನಡೆಸಿದವರು. 1981ರಲ್ಲಿ ಜಯನಗರದ ಸಣ್ಣ ಗ್ಯಾರೇಜ್ ಜಾಗದಲ್ಲಿ 250 ಡಾಲರ್ ಮೌಲ್ಯ ಬಂಡವಾಳದೊಂದಿಗೆ ಆರಂಭಗೊಂಡ ಇನ್ಫೋಸಿಸ್ 8 ಬಿಲಿಯನ್ ಡಾಲರ್ ಮೌಲ್ಯಕ್ಕೇರಿ ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಎನಿಸಿದ್ದು ಈಗ ಇತಿಹಾಸ. [ಇನ್ಫೋಸಿಸ್ ಗೆ ಮರಳುವ ಪ್ರಶ್ನೆಯೇ ಇಲ್ಲ]
ಕ್ರಿಸ್ ಹಿನ್ನೆಲೆ: ತಿರುವನಂತಪುರದ ಥೈಕಾಡ್ ನ ಸರ್ಕಾರಿ ಮಾದರಿ ಶಾಲೆಯಲ್ಲಿ ಶಿಕ್ಷಣ. 1977ರಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ, 1979ರಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಟೆಕ್ ಎರಡು ಸ್ನಾತಕೋತ್ತರ ಪದವಿಯನ್ನು ಐಐಟಿ ಮದ್ರಾಸ್ ನಲ್ಲಿ ಪೊರೈಸಿದರು. ನಂತರ ಕೇಂಬ್ರಿಡ್ಜ್ ಗೆ ಹಾರಿದ ಕ್ರಿಸ್ 1986ರಲ್ಲಿ ಪಿಎಚ್ ಡಿ ಪಡೆದರು. ಈ ನಡುವೆ 1981ರಲ್ಲಿ ಎನ್ ಆರ್ ನಾರಾಯಣಮೂರ್ತಿ ಹಾಗೂ ಇತರರೊಡನೆ ಸೇರಿ ಇನ್ಫೋಸಿಸ್ ಸಂಸ್ಥೆ ಹುಟ್ಟು ಹಾಕಿದರು.
ಅಮೆರಿಕದಲ್ಲಿ ಫಣೀಶ್ ಮೂರ್ತಿ ಜತೆ ಸೇರಿ ಇನ್ಫೋಸಿಸ್ ಸಂಸ್ಥೆ ಆಗು ಹೋಗು ಬೆಳವಣಿಗೆ ಪೋಷಣೆ ಜವಾಬ್ದಾರಿ ತೆಗೆದುಕೊಂಡರು. 1994ರಲ್ಲಿ ಅಂಟ್ಲಾಂಟದ KSA ಜೊತೆ ಜಂಟಿಯಾಗಿ ಇನ್ಫೋಸಿಸ್ ತನ್ನ ತಾಂತ್ರಿಕ ಕೇಂದ್ರ ಆರಂಭಿಸಿದಾಗ ಕ್ರಿಸ್ ಅದರ ಉಪಾಧ್ಯಕ್ಷರಾಗಿದ್ದರು. ನಂದನ್ ನಿಲೇಕಣಿ ಅವರ ನಿರ್ಗಮನದಿಂದ ತೆರವಾಗಿದ್ದ ಸಿಇಒ ಸ್ಥಾನವನ್ನು ಜು.22, 2007 ರಂದು ಗೋಪಾಲಕೃಷ್ಣನ್ ತುಂಬಿದರು. [ಇನ್ಫೋಸಿಸ್ ನಿಂದ 12ನೇ ಅಧಿಕಾರಿ ಹೊರಕ್ಕೆ]

ಕ್ರಿಸ್ ಗೆ ಸಂದಿರುವ ಗೌರವಾದರಗಳು: 2002ರಲ್ಲಿ ಸಿಒಒ, ಅಧ್ಯಕ್ಷ, ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೂಡಾ ಕ್ರಿಸ್ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಹಕ ಸೇವೆ, ತಂತ್ರಜ್ಞಾನ, ಬಂಡವಾಳ ಹೂಡಿಕೆ ಹಾಗೂ ಇತರೆ ಕಂಪನಿ ಸ್ವಾದೀನ ಮುಂತಾದ ವಿಭಾಗಗಳಲ್ಲಿ ಕ್ರಿಸ್ ಮುಖ್ಯಸ್ಥರಾಗಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ.
2010ರಲ್ಲಿ 1.01 ಕೋಟಿ ರು ಗಳಿಸಿ ಅತ್ಯಧಿಕ ಸಂಬಳ ಪಡೆವ ಸಿಇಒಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇನ್ಫೋಸಿಸ್ ಸಿಇಒ ಒಬ್ಬರು ಈ ಪಟ್ಟಿ ಸೇರಿದ್ದು ಇದೇ ಮೊದಲು.
2011ನೇ ಸಾಲಿನ ಪದ್ಮ ಭೂಷಣ ಪ್ರಶಸ್ತಿ, BITESನ ಉಪಾಧ್ಯಕ್ಷ ಸ್ಥಾನ, ಐಐಐಟಿ ಕೇರಳದ ಮುಖ್ಯಸ್ಥ, CII ದಕ್ಷಿಣ ವಲಯದ ಉಪಾಧ್ಯಕ್ಷ, ACM, IEEE and IEEE ಕಂಪ್ಯೂಟರ್ ಸೊಸೈಟಿಯ ಸದಸ್ಯ ಹೀಗೆ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದರು. [ಸಿಇಒ ಆಗ್ತಾರೆ ಅಂದ್ರೆ ಇನ್ಫೋಸಿಸ್ನ್ನೇ ಬಿಟ್ರು]
ಕ್ರಿಸ್ ಮುಂದಿನ ಹಾದಿ ಏನು?: ಕ್ರಿಸ್ ಜೊತೆಗಾರರಾದ ಮೋಹನ್ ದಾಸ್ ಪೈ ಶಿಕ್ಷಣ, ನಾಗರಿಕ ಸೌಲಭ್ಯ ಕ್ಷೇತ್ರಗಳತ್ತ ಗಮನ ಹರಿಸಿದರೆ, ನಂದನ್ ನಿಲೇಕಣಿ ಅವರು ಆಧಾರ್ ಕಾರ್ಡ್, ರಾಜಕೀಯ ಜೀವನ ನಂತರ ಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ರಿಸ್ ಅವರ ಮುಂದಿನ ಯೋಜನೆ ಬಗ್ಗೆ ತಿಳಿದು ಬಂದಿಲ್ಲವಾದರೂ ಇತರ ಸಹ ಸ್ಥಾಪಕರಂತೆ ದಾನ ದತ್ತಿ ಕಾರ್ಯ ಮುಂದುವರೆಸಲಿದ್ದಾರೆ.
ಈಗಾಗಲೇ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ ನಲ್ಲಿ ಮೆದುಳು ಸಂಶೋಧನಾ ಕೇಂದ್ರಕ್ಕಾಗಿ 35 ಮಿಲಿಯನ್ ಡಾಲರ್ ದಾನ ನೀಡಿದ್ದಾರೆ. ಕಾರ್ನಗಿ ಮೆಲ್ಲಾನ್ ವಿವಿಗೆ ಇದೇ ವಿಷಯದ ಮೇಲೆ ಸಂಶೋಧನೆಗೆ ನೆರವಾಗುವಂತೆ 1.8 ಮಿಲಿಯನ್ ಡಾಲರ್ ನೀಡಿದ್ದಾರೆ.












Click it and Unblock the Notifications