ಭಾರತದ ಪ್ರಮುಖ ಬ್ರಾಂಡ್ಗಳ ಜೇನುತುಪ್ಪಕ್ಕೆ ಸಕ್ಕರೆ ಪಾಕದ ಕಲಬೆರಕೆ: CSE
ನವದೆಹಲಿ, ಡಿಸೆಂಬರ್ 03: ಭಾರತದ ಹಲವಾರು ಪ್ರಮುಖ ಬ್ರಾಂಡ್ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕದ ಕಲಬೆರಕೆಯಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ) ಬುಧವಾರ ಹೇಳಿದೆ.
ಜೇನುತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ಸಿಎಸ್ಇ 13 ಉನ್ನತ ಮತ್ತು ಸಣ್ಣ ಬ್ರಾಂಡ್ಗಳನ್ನು ಪರೀಕ್ಷೆ ಮಾಡಿ ನೋಡಿದೆ. ಆದರೆ ಈ ಬ್ರಾಂಡ್ಗಳಲ್ಲಿ ಶೇಕಡಾ 77 ರಷ್ಟು ಸಕ್ಕರೆ ಪಾಕವನ್ನು ಸೇರಿಸುವುದರೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದು ಕಂಡುಬಂದಿದೆ. ಒಟ್ಟಾರೆ ಪರಿಶೀಲಿಸಿದ 22 ಮಾದರಿಗಳಲ್ಲಿ ಕೇವಲ ಐದು ಪರೀಕ್ಷೆಗಳು ಮಾತ್ರ ಉತ್ತೀರ್ಣವಾಗಿವೆ.
'' ಪ್ರಮುಖ ಬ್ರಾಂಡ್ಗಳಾದ ಡಾಬರ್, ಪತಂಜಲಿ, ಬೈದ್ಯನಾಥ್, ಜಂಡೂ, ಹಿಟ್ಕರಿ ಮತ್ತು ಆಪಿಸ್ ಹಿಮಾಲಯದ ಜೇನುತುಪ್ಪದ ಮಾದರಿಗಳು ಎನ್ಎಂಆರ್ (ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್) ಪರೀಕ್ಷೆಯಲ್ಲಿ ವಿಫಲವಾಗಿವೆ" ಎಂದು ಅಧ್ಯಯನ ತಿಳಿಸಿದೆ.
ಇದಕ್ಕೆ ಉತ್ತರಿಸಿರುವ ಇಮಾಮಿ (ಜಂಡೂ)ಕಂಪನಿಯ ವಕ್ತಾರರು '' ಜವಾಬ್ದಾರಿಯುತ ಸಂಘಟನೆಯಾಗಿ ಇಮಾಮಿ ತನ್ನ ಜಂಡೂ ಶುದ್ಧ ಜೇನುತುಪ್ಪವನ್ನು ಭಾರತ ಸರ್ಕಾರ ಮತ್ತು ಅದರ ಅಧಿಕೃತ ಘಟಕಗಳಾದ ಎಫ್ಎಸ್ಎಸ್ಎಐನಂತಹ ಎಲ್ಲಾ ನಿಯಮಗಳು ಮತ್ತು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ'' ಎಂದಿದ್ದಾರೆ.
ಇನ್ನು ಡಾಬರ್ ಕೂಡ ಈ ಆರೋಪವನ್ನು ನಿರಾಕರಿಸಿದೆ. '' ಇತ್ತೀಚಿನ ವರದಿಗಳು ನಮ್ಮ ಬ್ರ್ಯಾಂಡ್ ಅನ್ನು ಕೆಡಿಸುವ ಉದ್ದೇಶವನ್ನು ಹೊಂದಿವೆ ಎಂದು ತೋರುತ್ತದೆ. ಡಾಬರ್ ಜೇನುತುಪ್ಪವು ಶೇಕಡಾ 100 ರಷ್ಟು ಶುದ್ಧವಾಗಿದೆ ಎಂದು ನಾವು ನಮ್ಮ ಗ್ರಾಹಕರಿಗೆ ಭರವಸೆ ನೀಡುತ್ತೇವೆ. ಇದು ಶೇಕಡಾ 100 ರಷ್ಟು ಸ್ಥಳೀಯವಾಗಿದೆ, ಭಾರತೀಯ ಮೂಲಗಳಿಂದ ನೈಸರ್ಗಿಕವಾಗಿ ಸಂಗ್ರಹಿಸಲ್ಪಟ್ಟಿದೆ ಮತ್ತು ಯಾವುದೇ ಸಕ್ಕರೆ ಅಥವಾ ಇತರೆ ಏನನ್ನೂ ತುಂಬಿಲ್ಲ. ಡಾಬರ್ ಯಾವುದೇ ಜೇನು ಅಥವಾ ಸಿರಪ್ ಅನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ನಾವು ನಮ್ಮ ಗ್ರಾಹಕರಿಗೆ ಭರವಸೆ ನೀಡುತ್ತೇವೆ'' ಎಂದು ಹೇಳಿದೆ.
ಇದರ ಜೊತೆ ನಾವು ಜೇನು ಅಥವಾ ಯಾವುದೇ ಸಿರಪ್ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದಿಲ್ಲ. ನಮ್ಮ ಜೇನುತುಪ್ಪವನ್ನು ಸಂಪೂರ್ಣವಾಗಿ ಭಾರತೀಯ ಜೇನುಸಾಕಣೆದಾರರಿಂದ ಪಡೆಯಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.