ಶ್ರೀಲಂಕಾದಲ್ಲಿ ಇನ್ನೂ ಹದಗೆಟ್ಟ ಆರ್ಥಿಕ ಸ್ಥಿತಿ, ಹಣದುಬ್ಬರ ಶೇ. 40ಕ್ಕೆ ಏರಿಕೆ
ಕೊಲಂಬೋ, ಮೇ 31: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಹಣದುಬ್ಬರ (Headline Inflation) ದರ ಶೇ. 40ಕ್ಕೆ ಏರಿದ್ದು, ಇನ್ನೂ ಆತಂಕದ ಸ್ಥಿತಿ ತಲುಪಿದೆ. ಆಹಾರ ಸಾಮಗ್ರಿಗಳು ಮತ್ತು ಇಂಧನದ ಅತೀವ ಕೊರತೆ ಕಾಡುತ್ತಿರುವುದು ಇಷ್ಟು ಭಾರೀ ಪ್ರಮಾಣದಲ್ಲಿ ಹಣದುಬ್ಬರ ಏರಿಕೆಗೆ ಕಾರಣ ಎಂದು ಗ್ರಹಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜಧಾನಿ ಕೊಲಂಬೋದಲ್ಲಿ ಗ್ರಾಹಕ ಬೆಲೆ (Consumer Price Index)) ಶೇ. 39.1ರಷ್ಟು ಹೆಚ್ಚಿದೆ ಎಂದು ಆ ದೇಶದ ಗಣತಿ ಮತ್ತು ಸಾಂಖ್ಯಿಕ ಇಲಾಖೆ (Department of Census and Statistics) ಹೇಳಿಕೆ ನೀಡಿದೆ. ಇಷ್ಟು ಹಣದುಬ್ಬರ ದರ ಲಂಕಾ ಇತಿಹಾಸದಲ್ಲೇ ಕಂಡು ಕೇಳರಿಯದ್ದಾಗಿದೆ. ಕೆಲ ತಿಂಗಳ ಹಿಂದೆ ಬ್ಲೂಮ್ಬರ್ಗ್ ನಡೆಸಿದ ಸಮೀಕ್ಷೆಯು ಲಂಕಾದಲ್ಲಿ ಹಣದುಬ್ಬರ ಶೇ. 35ರಷ್ಟು ಏರಬಹುದು ಎಂದು ಅಂದಾಜು ಮಾಡಿತ್ತು. ಈಗ ಅದನ್ನೂ ಮೀರಿಸುವಂತೆ ಉಬ್ಬರವೇರಿದೆ.
ಆಹಾರ ಹಣದುಬ್ಬರವೇ (Food Inflation) ಶೇ. 57.4ರಷ್ಟು ಏರಿದೆ. ಆಹಾರೇತರ ವಸ್ತುಗಳ ಹಣದುಬ್ಬರ ಶೇ. 30.60ಕ್ಕೆ ಏರಿರುವುದು ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬರುತ್ತದೆ.

ಆಹಾರ ವಸ್ತುಗಳು ಮತ್ತು ಪೆಟ್ರೋಲ್ ಕೊರತೆ ಒಂದೆಡೆಯಾದರೆ, ಶ್ರೀಲಂಕಾದ ರೂಪಾಯಿ ಕರೆನ್ಸಿಯ ಮೌಲ್ಯ ಕುಸಿಯುತ್ತಿರುವುದು ಮತ್ತು ಜಾಗತಿಕ ಅನಿಶ್ಚಿತ ಪರಿಸ್ಥಿತಿಯು ಲಂಕಾ ಆರ್ಥಿಕತೆಯನ್ನು ಇನ್ನಷ್ಟು ಜರ್ಝರಿತಗೊಳಿಸಿದೆ.
ಹಣದುಬ್ಬರ ದರ ಎಷ್ಟು ಮುಖ್ಯ?
