ಅಶೋಕ್ ಲೇಲ್ಯಾಂಡ್ ಸಿಇಒ, ಎಂಡಿ ಸ್ಥಾನಕ್ಕೆ ದಾಸರಿ ರಾಜೀನಾಮೆ
ನವದೆಹಲಿ, ನವೆಂಬರ್ 14: ಭಾರತದ ಎರಡನೆಯ ಅತಿ ದೊಡ್ಡ ಬೃಹತ್ ಟ್ರಕ್ ತಯಾರಕಾ ಸಂಸ್ಥೆ ಅಶೋಕ್ ಲೇಲ್ಯಾಂಡ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ವಿನೋದ್ ಕೆ. ದಾಸರಿ ರಾಜೀನಾಮೆ ನೀಡಿದ್ದಾರೆ.
ಇದರಿಂದ ಕಂಪೆನಿಯೊಂದಿಗಿನ 14 ವರ್ಷಗಳ ಸುದೀರ್ಘ ಸಂಬಂಧವನ್ನು ಅವರು ಕಡಿತಗೊಳಿಸಿದ್ದಾರೆ. ಅವರ ರಾಜೀನಾಮೆ 2019ರ ಮಾರ್ಚ್ 31ರಿಂದ ಜಾರಿಗೆ ಬರಲಿದೆ. ಹೀಗಾಗಿ ಅಲ್ಲಿಯವರೆಗೂ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಮಂಗಳವಾರ ನಡೆದ ಕಂಪೆನಿಯ ಮಂಡಳಿ ಸಭೆಯಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು.
ವೈಯಕ್ತಿಕ ಕಾರಣಗಳಿಂದಾಗಿ ಹುದ್ದೆ ತೊರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

'ನನ್ನ ರಾಜೀನಾಮೆ ನಿರ್ಧಾರವು ಸಂಪೂರ್ಣ ವೈಯಕ್ತಿಕ. ನನ್ನ ಕೆಲವು ವೈಯಕ್ತಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಬೇಕಿದೆ ಮತ್ತು ನನ್ನ ಕಲಿಕೆಯ ಪಯಣವನ್ನು ಮುಂದುವರಿಸಬೇಕಿದೆ. ಈ ಮಹಾನ್ ಕಂಪೆನಿಯಲ್ಲಿ 14 ವರ್ಷ ಕಳೆದಿದ್ದು ನಂಬಲಸಾಧ್ಯ ಅನುಭವ. ಇದರಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ.
ಆದರೆ, ಮಂಡಳಿ ಮತ್ತು ಬದ್ಧತೆಯುಳ್ಳ ತಂಡಗಳ ನಿರಂತರ ಬೆಂಬಲದಿಂದ ಕಂಪೆನಿ ಅನೇಕ ಅಡೆತಡೆಗಳನ್ನು ಎದುರಿಸಿ ಮಹತ್ವದ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇಂತಹ ಅದ್ಭುತ ಸಂಸ್ಥೆಯನ್ನು ನಡೆಸುವ ಅವಕಾಶ ಸಿಕ್ಕಿದ್ದು ನನಗೆ ದೊರೆತ ಮಹಾನ್ ಗೌರವ ಎಂದು ಭಾವಿಸುತ್ತೇನೆ ಎಂಬುದಾಗಿ ದಾಸರಿ ತಿಳಿಸಿದ್ದಾರೆ.
ಹಿಂದೂಜಾ ಸಮೂಹದ ಒಡೆತನದ ಸಂಸ್ಥೆಯು ದಾಸರಿ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದರೂ, ತಕ್ಷಣಕ್ಕೆ ಬೇರೆ ವ್ಯಕ್ತಿಯನ್ನು ನೇಮಿಸಲು ಸಾಧ್ಯವಾಗದ ಕಾರಣ, ಅವರನ್ನು ಮಾರ್ಚ್ ಅಂತ್ಯದವರೆಗೂ ಮುಂದುವರಿಯುವಂತೆ ಕೋರಲಾಗಿದೆ.
ಮಂಗಳವಾರವಷ್ಟೇ ಸಂಸ್ಥೆಯು ತನ್ನ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಶೇ 37ರಷ್ಟು ಲಾಭದ ಪ್ರಮಾಣವನ್ನು ಘೋಷಿಸಿದೆ.












Click it and Unblock the Notifications