ಮಲ್ಯ, ನೀರವ್ ಮತ್ತು ಚೋಕ್ಸಿಯಿಂದ 18,000 ಕೋಟಿ ರೂ. ವಸೂಲಿ ಮಾಡಿದ ಬ್ಯಾಂಕ್
ನವದೆಹಲಿ, ಫೆಬ್ರವರಿ 23: ಭಾರತೀಯ ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ 18,000 ಕೋಟಿ ರೂಪಾಯಿಗಳನ್ನು ಬ್ಯಾಂಕ್ಗಳಿಗೆ ಹಿಂತಿರುಗಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬುಧವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ಮೆಹ್ತಾ ಅವರು ಕೇಂದ್ರವನ್ನು ಪ್ರತಿನಿಧಿಸಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ನೇತೃತ್ವದ ಪೀಠದ ಮುಂದೆ ಈ ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಪ್ರಕರಣಗಳಲ್ಲಿನ ಅಪರಾಧಗಳ ಒಟ್ಟು ಆದಾಯ 67,000 ಕೋಟಿ ರೂ. ಆಗಿದೆ.
ಇಲ್ಲಿಯವರೆಗೆ ಜಾರಿ ನಿರ್ದೇಶನಾಲಯವು 4,700 ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ. ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷ ತನಿಖೆಗೆ ತೆಗೆದುಕೊಂಡ ಪ್ರಕರಣಗಳ ಸಂಖ್ಯೆಯು 2015-16 ರಲ್ಲಿ 111 ಆಗಿದ್ದು ಪ್ರಕರಣವು 2020-21 ರಲ್ಲಿ 981 ಆಗಿದೆ ಎಂದು ಮಾಹಿತಿಯನ್ನು ಕೂಡಾ ನೀಡಿದ್ದಾರೆ.

ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ 18,000 ಕೋಟಿ ರೂಪಾಯಿಗಳನ್ನು ಬ್ಯಾಂಕ್ಗಳಿಗೆ ಹಿಂತಿರುಗಿಸಲಾಗಿದೆ ಎಂದು ಮೆಹ್ತಾ ಪೀಠದ ಮುಂದೆ ಹೇಳಿದ್ದಾರೆ. ಉನ್ನತ ನ್ಯಾಯಾಲಯವು ಕಾನೂನಿನ ಅಡಿಯಲ್ಲಿ ವಶಪಡಿಸಿಕೊಳ್ಳುವಿಕೆ, ತನಿಖೆ ಮೊದಲಾದವುಗಳಲ್ಲಿ ಜಾರಿ ನಿರ್ದೇಶನಾಲಯಕ್ಕೆ (ED) ಲಭ್ಯವಿರುವ ವ್ಯಾಪಕ ಅಧಿಕಾರವನ್ನು ಪ್ರಶ್ನಿಸಿರುವ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸುತ್ತಿದೆ.
ಮೆಹ್ತಾ ಅವರು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಿ.ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠದ ಮುಂದೆ, ಕಳೆದ ಐದು ವರ್ಷಗಳಲ್ಲಿ (2016-17 ರಿಂದ 2020-21), ಪೊಲೀಸರು ಮತ್ತು ಇತರ ಜಾರಿ ನಿರ್ದೇಶನಾಲಯಗಳು ಅಪರಾಧಗಳಿಗಾಗಿ ಅಂದಾಜು 33 ಲಕ್ಷದ ಎಫ್ಐಆರ್ನ ನೋಂದಣಿಯಲ್ಲಿ PMLA ಅಡಿಯಲ್ಲಿ ಕೇವಲ 2,086 ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಯುಕೆ, ರಷ್ಯಾಗಿಂತ ಭಾರತದಲ್ಲಿ ಕಡಿಮೆ ಪ್ರಕರಣಗಳ ತನಿಖೆ
ಯುಕೆ (7,900), ಯುಎಸ್ (1,532), ಚೀನಾ (4,691), ಆಸ್ಟ್ರಿಯಾ (1,036), ಹಾಂಗ್ಕಾಂಗ್ (1,823), ಬೆಲ್ಜಿಯಂ (1,862) ಮತ್ತು ರಷ್ಯಾ (2,764) ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ವಾರ್ಷಿಕ ನೋಂದಣಿ ಪ್ರಕರಣಗಳಿಗೆ ಹೋಲಿಸಿದರೆ ಪಿಎಂಎಲ್ಎ ಅಡಿಯಲ್ಲಿ ತನಿಖೆಗೆ ಬಹಳ ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಉಲ್ಲೇಖ ಮಾಡಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟಗಿ, ಸಿದ್ಧಾರ್ಥ್ ಲೂಥ್ರಾ, ಅಮಿತ್ ದೇಸಾಯಿ ಮತ್ತು ಇತರರು ಸೇರಿದಂತೆ ಹಿರಿಯ ವಕೀಲರು, ಪಿಎಂಎಲ್ಎ ನಿಬಂಧನೆಗಳ ದುರುಪಯೋಗದ ಸಾಧ್ಯತೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಕೆ ಮಾಡಿದ್ದಾರೆ.
ಈ ಹಿಂದೆ ಎಷ್ಟ ಹಣ ವಸೂಲಿ
ಭಾರತೀಯ ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಹಾರಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಿಗೆ ಜಾರಿ ನಿರ್ದೇಶನಾಲಯವು ವರ್ಗಾಯಿಸಿದೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಈ ವರ್ಗಾವಣೆ ಮಾಡಲಾಗಿದೆ. ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಸಾಲ ಪಡೆದು ವಂಚಿಸಲಾಗಿದೆ. ಮೂವರು ಉದ್ಯಮಿ ಮಾಡಿರುವ ವಂಚನೆಯಿಂದಾಗಿ ಬ್ಯಾಂಕ್ಗಳಿಗೆ 22,586 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮುಂಬೈನ ಪಿಎಂಎಲ್ಎ ಅಡಿ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಜಾರಿ ನಿರ್ದೇಶನಾಲಯವು ಅದಕ್ಕೆ ಲಗತ್ತಿಸಲಾದ ಷೇರುಗಳನ್ನು (6,600 ಕೋಟಿ ರೂ.) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟಕ್ಕೆ ವರ್ಗಾಯಿಸಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications