ಊರ್ಜಿತ್ ಪಟೇಲ್ ಪ್ರಬುದ್ಧತೆ, ಹಣಕಾಸು ಸಚಿವಾಲಯದ ಪಟ್ಟು; ಗೆದ್ದಿದ್ದು ಯಾರು?
ರಿಸರ್ವ್ ಬ್ಯಾಂಕ್ ಗವರ್ನರ್ ತಮ್ಮ ಪ್ರಬುದ್ಧತೆ ತೋರಿಸಿದ್ದಾರೆ. ಕೇಂದ್ರ ಸರಕಾರದ ಜತೆಗಿನ ತಿಕ್ಕಾಟದಲ್ಲಿ ಅವರೇನಾದರೂ ರಾಜೀನಾಮೆ ನೀಡಿದ್ದರೆ ಪರಿಸ್ಥಿತಿ ಬಹಳ ಕಷ್ಟ ಆಗುತ್ತಿತ್ತು ಎಂದು ಆರ್ ಬಿಐನ ಮಾಜಿ ಗವರ್ನರ್ ಒಬ್ಬರು ತಮ್ಮ ಗುರುತು ಬಹಿರಂಗ ಮಾಡಬಾರದು ಎಂದು ಷರತ್ತು ಹಾಕಿ ಈ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸರಕಾರ ಕೂಡ ಆರ್ ಬಿಐ ಕಾಯ್ದೆ ಸೆಕ್ಷನ್ 7 ಕೈಗೆತ್ತಿಕೊಳ್ಳಲಿಲ್ಲ ಎಂಬುದು ಸಮಾಧಾನದ ಸಂಗತಿ. ಒಂದು ವೇಳೆ ಆ ಕ್ರಮಕ್ಕೆ ಮುಂದಾಗಿದ್ದರೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡುವಂಥ ಪರಿಸ್ಥಿತಿ ಬಂದಿರುತ್ತಿತ್ತು. ಹಾಗೊಂದು ವೇಳೆ ಆಗಿದ್ದರೆ ಮಾರುಕಟ್ಟೆ ಮೇಲೆ ಹಾಗೂ ಲೋಕಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು ಒಟ್ಟಾರೆ ಆರ್ಥಿಕತೆ ಮೇಲೆ ಪ್ರತಿಕೂಲ ಪ್ರಭಾವ ಬೀರಿರುತ್ತಿತ್ತು.
ಸದ್ಯಕ್ಕೇನೋ ಸರಕಾರದ ಜತೆಗೆ ಸಂಘರ್ಷದಲ್ಲಿ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಉಳಿಸಿಕೊಂಡಂತೆ ಆರ್ ಬಿಐ ಕಾಣುತ್ತಿದೆ. ಆದರೆ ಪಟೇಲ್ ನಿರ್ಧಾರದಿಂದಾಗಿ ಸದ್ಯದ ಸನ್ನಿವೇಶವನ್ನು ತಮಣಿ ಮಾಡಲು ಸಂಪೂರ್ಣ ಸಾಧ್ಯವಿಲ್ಲ. ಏಕೆಂದರೆ ಸರಕಾರದ ಆಕ್ಷೇಪಗಳ ಪೈಕಿ ಊರ್ಜಿತ್ ಪಟೇಲ್ ಕಾರ್ಯ ನಿರ್ವಹಿಸುವ ಬಗೆ ಕೂಡ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತ್ತು.

ದೇಶದ ಹಿತಾಸಕ್ತಿ ಕಡೆಗೆ ಹೆಚ್ಚಿನ ಗಮನ ನೀಡಿದ್ದಾರೆ ಊರ್ಜಿತ್
ಊರ್ಜಿತ್ ಪಟೇಲ್ ಬಹಳ ಮೊಂಡು ಹಿಡಿಯುತ್ತಾರೆ. ಬ್ಯಾಂಕ್ ಬಗ್ಗೆ ಸರಿಯಾದ ಮಾಹಿತಿಯನ್ನು ಸರಕಾರದ ಜತೆಗೆ ಹಂಚಿಕೊಳ್ಳುವುದಿಲ್ಲ ಎಂಬುದು ಚರ್ಚೆಯ ವಿಷಯವಾಗಿತ್ತು. "ಭಾರತದಲ್ಲಿ ವೃತ್ತಿಪರತೆ ವಿಚಾರಕ್ಕೆ ಬಂದರೆ ಮರುಭೂಮಿಯಲ್ಲಿನ ಓಯಸಿಸ್ ನಂತೆ ಆರ್ ಬಿಐ. ಚುನಾವಣೆಗೆ ಆರು ತಿಂಗಳಿರುವಂತೆ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿ, ಆರ್ಥಿಕ ಸಮಸ್ಯೆ ಸೃಷ್ಟಿಸಿಬಹುದಿತ್ತು. ಆದರೆ ಅಲ್ಪಕಾಲೀನ ಒತ್ತಡಕ್ಕೆ ಸಿಲುಕಿರುವ ಸರಕಾರವು ದೀರ್ಘಾವಧಿಯ ಸ್ಥಿರತೆಯನ್ನು ತ್ಯಾಗ ಮಾಡಲು ಸಿದ್ಧವಾಗಿದೆ. ದೇಶದ ಹಿತಾಸಕ್ತಿ ಮುಖ್ಯ ಎಂಬ ಕಾರಣಕ್ಕೆ ತಮ್ಮ ಅಹಂಕಾರವನ್ನು ಊರ್ಜಿತ್ ಪಟೇಲ್ ತೋರಿಲ್ಲ. ಮೊಂಡು ಹಿಡಿದು ಅವರು ರಾಜೀನಾಮೆ ನೀಡಿದ್ದರೆ ಏನಾಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ಅವರು ರಾಜೀನಾಮೆ ನೀಡಿದ್ದರೆ ಇಬ್ಬರು ಡೆಪ್ಯೂಟಿ ಗವರ್ನರ್ ಗಳೂ ರಾಜೀನಾಮೆ ನೀಡಿ, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿತ್ತು " ಎಂದು ಮಾಜಿ ಗವರ್ನರ್ ಹೇಳಿದ್ದಾರೆ.

ಪಟ್ಟು ಬಿಡದ ಹಣಕಾಸು ಸಚಿವಾಲಯ
ಹಣಕಾಸು ಸಚಿವಾಲಯದಿಂದ ಬೇಡಿಕೆ ಈಡೇರಲೇಬೇಕು ಎಂಬ ಪಟ್ಟು ಬಲವಾಗಿದೆ. ಈ ವಿವಾದವನ್ನು ಬಗೆಹರಿಸಿಕೊಳ್ಳಲು ಆರ್ ಬಿಐ ತಂಡ ಹಾಗೂ ಸರಕಾರದಿಂದ ಪ್ರಬುದ್ಧತೆ ತೋರಲಾಗುತ್ತಿದೆ. ಈ ಹಂತದಲ್ಲಿ ಯಾರು ಗೆದ್ದರು ಹಾಗೂ ಯಾರು ಸೋತರು ಎಂಬ ಚರ್ಚೆ ನಡೆಯುವಾಗ ಈ ಅಂಶದ ಬಗ್ಗೆ ಗಮನ ಸೆಳೆಯಬೇಕು ಎನ್ನುತ್ತಾರೆ.

ಹಣಕಾಸು ಸಚಿವರು ಹಾಗೂ ಪ್ರಧಾನಿಯನ್ನು ಭೇಟಿ ಆಗಿದ್ದರು
ಈಗಿನ ಸಮಸ್ಯೆಗೆ ಊರ್ಜಿತ್ ಪಟೇಲ್ ಮೊಂಡುತನವೇ ಕಾರಣ ಎಂಬ ವಾದ ಒಪ್ಪಲು ಸಾಧ್ಯವಿಲ್ಲ. ಇಂಥ ಸನ್ನಿವೇಶದಲ್ಲಿ ಪಟೇಲ್ ಸ್ಥಾನದಲ್ಲಿ ಯಾರಿದ್ದರೂ ಹೀಗೇ ಆಗಿರುತ್ತಿತ್ತು. ಪಟೇಲ್ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಲಿಲ್ಲ ಎನ್ನಲು ಸಾಧ್ಯವಿಲ್ಲ. ಪ್ರಧಾನಿ ಹಾಗೂ ಹಣಕಾಸು ಸಚಿವರನ್ನು ಪಟೇಲ್ ಭೇಟಿ ಮಾಡಿದರು. ಸರಕಾರ ಬಹಳ ಒತ್ತಡ ಹಾಕಿದರೆ ಹಾಗೂ ಆರ್ ಬಿಐ ಮಂಡಳಿ ಬಹಳ ಕಠಿಣವಾದರೆ ಪಟೇಲ್ ಏನು ಮಾಡುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸ್ವಲ್ಪ ಮಟ್ಟಿನ ಸ್ವಾಯತ್ತತೆ ಕಳೆದುಕೊಂಡ ಆರ್ ಬಿಐ
ರಾಜೀನಾಮೆ ನೀಡದೆ ಬಿಕ್ಕಟ್ಟು ಇನ್ನಷ್ಟು ತಾರಕಕ್ಕೆ ಹೋಗುವುದನ್ನು ಊರ್ಜಿತ್ ಪಟೇಲ್ ತಡೆದರು. ಮಂಡಳಿಯ ಕೆಲವು ಬೇಡಿಕೆಗಳಿಗೆ ಸ್ಪಂದಿಸಿದರು. ಆರ್ ಬಿಐ ಸ್ವಲ್ಪ ಮಟ್ಟಿಗಿನ ಸ್ವಾಯತ್ತತೆ ಕಳೆದುಕೊಂಡಿತು. ಆರ್ ಬಿಐನಿಂದ ಲಾಭಾಂಶ ಹಾಗೂ ಕ್ಷೇತ್ರವಾರು ಅಗತ್ಯಗಳ ಪೂರೈಕೆ ವಿಚಾರವನ್ನು ಮಂಡಳಿ ಕೈಗೆತ್ತಿಕೊಂಡಿತು. ಅದರಲ್ಲೂ ಕ್ಯಾಪಿಟಲ್ ಅಡಿಕ್ವಸಿ ರೇಷಿಯೋ (ಬಂಡವಾಳ ಅಗತ್ಯ ಪ್ರಮಾಣ) ನೀತಿ ನಿರೂಪಣೆಯ ವಿಷಯ. ಇದೇ ಮೊದಲ ಬಾರಿಗೆ ಬಂಡವಾಳ ಅಗತ್ಯ ಪ್ರಮಾಣದ ಬಗೆಗಿನ ಸಲಹೆ ಕೇಂದ್ರ ಬ್ಯಾಂಕ್ ನಿಂದ ಬಾರದೆ ಆರ್ ಬಿಐ ಮಂಡಳಿಯಿಂದ ಬಂದಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.












Click it and Unblock the Notifications