ಆರ್ಥಿಕ ಸುಧಾರಣೆಗೆ ಮಹತ್ವದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್
ನವದೆಹಲಿ, ಸೆಪ್ಟೆಂಬರ್ 20: ಆರ್ಥಿಕ ಕುಸಿತದಿಂದ ಪರಿಸ್ಥಿತಿಯನ್ನು ಸುಧಾರಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮುಖ್ಯವಾಗಿ ದೇಶಿ ಕಂಪೆನಿಗಳು ಮತ್ತು ನೂತನ ಉತ್ಪಾದನಾ ಕಂಪೆನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿದ್ದಾರೆ. ಇದರ ಜತೆಗೆ ಇತರೆ ಸೌಲಭ್ಯಗಳನ್ನು ಕೂಡ ನೀಡಲಾಗಿದೆ. ಈ ನಿರ್ಧಾರದಿಂದ ಸರ್ಕಾರಕ್ಕೆ 1.45 ಲಕ್ಷ ಕೋಟಿ ರೂ. ಹೊರೆಯಾಗಲಿದೆ.
2019-20ರ ಹಣಕಾಸು ವರ್ಷದಿಂದ ಜಾರಿಯಾಗುವಂತೆ ಆದಾಯ ತೆರಿಗೆ ಕಾಯ್ದೆಯಡಿ ಹೊಸ ಅಂಶವನ್ನು ಅಡಕ ಮಾಡಲಾಗಿದೆ. ಯಾವುದೇ ವಿನಾಯಿತಿ ಅಥವಾ ಇನ್ಸೆಂಟಿವ್ ಹೊಂದಿರದೆ ಇದ್ದರೆ ಶೇ 22ರಷ್ಟು ಆದಾಯ ತೆರಿಗೆ ಪಾವತಿಸುವ ಆಯ್ಕೆಯನ್ನು ಹೊಂದಲಿವೆ. ಈ ಕಂಪೆನಿಗಳ ತೆರಿಗೆ ದರವು ಎಲ್ಲ ಸರ್ಚಾರ್ಜ್ ಮತ್ತು ಸೆಸ್ಗಳನ್ನು ಒಳಗೊಂಡಂತೆ ಶೇ 25.17ರಷ್ಟು ಪರಿಣಾಮಕಾರಿ ತೆರಿಗೆ ಹೊಂದಿರಲಿವೆ.
ಏಷ್ಯಾದ ಇತರೆ ಕಾರ್ಪೊರೇಟ್ ವಲಯಗಳೊಂದಿಗೆ ಸರಿಸಮವಾಗಿ ಭಾರತದ ತೆರಿಗೆ ದರವನ್ನು ತರಲು ಮತ್ತು ಅಮೆರಿಕ-ಚೀನಾ ವ್ಯಾಪಾರ ಕದನದಿಂದ ಉಂಟಾಗಿರುವ ಹಿನ್ನಡೆಯಿಂದ ಪರ್ಯಾಯ ತಾಣಗಳನ್ನು ಹುಡುಕುತ್ತಿರುವ ಕಂಪೆನಿಗಳನ್ನು ಸೆಳೆದು ಹೂಡಿಕೆಯನ್ನು ಅಕರ್ಷಿಸುವ ಪ್ರಯತ್ನಗಳನ್ನು ಉತ್ತೇಜಿಸಲು ಈ ನಡೆ ನೆರವಾಗುವ ನಿರೀಕ್ಷೆಯಿದೆ.

ಹೊಸ ಕಂಪೆನಿಗಳಿಗೆ ಶೇ 15ರಷ್ಟು ತೆರಿಗೆ
'ಭಾರತದಲ್ಲಿಯೇ ತಯಾರಿಸಿ' ಯೋಜನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮತ್ತು ಹೊಸದಾಗಿ ಹೂಡಿಕೆಗಳನ್ನು ಆಕರ್ಷಿಸಲು 2019ರ ಅಕ್ಟೋಬರ್ 1ರ ನಂತರ ಸ್ಥಾಪನೆಯಾಗುವ ಯಾವುದೇ ಹೊಸ ದೇಶಿ ಉತ್ಪಾದನಾ ಕಂಪೆನಿಯು ಶೇ 15ರಷ್ಟು ಮಾತ್ರ ತೆರಿಗೆ ಪಾವತಿಸುವ ಆಯ್ಕೆ ಪಡೆದುಕೊಳ್ಳಲಿದೆ. ಇದು ಯಾವುದೇ ವಿನಾಯಿತಿಯನ್ನು ಹೊಂದಿರದ ಇತರೆ ಕಂಪೆನಿಗಳಿಗೂ ಅನ್ವಯವಾಗಲಿದೆ. ಹೊಸ ತೆರಿಗೆ ದರವು ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ' ಎಂದು ನಿರ್ಮಲಾ ಪ್ರಕಟಿಸಿದರು.

ಷೇರು ಖರೀದಿ ಹಿಂಪಡೆಯುವಿಕೆಗೆ ತೆರಿಗೆ ಇಲ್ಲ
ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕರ ವಹಿವಾಟುಗಳಿಗೆ ಅರ್ಹತೆ ಪಡೆದುಕೊಂಡಿರುವ (ಲಿಸ್ಟೆಡ್) ಕಂಪೆನಿಗಳು 2019ರ ಜುಲೈ 5ರ ಮುನ್ನ ಖರೀದಿ ಹಿಂಪಡೆಯುವಿಕೆ ಘೋಷಿಸಿದ್ದರೆ, ಷೇರುಗಳ ಖರೀದಿ ಹಿಂಪಡೆಯುವಿಕೆ ಮೇಲೆ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

ಎಫ್ಪಿಐ ಸರ್ಚಾರ್ಜ್ ಇಲ್ಲ
ವಿದೇಶಿ ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್ (ಎಫ್ಪಿಐ) ಅಡಿಯಲ್ಲಿರುವ ಉತ್ಪಾದನೆ ಸೇರಿದಂತೆ ಭದ್ರತೆಯ ಮಾರಾಟದ ಮೇಲಿನ ಬಂಡವಾಳ ಗಳಿಕೆಗೆ ಅಧಿಕ ಸರ್ಚಾರ್ಜ್ ಅನ್ವಯವಾಗುವುದಿಲ್ಲ.
ಭದ್ರತಾ ಪತ್ರಗಳ ವಹಿವಾಟು ತೆರಿಗೆಗೆ (ಎಸ್ಟಿಟಿ) ಬದ್ಧವಾಗಿರುವ ಈಕ್ವಿಟಿ ಆಧಾರಿತ ನಿಧಿ ಅಥವಾ ಈಕ್ವಿಟಿ ಮಾರಾಟದಿಂದ ಸಿಗುವ ಬಂಡವಾಳ ಗಳಿಕೆಗೆ ಹೆಚ್ಚುವರಿ ಸರ್ಚಾರ್ಜ್ ಅನ್ವಯವಾಗುವುದಿಲ್ಲ.

ಎಂಎಟಿ ಶೇ 15ಕ್ಕೆ ಇಳಿಕೆ
ಕಂಪೆನಿಗಳಿಗೆ ವಿನಾಯಿತಿ ಮತ್ತು ಪ್ರಯೋಜನಗಳನ್ನು ಒದಗಿಸುವ ಮೂಲಕ ಕನಿಷ್ಠ ಪರ್ಯಾಯ ತೆರಿಗೆ (ಎಂಎಟಿ) ಅನ್ನು ಶೇ 18 ರಿಂದ ಶೇ 15ಕ್ಕೆ ತಗ್ಗಿಸಲಾಗಿದೆ.
ರಾಜ್ಯ ಅಥವಾ ಕೇಂದ್ರ ಸರ್ಕಾರ ನಡೆಸುವ ಸಂಸ್ಥೆಗಳು, ಪಿಎಸ್ಯುಗಳು, ಶೈಕ್ಷಣಿಕ ಸಂಸ್ಥೆ, ಐಐಟಿ, ಲ್ಯಾಬೋರೇಟರಿಗಳ ದೇಣಿಗೆಗೆ ಕೂಡ ಶೇ 2ರಷ್ಟು ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ವಿಸ್ತರಿಸುವುದಾಗಿ ಪ್ರಕಟಿಸಲಾಗಿದೆ.

ಷೇರು ಮಾರುಕಟ್ಟೆ ಜಿಗಿತ
ನಿರ್ಮಲಾ ಸೀತಾರಾಮನ್ ಅವರು ಹೊಸ ಆರ್ಥಿಕ ಘೋಷಣೆಗಳನ್ನು ಮಾಡುತ್ತಿದ್ದಂತೆಯೇ ಷೇರು ಮಾರುಕಟ್ಟೆ ದಿಢೀರನೆ ಬೆಳವಣಿಗೆ ಕಂಡಿದೆ. ನಿಫ್ಟಿ 300 ಅಂಕಗಳಷ್ಟು ಜಿಗಿತ ಕಂಡಿದೆ. ಸೆನ್ಸೆಕ್ಸ್ 1,300 ಅಂಕಗಳಷ್ಟು ಏರಿಕೆಯಾಗಿದೆ. ಕೇಂದ್ರದ ಹೊಸ ಭರವಸೆಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯು ಈ ಸ್ಥಿತಿಯನ್ನು ಕಾಪಾಡಿಕೊಳ್ಳುವ ನಿರೀಕ್ಷೆಯಿದೆ.












Click it and Unblock the Notifications