ಕೇಂದ್ರದಿಂದ ಮತ್ತೊಂದು ಉತ್ತೇಜನ ಪ್ಯಾಕೇಜ್ ಘೋಷಣೆ ಸಾಧ್ಯತೆ
ನವದೆಹಲಿ, ಏಪ್ರಿಲ್ 15: ಕೊರೊನಾ ವೈರಸ್ ಎರಡನೆಯ ಅಲೆಯ ಹೊಡೆತ ಮತ್ತು ಸ್ಥಳೀಯ ಮಟ್ಟದ ನಿರ್ಬಂಧಗಳ ಕಾರಣದಿಂದ ದೇಶದ ಆರ್ಥಿಕ ಚಟುವಟಿಕೆಗಳಿಗೆ ಮತ್ತೆ ಹಿನ್ನಡೆಯುಂಟಾಗುತ್ತಿದ್ದು, ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮತ್ತೆ ಪ್ಯಾಕೇಜ್ಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಕೋವಿಡ್ ಸೋಂಕಿನ ಎರಡನೆಯ ಅಲೆಯು ಬಡಜನರ ಜೀವನಕ್ಕೆ ತೀವ್ರ ಹಾನಿ ಮಾಡುವಂತಹ ಸನ್ನಿವೇಶ ಎದುರಾದರೆ ಅವರಿಗೆ ಪರಿಹಾರ ಒದಗಿಸಲು ಈ ಪ್ಯಾಕೇಜ್ ಬಿಡುಗಡೆ ಮಾಡುವ ಉದ್ದೇಶ ಇದೆ ಎನ್ನಲಾಗಿದೆ.
ಕಳೆದ ವರ್ಷ ಮೊದಲ ಅಲೆಯ ವೇಳೆ ಲಾಕ್ಡೌನ್ ಮತ್ತಿತರ ನಿರ್ಬಂಧಗಳ ಕಾರಣದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐದು ಹಂತಗಳಲ್ಲಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಪ್ರಕಟಿಸಿದ್ದರು. ಇದರಲ್ಲಿ ಎಂಎಸ್ಎಂಇಗಳಿಗೆ 3.70 ಲಕ್ಷ ಕೋಟಿ ರೂ, ಎನ್ಬಿಎಫ್ಸಿಗಳಿಗೆ 75,000 ಕೋಟಿ ರೂ, ವಿದ್ಯುತ್ ವಿತರಣಾ ಕಂಪೆನಿಗಳಿಗೆ 90,000 ಕೋಟಿ ರೂ ಒಳಗೊಂಡಿತ್ತು.

ಇದರ ಜತೆಗೆ ಆರೋಗ್ಯ ಕ್ಷೇತ್ರಕ್ಕೆ 15,000 ಕೋಟಿ ರೂ ಅನುದಾನದ ಜತೆಗೆ ವಿವಿಧ ವಲಯಗಳಿಗೆ ತೆರಿಗೆ ವಿನಾಯಿತಿಗಳನ್ನು ನೀಡಲಾಗಿತ್ತು. ಕೋವಿಡ್ ಸೋಂಕು ಅಧಿಕಗೊಂಡಿರುವ ರಾಜ್ಯಗಳಲ್ಲಿನ ಬ್ಯಾಂಕಿಂಗ್ ಕ್ಷೇತ್ರ ಕೂಡ ಶೋಚನೀಯ ಸ್ಥಿತಿಯಲ್ಲಿದೆ. ಮಹಾರಾಷ್ಟ್ರದಲ್ಲಿನ ಲಾಕ್ಡೌನ್ ಎಲ್ಲ ಬ್ಯಾಂಕ್ ಸಾಲಗಳಿಗೆ ಹಿನ್ನಡೆಯುಂಟುಮಾಡಿದೆ ಎಂದು ವರದಿ ತಿಳಿಸಿದೆ.












Click it and Unblock the Notifications