ನೋಟು ನಿಷೇಧ ಬಹುದೊಡ್ಡ ವಿತ್ತೀಯ ಆಘಾತ: ಅರವಿಂದ್ ಸುಬ್ರಮಣಿಯನ್
ನವದೆಹಲಿ, ನವೆಂಬರ್ 29: ಅಪನಗದೀಕರಣವು ಅತ್ಯಂತ ತೀವ್ರವಾದ, ಕಠಿಣವಾದ ವಿತ್ತೀಯ ಆಘಾತ ಎಂದು ಕೇಂದ್ರ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.
2016ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ನಿರ್ಧಾರ ತೆಗೆದುಕೊಂಡ ಬಳಿಕ ಮೊದಲ ಬಾರಿಗೆ ಅರವಿಂದ್ ಸುಬ್ರಮಣಿಯನ್ ಮೌನ ಮುರಿದಿದ್ದಾರೆ.
ಅಪನಗದೀಕರಣಕ್ಕೂ ಮುನ್ನ ಶೇ 8ರಷ್ಟಿದ್ದ ಆರ್ಥಿಕ ಪ್ರಗತಿ ಏಳು ತ್ರೈಮಾಸಿಕ ಅವಧಿಗಳಲ್ಲಿ ಶೇ 6.8ಕ್ಕೆ ಕುಸಿದಿದ್ದು ಆಘಾತಕಾರಿ ಎಂದು ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.
ಇದರಿಂದ ಮೊದಲು ಅನೌಪಚಾರಿಕ ವಲಯಕ್ಕೆ ಭಾರಿ ಪ್ರಮಾಣದ ಹೊಡೆತ ಬಿದ್ದಿತು ಎಂದು ವಿವರಿಸಿದ್ದಾರೆ.

ತಮ್ಮ ನಾಲ್ಕು ವರ್ಷದ ಅವಧಿ ಮುಕ್ತಾಯಗೊಂಡ ಬಳಿಕ ಹುದ್ದೆಯಿಂದ ಹಿಂದೆ ಸರಿದಿದ್ದ ಅರವಿಂದ್, ತಮ್ಮ ಬಿಡುಗಡೆಯಾಗಲಿರುವ ಪುಸ್ತಕ 'ಆಫ್ ಕೌನ್ಸೆಲ್: ದಿ ಚಾಲೆಂಜಸ್ ಆಫ್ ದಿ ಮೋದಿ-ಜೇಟ್ಲಿ ಎಕಾನಮಿ'ದಲ್ಲಿ ಒಂದು ಅಧ್ಯಾಯವನ್ನು ಇದಕ್ಕಾಗಿಯೇ ಅವರು ಮೀಸಲಿಟ್ಟಿದ್ದಾರೆ.
'ಅಪನಗದೀಕರಣವು ತೀವ್ರ, ಕಠಿಣವಾದ ಆರ್ಥಿಕ ಆಘಾತ. ಚಾಲ್ತಿಯಲ್ಲಿದ್ದ ಶೇ 86ರಷ್ಟು ಕರೆನ್ಸಿಗಳನ್ನು ಒಂದೇ ಹಂತದಲ್ಲಿ ಹಿಂದಕ್ಕೆ ಪಡೆದುಕೊಳ್ಳಲಾಯಿತು. ಅಪನಗದೀಕರಣದಿಂದ ನೈಜ ಜಿಡಿಪಿ ಬೆಳವಣಿಗೆಗೆ ಹಾನಿಯಾಯಿತು. ಈ ಹಿಂದೆಯೂ ಬೆಳವಣಿಗೆ ಕುಂಠಿತಗೊಂಡಿತ್ತು. ಆದರೆ, ಅಪನಗದೀಕರಣದ ಬಳಿಕ ಕುಸಿತ ತೀವ್ರಗೊಂಡಿತು.'
ಅಪನಗದೀಕರಣಕ್ಕೆ ಆರು ತ್ರೈಮಾಸಿಕ ಅವಧಿಗೆ ಮುನ್ನ ಬೆಳವಣಿಗೆ ದರ ಶೇ 8ರಷ್ಟಿತ್ತು. ಏಳು ತ್ರೈಮಾಸಿಕ ಅವಧಿ ಬಳಿಕ ಅದು ಸರಾಸರಿ ಶೇ 6.8ಕ್ಕೆ ಕುಸಿಯಿತು ಎಂದು ಅವರು ಬರೆದಿದ್ದಾರೆ.
ಬೆಳವಣಿಗೆ ಕುಂಠಿತಗೊಳ್ಳಲು ಅಪನಗದೀಕರಣ ಕಾರಣ ಎಂಬುದಕ್ಕೆ ಯಾರ ತಕರಾರೂ ಇಲ್ಲ. ಆದರೆ, ಶೇ 2ರಷ್ಟು ಆಯಿತೇ ಅಥವಾ ಇನ್ನೂ ಕಡಿಮೆಯೇ ಎಂದು ಅದರ ಪರಿಣಾಮದ ಗಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ಅವಧಿಯಲ್ಲಿ ಅನೇಕ ಅಂಶಗಳು ಬೆಳವಣಿಗೆ ಮೇಲೆ ಪರಿಣಾಮ ಬೀರಿದ್ದವು. ಮುಖ್ಯವಾಗಿ ಅಧಿಕ ವಾಸ್ತವ ಬಡ್ಡಿ ದರಗಳು, ಜಿಎಸ್ಟಿ ಜಾರಿ ಮತ್ತು ತೈಲ ಬೆಲೆಗಳು ಆರ್ಥಿಕತೆಗೆ ಹೊಡೆತ ನೀಡಿದ್ದವು ಎಂದೂ ಹೇಳಿದ್ದಾರೆ.












Click it and Unblock the Notifications