ಷೇರು ಮಾರುಕಟ್ಟೆ: ಕಂಪೆನಿ ಫಲಿತಾಂಶ ಮತ್ತು ಷೇರು ಖರೀದಿ ಹೇಗೆ?
ವಿವಿಧ ಕಂಪೆನಿಗಳ ಫಲಿತಾಂಶ ಬಂದಾಗ ಹೂಡಿಕೆದಾರರು ತಜ್ಞರ ಅಭಿಪ್ರಾಯ ಗಮನಿಸಿ ಷೇರು ಖರೀದಿಗೆ ಮುಗಿ ಬೀಳುತ್ತಾರೆ. ಇಂಥ ವೇಳೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ಅಂಕಣಕಾರರಾದ ಕೆ.ಜಿ.ಕೃಪಾಲ್ ಮಾಹಿತಿ ಪೂರ್ಣವಾದ ಲೇಖನ ಬರೆದಿದ್ದಾರೆ
ಕೆ.ಜಿ.ಕೃಪಾಲ್ ಅವರು ಪತ್ರಿಕೆ ಅಂಕಣಕಾರರು. ಚಂದನವಾಹಿನಿಯಲ್ಲಿ ಅವರ ಕಾರ್ಯಕ್ರಮ ಪ್ರಸಾರವಾಗುತ್ತದೆ. ಹೂಡಿಕೆದಾರರಿಗೆ ಸಲಹೆ ನೀಡಲು ಅವರನ್ನು ಆಹ್ವಾನಿಸಲಾಗುತ್ತದೆ. ಷೇರು ಮಾರುಕಟ್ಟೆ ಅಂದರೆ ಜೂಜು ಎನ್ನುವವರ ಮಧ್ಯೆ ಹೂಡಿಕೆದಾರರ ಬಂಡವಾಳ ನಷ್ಟವಾಗದಂತೆ ಸಲಹೆ ನೀಡಬೇಕು ಎಂಬುದು ಅವರು ಅನುಸರಿಸುವ ವೃತ್ತಿಪರತೆ.
ಒನ್ಇಂಡಿಯಾ ಕನ್ನಡಕ್ಕಾಗಿ ಈಗಿನ ಷೇರು ಮಾರುಕಟ್ಟೆ ಬಗ್ಗೆ ತುಂಬ ಉಪಯುಕ್ತ ಹಾಗೂ ಸೊಗಸಾದ ಲೇಖನವೊಂದನ್ನು ಬರೆದಿದ್ದಾರೆ. ವಿವಿಧ ಕಂಪೆನಿಗಳ ಫಲಿತಾಂಶ ಬರುವ ಹೊತ್ತಿಗೆ ಷೇರು ಖರೀದಿಯಲ್ಲಿ ಅನುಸರಿಸಬೇಕಾದ ಎಚ್ಚರಿಕೆಯನ್ನು ಉದಾಹರಣೆ ಸಹಿತ ಅವರು ವಿವರಿಸಿದ್ದಾರೆ. ಮುಂದೆ ಅವರು ಬರೆದ ಲೇಖನ ಓದಿ.[H-1B ವೀಸಾ ನಿಯಮ ಬದಲಾವಣೆ ಗುಮ್ಮ, ತಲ್ಲಣಿಸಿದವು ಐಟಿ ಷೇರುಗಳು]
ಷೇರುಪೇಟೆಯ ಚಲನೆಯು ಸಾಂಪ್ರದಾಯಿಕ ವಿಧಗಳಿಂದ ಹೊರಬಂದು ವಿಸ್ಮಯಕಾರಿಯಾಗಿ ಸಾಗುತ್ತಿದೆ. ಈಗಿನ ವಿಶ್ಲೇಷಣೆಗಳು ಹೇಗಿವೆ ಎಂದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ಇಂಥ ಪ್ರಶ್ನೆಗಳನ್ನು ಕೇಳಬಹುದು ಎಂದು ತಿಳಿಸುವ ವಿಧವಾಗಿದೆ. ಒಂದು ಕಂಪೆನಿಯ ಫಲಿತಾಂಶ ಪ್ರಕಟಣೆಗೆ ಮುನ್ನವೇ ವಿಶ್ಲೇಷಕರು, ತಜ್ಞರು ನಿರೀಕ್ಷಿತ ಅಂಶಗಳನ್ನು ತಿಳಿಸುತ್ತಾರೆ.
ಫಲಿತಾಂಶದ ನಂತರ ಕಂಪೆನಿಯ ಸಾಧನೆಯು ಕಳಪೆಯಾಗಿದ್ದರೂ ಷೇರಿನ ಬೆಲೆಯಲ್ಲಿ ಏರಿಕೆ ಕಾಣುವುದನ್ನು, ಉತ್ತಮವಾಗಿದ್ದರೂ ಷೇರಿನ ಬೆಲೆ ಇಳಿಕೆಯಾಗುವುದನ್ನು ಕಂಡಿದ್ದೇವೆ. ಇದಕ್ಕೆ ಲಗತ್ತಿಸುವ ಕಾರಣಗಳು ನಿರೀಕ್ಷಿತಕ್ಕಿಂತ ಕಳಪೆಯಾಗಿದೆ, ನಿರೀಕ್ಷಿತವಾದ
ಮಟ್ಟದಲ್ಲಿದೆ, ನಿರೀಕ್ಷಿತಕ್ಕಿಂತ ಉತ್ತಮವಾಗಿದೆ ಎಂದು ಏರಿಳಿತಗಳನ್ನು ಪ್ರದರ್ಶಿಸುವುದು ಸಾಮಾನ್ಯವಾಗಿದೆ.[ಎಸ್ ಬಿಐ ಸೇರಿ 6 ಕಂಪನಿಗಳು ಕಳೆದುಕೊಂಡಿದ್ದು 45 ಸಾವಿರ ಕೋಟಿ!]
ಇದು ಇದುವರೆಗೂ ತೋರಿದ ವಿಧವಾದರೆ, ಇತ್ತೀಚೆಗೆ ಹೊಸ ರೀತಿ ತಂತ್ರವನ್ನು ಪೇಟೆಯ ವಹಿವಾಟುದಾರರು ಪ್ರದರ್ಶಿಸುತ್ತಿದ್ದಾರೆ. ಒಂದು ಕಂಪೆನಿಯು ತನ್ನ ಫಲಿತಾಂಶ ಪ್ರಕಟಿಸಲಿದೆ ಎಂಬ ಕಾರ್ಯಸೂಚಿ ಹೊರಹಾಕಿದ ಮೇಲೆ, ಆ ದಿನಕ್ಕಿಂತ ಮುಂಚಿತವಾಗಿಯೇ ಕೆಲವು ಕಂಪೆನಿಗಳ ಷೇರಿನ ಬೆಲೆಗಳು ಅನಿರೀಕ್ಷಿತವಾದ ಏರಿಳಿತಗಳನ್ನು ಪ್ರದರ್ಶಿಸುತ್ತಿವೆ.

ಆರ್ ಪಿ ಪಿ ಇನ್ಫ್ರಾ ಪ್ರಾಜೆಕ್ಟ್ಸ್
ಉದಾಹರಣೆಗೆ ಆರ್ ಪಿ ಪಿ ಇನ್ಫ್ರಾ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಯು ಫೆಬ್ರವರಿ 11ರಂದು ತನ್ನ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದ ನಂತರ ಫೆಬ್ರವರಿ 10ರವರೆಗೂ ಹೆಚ್ಚಿನ ರಭಸದ ಚಟುವಟಿಕೆಯಿಂದ 362 ರುಪಾಯಿಯವರೆಗೆ ವಾರ್ಷಿಕ ಗರಿಷ್ಠ ದಾಖಲಿಸಿತು. ವಹಿವಾಟಿನ ಗಾತ್ರ ಇಳಿಕೆಯಾಗಿ, ಲಾಭ ಗಳಿಕೆಯೂ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಇಳಿಕೆಯಾಗಿದ್ದುದಕ್ಕೆ ನಂತರ ಸ್ವಲ್ಪ ಬೆಲೆ ಇಳಿಕೆ ಕಂಡಿತು. ಆದರೆ ಈ ಷೇರಿನ ಬೆಲೆಯು ಒಂದೇ ತಿಂಗಳಲ್ಲಿ ರು.236ರ ಸಮೀಪದಿಂದ 362ರವರೆಗೂ ಏರಿಕೆ ಕಂಡಿರುವುದು ಗಮನಾರ್ಹ ಅಂಶವಾಗಿದೆ.

ಐಟಿಡಿಸಿ ನಾಗಾಲೋಟ
ಅದೇ ರೀತಿ ಸಾರ್ವಜನಿಕ ವಲಯದ ಇಂಡಿಯನ್ ಟೂರಿಸಂ ಡೆವೆಲಪಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಫೆಬ್ರವರಿ 14ರಂದು ಫಲಿತಾಂಶ ಪ್ರಕಟಿಸುವ ಕಾರ್ಯ ಸೂಚಿ ಹೊರಬೀಳುತ್ತಿದ್ದಂತೆಯೇ ಷೇರಿನ ಬೆಲೆ ರು.262ರ ಸಮೀಪದಿಂದ ನಾಗಾಲೋಟದಲ್ಲಿ ಸಾಗಿ ಫಲಿತಾಂಶದ ದಿನದಂದು ರು.460 ತಲುಪಿ, ನಂತರ ಅಂದೇ ರು. 409ಕ್ಕೆ ಕುಸಿಯಿತು.

ಕೇಂದ್ರ ಸರಕಾರವೇ ಶೇ 87ರಷ್ಟು ಷೇರು ಹೊಂದಿದೆ
ಈ ಕಂಪೆನಿಯಲ್ಲಿ ಕೇಂದ್ರ ಸರಕಾರದ ಭಾಗಿತ್ವವು ಶೇ 87.03ರಷ್ಟಿದ್ದು, ಸಾರ್ವಜನಿಕ ಭಾಗಿತ್ವ ಶೇ 12.97ರಲ್ಲಿ ಶೇ 3.52ರಷ್ಟನ್ನು ಎಲ್ ಐ ಸಿ ಆಫ್ ಇಂಡಿಯಾ ಮತ್ತು ಶೇ.7.87 ರಷ್ಟನ್ನು ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಹೊಂದಿವೆ. ಇಂತಹ ಹರಿದಾಡುವ ಷೇರುಗಳ ಕೊರತೆಯಿರುವ ಬಿ ಎಸ್ ಇ ಸಿಪಿಎಸ್ಇ ಸೂಚ್ಯಂಕದಲ್ಲಿರುವ ಷೇರಿನ ದರಗಳಲ್ಲಿ ಸುಲಭವಾಗಿ ವಹಿವಾಟುದಾರರು ಏರಿಳಿತ ಉಂಟುಮಾಡಲು ಸಾಧ್ಯವಾಗಿದೆ.

ಗರಿಷ್ಠ ಆವರಣ ಮಿತಿ
ಈ ಷೇರು ಸೋಮವಾರದಂದು ದಿನದ ಗರಿಷ್ಠ ಅವರಣ ಮಿತಿಯಲ್ಲಿದ್ದ ಕಾರಣ ಅಂದು ಶೂನ್ಯ ಮಾರಾಟಗಾರರು ತಮ್ಮ ಮಾರಾಟವನ್ನು ಚುಕ್ತಾ ಮಾಡಲಸಾಧ್ಯವಾಗಿ ಬುಧವಾರದಂದು ಸುಮಾರು 13,784 ಷೇರುಗಳನ್ನು ಹರಾಜಿನಲ್ಲಿ ರು.407.70ರಂತೆ ಕೊಳ್ಳಲಾಯಿತು. ಆಗ ಪೇಟೆಯಲ್ಲಿ ಷೇರಿನ ದರವು ರು.392ರ ಸಮೀಪವಿತ್ತು.

ಪ್ರತಿ ಷೇರಿಗೆ ರು.22.50 ಲಾಭಾಂಶ
ಸಾರ್ವಜನಿಕ ತೈಲ ವಲಯದ ಕಂಪೆನಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ ಫೆ.13ರಂದು ತನ್ನ ಫಲಿತಾಂಶ ಪ್ರಕಟಿಸುವುದರೊಂದಿಗೆ ಆಕರ್ಷಕವಾದ ಅಂದರೆ ಪ್ರತಿ ಷೇರಿಗೆ ರು.22.50 ಲಾಭಾಂಶ ಘೋಷಿಸಿದೆ. ಆದರೂ ಷೇರಿನ ಬೆಲೆಯು 14ರಂದು ಒಂದು ಹಂತದಲ್ಲಿ ರು.35ರಷ್ಟು ಕುಸಿತ ಕಂಡಿದೆ.

ಲಾಭದ ನಗದೀಕರಣಕ್ಕೆ ಮಹತ್ವ
ಆದರೆ, ಈ ಕುಸಿತದ ಹಿಂದೆ ಈ ಷೇರಿನ ಬೆಲೆಯು ಹಿಂದಿನ ಒಂದು ತಿಂಗಳಲ್ಲಿ ರು.479ರಿಂದ 584ರವರೆಗೂ ಏರಿಕೆ ಕಂಡಿರುವ ಅಂಶ ಗಮನಾರ್ಹವಾದುದಾಗಿದೆ. ಎಲ್ಡೆಕೋ ಹೌಸಿಂಗ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯು ಫೆ.14ರಂದು ಉತ್ತಮ ಫಲಿತಾಂಶ ಪ್ರಕಟಿಸಿದ್ದು, ಪ್ರತಿ ಷೇರಿಗೆ ರು.12.50 ರಂತೆ ಲಾಭಾಂಶ ಪ್ರಕಟಿಸಿದೆ. ಆದರೂ ಅಂದು ಷೇರಿನ ಬೆಲೆಯು ರು.15ಕ್ಕೂ ಹೆಚ್ಚಿನ ಕುಸಿತ ಕಂಡಿದೆ. ಈ ಷೇರಿನ ಬೆಲೆಯು ಒಂದೇ ತಿಂಗಳಲ್ಲಿ ರು.450ರ ಸಮೀಪದಿಂದ ರು.685ರವರೆಗೂ ಏರಿಕೆ ಕಂಡಿರುವ ಅಂಶವು ಫಲಿತಾಂಶ ಪ್ರಕಟಣೆಯ ದಿನ ಲಾಭದ ನಗದೀಕರಣಕ್ಕೆ ಮಹತ್ವ ನೀಡಿ, ಬೆಲೆ ಕುಸಿಯುವಂತಾಗಿದೆ. ಹೀಗೆ ಪೇಟೆಯಲ್ಲಿ ಕಂಪೆನಿಗಳು ಫಲಿತಾಂಶ ಪ್ರಕಟಿಸುವ ಮುನ್ನವೇ ಅದರ ರಸವನ್ನು ಹೀರಿಕೊಂಡಿರುವುದರಿಂದ ಉತ್ತಮ ಫಲಿತಾಂಶದ ನಂತರವೂ ಕುಸಿತ ಕಾಣುವುದು ಸಹಜವಾಗಿದೆ. ಆದ್ದರಿಂದ ಅಂಕಿ- ಅಂಶಗಳ ಪ್ರಕಟಣೆ ಕೇವಲ ಸಂಪ್ರದಾಯವಷ್ಟೇ. ಅದಕ್ಕೆ ಬಲಿಯಾಗುವುದು ಬೇಡ. ಲೇಖಕರು ಷೇರು ದಲ್ಲಾಳಿಗಳೂ ಆಗಿದ್ದು, ಅವರನ್ನು ಸಂಜೆ 4.30ರ ನಂತರ ಮೊಬೈಲ್ ಫೋನ್ ಸಂಖ್ಯೆ 9886313380 ಮೂಲಕ ಸಂಪರ್ಕಿಸಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications