ಬಿನ್ನಿ ಹಠಾತ್ ನಿರ್ಗಮನ: ಫ್ಲಿಪ್ ಕಾರ್ಟ್ ಉದ್ಯೋಗಿಗಳಲ್ಲಿ ಅಚ್ಚರಿ, ಆಘಾತ
ಬೆಂಗಳೂರು, ನವೆಂಬರ್ 14: ವೈಯಕ್ತಿಕ ದುರ್ನಡತೆ ಆರೋಪ ಬಂದ ಕಾರಣ ಸ್ಥಾನ ತ್ಯಜಿಸಿರುವ ಫ್ಲಿಪ್ ಕಾರ್ಟ್ನ ಸಹ ಸಂಸ್ಥಾಪಕ ಮತ್ತು ಸಮೂಹದ ಸಿಇಒ ಬಿನ್ನಿ ಬನ್ಸಲ್ ಅವರ ಹಠಾತ್ ನಿರ್ಧಾರ ಅಲ್ಲಿನ ಉದ್ಯೋಗಿಗಳಿಗೆ ಆಘಾತ ಉಂಟುಮಾಡಿದೆ.
ತಮ್ಮ ಕಂಪೆನಿಯಲ್ಲಿ ಈ ರೀತಿಯ ಘಟನೆ ನಡೆದಿದೆ ಎನ್ನುವುದು ಅವರಿಗಿನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅದರ ಉಳಿದ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದೆ ಗೊಂದಲಕ್ಕೂ ಸಿಲುಕಿದ್ದಾರೆ. ಈ ನಡುವೆ ಅದರ ವ್ಯವಹಾರ ವಹಿವಾಟಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ವೈಯಕ್ತಿಕ ದುರ್ನಡತೆ ಎಂಬ ಆರೋಪದ ಹೊರತಾಗಿ ಬೇರೆ ಏನು ನಡೆದಿದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹೀಗಾಗಿ ಅಧಿಕೃತವಾಗಿ ಯಾವ ಮಾಹಿತಿ ಬರುತ್ತಿದೆಯೋ ಎಂಬುದನ್ನು ತಿಳಿದುಕೊಳ್ಳಲು ಉದ್ಯೋಗಿಗಳ ಪರಸ್ಪರ ಚರ್ಚೆ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
'ಪ್ರತಿಯೊಬ್ಬರೂ ಅಚ್ಚರಿಗೆ ಒಳಗಾಗಿದ್ದಾರೆ. ಏಕೆಂದರೆ ಸಂಸ್ಥೆಯೊಳಗೆ ಈ ರೀತಿಯ ಯಾವುದೇ ಘಟನೆ ನಡೆದಿದೆ ಎಂಬುದರ ಸುಳಿವೂ ಇರಲಿಲ್ಲ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು, ವಿವಾದಗಳು ಉಂಟಾದಾಗ ಆ ಬೆಳವಣಿಗೆಗಳ ಬಗ್ಗೆ ಕಂಪೆನಿಯ ಕಾರಿಡಾರ್ಗಳಲ್ಲಿ ಸುಳಿವು ಸಿಗುತ್ತಿದ್ದವು' ಎಂದು ಅದರ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಮಾಧ್ಯಮದ ಜತೆ ಮಾತನಾಡಬೇಡಿ
ಬಿನ್ನಿ ತಮಗೆ ಆಪ್ತರಾಗಿದ್ದ ಕೆಲವು ಉದ್ಯೋಗಿಗಳಿಂದ ಪ್ರತಿಜ್ಞೆ ಮಾಡಿಸಿಕೊಂಡಿದ್ದಾರೆ, ಇನ್ನು ಉಳಿದವರು ಪ್ರಕರಣದ ಬಗ್ಗೆ ಊಹಿಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡದಂತೆ ಫ್ಲಿಪ್ ಕಾರ್ಟ್ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಹಿಂದೆಯೇ ನಿಗದಿಯಾಗಿತ್ತು
ಆದರೆ, ಬಿನ್ನಿ ಅವರು ಹೊರ ನಡೆದಿರುವುದು ಯಾವುದೇ ಭಾರಿ ಬದಲಾವಣೆಗಳನ್ನು ತರುವುದಿಲ್ಲ ಎಂದೂ ಹೇಳಲಾಗಿದೆ.
'ಇದು ಪೂರ್ವನಿಯೋಜಿತ. ಇದು ಮುಂದಿನ ವರ್ಷವೂ ನಡೆಯಬಹುದಿತ್ತು' ಎಂದು ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ತಮ್ಮ ಉದ್ಯೋಗಿಗಳಿಗೆ ಇ ಮೇಲ್ ಸಂದೇಶ ರವಾನಿಸಿದ್ದ ಬಿನ್ನಿ, ಇನ್ನು ಕೆಲವು ಅವಧಿಯವರೆಗೆ ಮಾತ್ರ ಸಮೂಹದ ಸಿಇಒ ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದರು. ಹಠಾತ್ತಾಗಿ ಅವರು ನಿರ್ಗಮಿಸಿರುವುದು ಉದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ.

ಕಾರ್ಯವೈಖರಿಯಲ್ಲಿ ಬದಲಾವಣೆ ಇಲ್ಲ
'ನಮ್ಮ ಕಾರ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಮತ್ತು ಕಂಪೆನಿಯ ಯೋಜನೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಉದ್ಯೋಗಿಗಳಿಗೆ ಬರೆದ ಇ ಮೇಲ್ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಲ್ಯಾಣ್-ಸಮೀರ್ ಗೆ ಅಧಿಕಾರ
ಬಿನ್ನಿ ಬನ್ಸಾಲ್ ಅವರಿಂದ ತೆರವಾದ ಸ್ಥಾನವನ್ನು ಕಲ್ಯಾಣ್ ಕೃಷ್ಣಮೂರ್ತಿ ಮತ್ತು ಸಮೀರ್ ನಿಗಂ ತುಂಬಲಿದ್ದಾರೆ.
ಫ್ಲಿಪ್ ಕಾರ್ಟ್ ಸಿಇಒ ಆಗಿರುವ ಕಲ್ಯಾಣ್, ಅವರಿಗೆ ಮೈಂತ್ರಾ ಮತ್ತು ಜಬೊಂಗ್ ಮುಖ್ಯಸ್ಥರಾಗಿರುವ ಅನಂತ್ ನಾರಾಯಣನ್ ವರದಿ ಮಾಡಿಕೊಳ್ಳಲಿದ್ದಾರೆ.
ಫ್ಲಿಪ್ ಕಾರ್ಟ್ ಜತೆಗೆ ಮೈಂತ್ರಾ ಮತ್ತು ಜಬೊಂಗ್ ಸಂಸ್ಥೆಗಳು ಸಹ ಒಂದುಗೂಡಲಿವೆ. ಆದರೆ, ಫ್ಲಿಪ್ ಕಾರ್ಟ್ ವ್ಯವಹಾರದ ಒಳಗೇ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲಿವೆ ಎಂದು ದಿ ವಾಲ್ಮಾರ್ಟ್-ಫ್ಲಿಪ್ ಕಾರ್ಟ್ ಸಮೂಹದ ಹೇಳಿಕೆ ತಿಳಿಸಿದೆ.
ಕಲ್ಯಾಣ್ ಅವರು ಸಂಸ್ಥೆಯ ಎಲ್ಲ ವ್ಯವಹಾರಗಳ ವರದಿಗಳನ್ನು ಮಂಡಳಿಗೆ ನೇರವಾಗಿ ಒಪ್ಪಿಸಲಿದ್ದಾರೆ. ಫೋನ್ ಪೆ ಪೇಮೆಂಟ್ ಸೇವೆಯ ಸಿಇಒ ಆಗಿರುವ ಸಮೀರ್ ನಿಗಂ ಅವರೂ ಕೂಡ ಮಂಡಳಿಗೆ ನೇರವಾಗಿ ವರದಿ ಒಪ್ಪಿಸಲಿದ್ದಾರೆ.

ದುರ್ನಡತೆ ಆರೋಪ
ಬಿನ್ನಿ ಬನ್ಸಲ್ ವಿರುದ್ಧ ವೈಯಕ್ತಿಕ ದುರ್ನಡತೆ ಆರೋಪದ ಮೇಲೆ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ನಿಂದ ಸ್ವತಂತ್ರ ತನಿಖೆಯೊಂದು ನಡೆದಿತ್ತು. ಆ ನಂತರ ತಮ್ಮ ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಅವರು ಬಂದಿದ್ದರು.
ದೂರುದಾರರು ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. ಆದರೆ ತೀರ್ಪು ಕೈಗೊಳ್ಳುವ ವೇಳೆಯಲ್ಲಿ ಇತರ ಲೋಪಗಳು ಕಂಡುಬಂದಿವೆ. ಮುಖ್ಯವಾಗಿ ಪಾರದರ್ಶಕತೆ ಹಾಗೂ ಆ ಸನ್ನಿವೇಶಕ್ಕೆ ಬಿನ್ನಿ ಪ್ರತಿಕ್ರಿಯೆ ನೀಡಿದ ರೀತಿ ಬಗ್ಗೆ ಲೋಪಗಳು ಕಂಡುಬಂದಿವೆ. ಆದ್ದರಿಂದ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದೇವೆ ಎಂದು ವಾಲ್ ಮಾರ್ಟ್ ಹೇಳಿಕೆಯಲ್ಲಿ ತಿಳಿಸಲಾಗಿದೆ.












Click it and Unblock the Notifications