ಯಾವುದೇ ಆರ್ಥಿಕತೆ ಎಷ್ಟು ಆರೋಗ್ಯಪೂರ್ಣವಾಗಿದೆ ಎಂದು ಗುರುತಿಸಬೇಕೆಂದರೆ ಇರುವ ಮಾನದಂಡಗಳಲ್ಲಿ ಹಣದುಬ್ಬರವೂ ಒಂದು. ನಿರ್ದಿಷ್ಟ ಕಾಲಾವಧಿಯಲ್ಲಿ ಬೆಲೆ ಎಷ್ಟು ವೇಗದಲ್ಲಿ ಹೆಚ್ಚುತ್ತದೆ ಎಂಬ ಲೆಕ್ಕವೇ ಹಣದುಬ್ಬರ. ಒಂದು ವಸ್ತುವಿಗೆ ವರ್ಷದ ಹಿಂದೆ ಇದ್ದ ಬೆಲೆಗಿಂತ ಈಗ ಎಷ್ಟು ಹೆಚ್ಚಳವಾಗಿದೆ ಎಂಬುದು ಹಣದುಬ್ಬರ. ಉದ್ಯಮ ಬೆಳೆಯಲು ಹಣದುಬ್ಬರ ಅಗತ್ಯ. ಕೆಲ ಉದ್ಯಮ ತಜ್ಞರ ಪ್ರಕಾರ ವಾರ್ಷಿಕವಾಗಿ ಶೇ. 2ರಷ್ಟು ಹಣದುಬ್ಬರ ಇದ್ದರೆ ಉದ್ದಿಮೆಗಳು ಜೀವಂತವಾಗಿರಲು ಸಾಧ್ಯವಾಗುತ್ತದೆ. ಶೇ. 4ರವರೆಗೆ ಹಣದುಬ್ಬರ ಪರವಾಗಿಲ್ಲ ಎನಿಸುತ್ತದೆ. ಅದಕ್ಕೂ ಮೇಲ್ಪಟ್ಟು ದರದಲ್ಲಿ ಏರಿಕೆಯಾದರೆ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂದು ಅರ್ಥಮಾಡಿಕೊಳ್ಳಬೇಕು.

ಲಂಕಾಗೆ ತುರ್ತಾಗಿ ಬೇಕು 31 ಸಾವಿರ ಕೋಟಿ:
ಇಂಥದ್ದರಲ್ಲಿ ಶ್ರೀಲಂಕಾದಲ್ಲಿ ಹಣದುಬ್ಬರ ಶೇ. 40ರಷ್ಟು ಇರುವುದು ನಿಜಕ್ಕೂ ಭೀಕರ ಪರಿಸ್ಥಿತಿಗೆ ಕೈಕನ್ನಡಿಯಾಗಿದೆ. ಲಂಕಾಗೆ ಈ ವರ್ಷ ಬಹಳ ತುರ್ತು ಅಗತ್ಯವಾಗಿ 4 ಬಿಲಿಯನ್ ಯುಎಸ್ ಡಾಲರ್ (ಸುಮಾರು 30 ಸಾವಿರ ಕೋಟಿ ಭಾರತೀಯ ರೂಪಾಯಿ) ಹಣ ಬೇಕಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF- International Monetary Fund) ಸಂಸ್ಥೆಗೆ ಸಾಲಕ್ಕಾಗಿ ಲಂಕಾ ಮೊರೆ ಇಟ್ಟಿದೆಯಾದರೂ ಅದಿನ್ನೂ ಬಿಡುಗಡೆಯಾಗುವ ಲಕ್ಷಣ ಕಾಣುತ್ತಿಲ್ಲ. ಐಎಂಎಫ್ ಅಷ್ಟು ಸುಲಭಕ್ಕೆ ಸಾಲ ನೀಡುವುದಿಲ್ಲ. ಸಾಲ ನೀಡಲು ಒಂದಷ್ಟು ನಿಯಮಗಳನ್ನ ಇಟ್ಟುಕೊಂಡಿದೆ. ತೆರಿಗೆ ಹೆಚ್ಚಳ, ವೆಚ್ಚ ಕಡಿತ ಇತ್ಯಾದಿ ಕ್ರಮಗಳನ್ನು ಕೈಗೊಂಡು ಆರ್ಥಿಕ ಶಿಸ್ತಿಗೆ ಪ್ರಾಧಾನ್ಯತೆ ನೀಡುವ ದೇಶಗಳಿಗೆ ಮಾತ್ರ ಐಎಂಎಫ್ ಸಾಲ ಕೊಡುತ್ತದೆ. ಹೀಗಾಗಿ, ಶ್ರೀಲಂಕಾ ಕೆಲವೊಂದಿಷ್ಟು ಆರ್ಥಿಕ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications