ರೂಪಾಯಿ ಕರೆನ್ಸಿಯಲ್ಲೇ ಜಾಗತಿಕ ವ್ಯವಹಾರ; ಕೆಲಸ ಮಾಡುತ್ತಾ ಈ ಐಡಿಯಾ?
ನವದೆಹಲಿ, ಜುಲೈ 13: ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಹಣಕಾಸು ವಹಿವಾಟನ್ನು ರೂಪಾಯಿ ಕರೆನ್ಸಿಯಲ್ಲೇ ನಡೆಸಲಾಗುವಂತೆ ವ್ಯವಸ್ಥೆ ಜಾರಿಗೆ ತರುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ಮಂಗಳವಾರ ಘೋಷಿಸಿತ್ತು. ಇಂಥದ್ದೊಂದು ವ್ಯವಸ್ಥೆ ಎಷ್ಟರಮಟ್ಟಿಗೆ ಭಾರತಕ್ಕೆ ಅನುಕೂಲಕರವಾಗಿ ಪರಿಣಮಿಸುತ್ತದೆ ಎಂಬುದು ಸದ್ಯದ ಪ್ರಶ್ನೆ ಮತ್ತು ಕುತೂಹಲ.
"ಭಾರತೀಯ ರೂಪಾಯಿ ಕರೆನ್ಸಿಯಲ್ಲಿ ರಫ್ತು ಮತ್ತು ಆಮದು ವ್ಯಾಪಾರದ ವಹಿವಾಟು ನಡೆಸಲು ಹೆಚ್ಚುವರಿ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಭಾರತದಿಂದ ರಫ್ತನ್ನು ಹೆಚ್ಚು ದೃಷ್ಟಿಯಲ್ಲಿಟ್ಟುಕೊಂಡು ಜಾಗತಿಕ ವ್ಯಾಪಾರವನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ, ಭಾರತೀಯ ರೂಪಾಯಿ ಕರೆನ್ಸಿ ಮೇಲೆ ಜಾಗತಿಕ ಉದ್ಯಮ ಸಮೂಹಗಳ ಆಸಕ್ತಿ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡೂ ಈ ವ್ಯವಸ್ಥೆ ರೂಪಿಸಲಾಗಿದೆ" ಎಂದು ಆರ್ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ರೂಪಾಯಿ ಕರೆನ್ಸಿಯನ್ನು ಅಂತಾರಾಷ್ಟ್ರೀಯಗೊಳಿಸಬೇಕೆಂದು ಆರ್ಬಿಐಗೆ ಸಲಹೆ ನೀಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಕಳೆದ ವಾರವಷ್ಟೇ ಎಸ್ಬಿಐ ಇಂಥದ್ದೊಂದು ಪ್ರಸ್ತಾಪವನ್ನು ಆರ್ಬಿಐ ಮುಂದಿಟ್ಟಿತ್ತು ಎನ್ನಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ರಷ್ಯಾದಿಂದ ಭಾರತಕ್ಕೆ ಬರಬೇಕಾದ ಹಣ ಸ್ಥಗಿತಗೊಂಡಿತ್ತು. ಡಾಲರ್ ವಿನಿಮಯದಲ್ಲಿ ವಹಿವಾಟು ನಡೆಯುತ್ತಿದ್ದರಿಂದ ಹಣದ ಪಾವತಿ ಆಗಿರಲಿಲ್ಲ. "ಈ ಸಂಕಷ್ಟ ಸಂದರ್ಭವನ್ನೇ ಬಳಸಿಕೊಂಡು ರೂಪಾಯಿ ಕರೆನ್ಸಿಯಲ್ಲೇ ವ್ಯಾಪಾರ ನಡೆಸುವ ವ್ಯವಸ್ಥೆ ರೂಪಿಸಬಹುದು. ಮೊದಲಿಗೆ ಕಡಿಮೆ ವ್ಯವಹಾರಗಳಿರುವ ದೇಶಗಳ ಜೊತೆ ಈ ಪ್ರಯೋಗ ಆರಂಭಿಸಬಹುದು" ಎಂದು ಎಸ್ಬಿಐ ಕಳೆದ ವಾರ ಪ್ರಸ್ತಾಪ ಕೊಟ್ಟಿತ್ತು.
ಈಗ ಡಾಲರ್ ಎದುರು ರೂಪಾಯಿ ಐತಿಹಾಸಿಕ ದಾಖಲೆ ಕುಸಿತ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ರೂಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯವಹಾರ ನಡೆಸುವ ವ್ಯವಸ್ಥೆಯನ್ನು ಆರ್ಬಿಐ ರೂಪಿಸುತ್ತಿರುವುದು ಸಕಾಲಿಕವಾ? ಅಥವಾ ತಿರುಗುಬಾಣವಾಗುತ್ತದಾ?

ರೂಪಾಯಿಯಲ್ಲಿ ವ್ಯವಹಾರ ಹೇಗೆ?
1999ರ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಅಡಿಯಲ್ಲಿ ಅಂತಾರಾಷ್ರೀಯ ವ್ಯಾಪಾರ ವಹಿವಾಟು ನಡೆಸಲು ಆರ್ಬಿಐ ಹೊಸ ವ್ಯವಸ್ಥೆ ರೂಪಿಸಿದೆ. ಈ ವ್ಯವಸ್ಥೆ ಅಡಿ ಎಲ್ಲಾ ರಫ್ತು ಮತ್ತು ಆಮದು ವ್ಯವಹಾರಗಳ ವಹಿವಾಟುಗಳು ರೂಪಾಯಿ ಕರೆನ್ಸಿಯಲ್ಲೇ ಆಗಬೇಕು ಮತ್ತು ಇನ್ವಾಯ್ಸ್ ಕೂಡ ರೂಪಾಯಿಯಲ್ಲೇ ಆಗಬೇಕು.
ವ್ಯವಹಾರ ನಡೆಸುವ ಎರಡು ದೇಶಗಳ ಕರೆನ್ಸಿಗಳ ಮಧ್ಯೆ ಎಷ್ಟು ವಿನಿಮಯ ದರ ಇರಬೇಕು ಎಂಬುದು ಮಾರುಕಟ್ಟೆ ಆಧಾರಿತವಾಗಿರಬಹುದು ಎಂದು ತಿಳಿಸಲಾಗಿದೆ.
ವ್ಯಾಪಾರದ ಪ್ರಕ್ರಿಯೆಯ ಭಾಗವಾದ ಇನ್ವಾಯ್ಸ್ ಕ್ರಮದಿಂದ ಹಿಡಿದು ಪಾವತಿಯವರೆಗಿನ ಎಲ್ಲಾ ವಹಿವಾಟುಗಳೂ ರೂಪಾಯಿ ಕರೆನ್ಸಿಯಲ್ಲಿ ಆಗುವಂತೆ ಆರ್ಬಿಐ ವ್ಯವಸ್ಥೆ ಮಾಡಿದೆ.

ಆಮದು ಮತ್ತು ರಫ್ತಿನ ಮೇಲೇನು ಪರಿಣಾಮ?
ಆಮದು ಮತ್ತು ರಫ್ತು ವ್ಯವಹಾರದ ಪಾವತಿಗಳಿಗೆ ಬ್ಯಾಂಕುಗಳಲ್ಲಿ ವಿಶೇಷ ವೋಸ್ಟ್ರೋ ಖಾತೆಯನ್ನು ತೆರೆಯಬೇಕು. ಭಾರತ ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದರೆ ಆ ಹಣವನ್ನು ವೋಸ್ಟ್ರೋ ಖಾತೆಗೆ ಜಮೆ ಮಾಡಬೇಕು. ಅಂದರೆ, ಒಂದು ದೇಶದ ಮಾರಾಟಗಾರನಿಂದ ಭಾರತ ಯಾವುದೇ ವಸ್ತು ಆಮದು ಮಾಡಿಕೊಂಡಾಗ ಆ ಮಾರಾಟಗಾರ ನಿಗದಿಪಡಿಸಿದ ಬ್ಯಾಂಕಿನಲ್ಲಿನ ವೋಸ್ಟ್ರೋ ಅಕೌಂಟ್ಗೆ ರೂಪಾಯಿ ಕರೆನ್ಸಿಯಲ್ಲಿ ಪಾವತಿ ಮಾಡಬೇಕು.
ಹಾಗೆಯೇ, ಭಾರತೀಯರು ರಫ್ತು ಮಾಡುವಾಗ ಪಾರ್ಟ್ನರ್ ದೇಶದವರು ಹಣ ಪಾವತಿಯನ್ನು ನಿಗದಿತ ಸ್ಪೆಷಲ್ ವೋಸ್ಟ್ರೋ ಖಾತೆಗೆ ಜಮೆ ಮಾಡಬೇಕು.

ಅರವತ್ತರ ದಶಕದಲ್ಲಿ ರೂಪಾಯಿಗೆ ಹೆಚ್ಚು ಮಾನ್ಯತೆ
ಇಡೀ ವಿಶ್ವದಲ್ಲಿ ರೂಪಾಯಿಯೂ ಸೇರಿ 180 ಕರೆನ್ಸಿಗಳಿವೆ. ಎಲ್ಲವೂ ಅಂತಾರಾಷ್ಟ್ರೀಯ ಕರೆನ್ಸಿಗಳೇ. ಆದರೆ, ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಹೆಚ್ಚು ವಹಿವಾಟು ಆಗುವುದು ಕೆಲವೇ ಕರೆನ್ಸಿಗಳಲ್ಲಿ ಮಾತ್ರ. ಜಾತಿ ಹೆಚ್ಚು ವಹಿವಾಟು ನಡೆಯುವುದು ಯುಎಸ್ ಡಾಲರ್ನಲ್ಲೇ. ಅಂದರೆ, ಭಾರತ ಮತ್ತು ಇರಾನ್ ಮಧ್ಯೆ ವ್ಯವಹಾರ ಒಪ್ಪಂದವಾದರೂ ಡಾಲರ್ ಲೆಕ್ಕದಲ್ಲಿ ವಹಿವಾಟು ನಡೆಯುತ್ತದೆ.
ಯುಎಸ್ ಡಾಲರ್ ಬಿಟ್ಟರೆ ಇತರ ಪ್ರಮುಖ ಕರೆನ್ಸಿಗಳೆಂದರೆ ಯೂರೋ, ಜಪಾನೀಯರ ಯೆನ್, ಬ್ರಿಟನ್ ಪೌಂಡ್, ಸ್ವಿಸ್ ಫ್ರಾಂಕ್, ಕೆನಡಿಯನ್ ಡಾಲರ್, ಆಸ್ಟ್ರೇಲಿಯನ್ ಡಾಲರ್ ಮತ್ತು ಸೌತ್ ಆಫ್ರಿಕನ್ ರಾಂಡ್.
ಭಾರತದ ರೂಪಾಯಿ ಕರೆನ್ಸಿಗೆ ಅರವತ್ತರ ದಶಕದಲ್ಲಿ ಒಂದಿಷ್ಟು ಪ್ರಾಮುಖ್ಯತೆ ಸಿಕ್ಕಿತ್ತು. ಕತಾರ್, ಯುಎಇ, ಕುವೇತ್ ಮತ್ತು ಓಮನ್ ಮೊದಲಾದ ಕೊಲ್ಲಿ ದೇಶಗಳಲ್ಲಿ ಹಾಗು ಕೆಲ ಪೂರ್ವ ಯೂರೋಪಿಯನ್ ದೇಶಗಳಲ್ಲಿ ರೂಪಾಯಿಯನ್ನು ಸ್ವೀಕರಿಸಲಾಗುತ್ತಿತ್ತು. ಆದರೆ ನಂತರ ಈ ವ್ಯವಸ್ಥೆ ನಿಂತೇ ಹೋಯಿತು.

ರೂಪಾಯಿ ಜಾಗತಿಕ ಕರೆನ್ಸಿಯಾದರೆ ಭಾರತಕ್ಕೆ ಎಷ್ಟು ಲಾಭ?
ರೂಪಾಯಿಯು ಅಂತಾರಾಷ್ಟ್ರೀಯ ಕರೆನ್ಸಿಯಾದರೆ ಭಾರತದ ವ್ಯಾಪಾರ ಅಂತರ ಕಡಿಮೆ ಮಾಡಲು ನೆರವಾಗಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಹೆಚ್ಚಾಗಬಹುದು. ಹೆಚ್ಚೆಚ್ಚು ದೇಶಗಳು ಭಾರತದೊಂದಿಗಿನ ವ್ಯವಹಾರದಲ್ಲಿ ರೂಪಾಯಿ ಬಳಕೆಗೆ ಮುಂದಾಗಬಹುದು.
ಅದರೆ, ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿ ರೂಪಿಸುವುದು ಅಷ್ಟು ಸುಲಭವಲ್ಲ. ಯುಎಸ್ ಡಾಲರ್ ಬದಲು ರೂಪಾಯಿ ಕರೆನ್ಸಿಯಲ್ಲಿ ವಹಿವಾಟು ನಡೆಸುವಂತೆ ಒಂದು ದೇಶದ ಮನವೊಲಿಸುವುದು ಕಷ್ಟವೇ. ಆರ್ಬಿಐ ಅಲ್ಲದೇ ಬೃಹತ್ ಹಣಕಾಸು ಸಂಸ್ಥೆಗಳು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಂತಿರಬೇಕು. ಇಲ್ಲದಿದ್ದರೆ ಆರ್ಬಿಐಗೆ ಇದರ ನಿರ್ವಹಣೆ ಕಷ್ಟವಾಗಬಹುದು.
ರೂಪಾಯಿ ಅಂತಾರಾಷ್ಟ್ರೀಯ ಕರೆನ್ಸಿಯಾಗಬೇಕೆಂದರೆ ಭಾರತ ರಫ್ತು ಪ್ರಮಾಣವನ್ನು ಹೆಚ್ಚಿಸಬೇಕು. ಆಗ ರೂಪಾಯಿ ಕರೆನ್ಸಿಯಲ್ಲಿ ವ್ಯವಹಾರ ನಡೆಸುವುದು ಸುಲಭವಾಗುತ್ತದೆ. ಭಾರತದ ಸರಕುಗಳಿಗೆ ಬೇಡಿಕೆ ಬಂದಾಗ ನಾವು ರೂಪಾಯಿ ಕರೆನ್ಸಿಯಲ್ಲಿ ವಹಿವಾಟು ನಡೆಸಬೇಕೆಂದು ಒತ್ತಾಯಿಸಲು ಸಾಧ್ಯವಾಗುತ್ತದೆ.
(ಒನ್ಇಂಡಿಯಾ ಸುದ್ದಿ)
-
LPG ಸಿಲಿಂಡರ್ ಕೊರತೆ: ಗಗನಕ್ಕೇರಿದ ಸೌದೆ ಬೆಲೆ, ಸ್ಟೌವ್ ರಿಪೇರಿ ಅಂಗಡಿಗಳಿಗೆ ಫುಲ್ ಡಿಮ್ಯಾಂಡ್ -
Karan Adani: ತಂದೆ-ತಾಯಿಯಿಂದ ಕಲಿತ ನಾಯಕತ್ವದ ಪಾಠಗಳನ್ನ ಬಿಚ್ಚಿಟ್ಟ ಕರಣ್ ಅದಾನಿ -
Adani Group: ಭಾರತದಾದ್ಯಂತ 300 ಶಾಲೆಗಳು, 30 ಆಸ್ಪತ್ರೆಗಳ ನಿರ್ಮಾಣಕ್ಕೆ ಅದಾನಿ ಗ್ರೂಪ್ ₹60,000 ಕೋಟಿ ಹೂಡಿಕೆ: ಕರಣ್ ಅದಾನಿ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications