2 ಗಂಟೆಗೆ ಬೀದರ್ಗೆ ನರೇಂದ್ರ ಮೋದಿ ಭೇಟಿ; ಡ್ರೋನ್ ಹಾರಾಟಕ್ಕೆ ನಿಷೇಧ
ಬೀದರ್, ಅಕ್ಟೋಬರ್ 03; ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂಬ ಕೂಗಿನ ನಡುವೆಯೇ ಮೋದಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಹೌದು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮೋದಿ ಬೀದರ್ಗೆ ಆಗಮಿಸಲಿದ್ದಾರೆ.
ಬೀದರ್ನ ವಾಯುಸೇನೆ ತರಬೇತಿ ಕೇಂದ್ರಕ್ಕೆ ಮಂಗಳವಾರ ಮಧ್ಯಾಹ್ನ 1.50ಕ್ಕೆ ವಿಶೇಷ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೀದರ್ ಜಿಲ್ಲಾಡಳಿತ ಡ್ರೋನ್ ಹಾರಾಟ ನಿಷೇಧಿಸಿದೆ.

ನರೇಂದ್ರ ಮೋದಿ ಭದ್ರತೆಯ ಶಿಷ್ಟಾಚಾರದಂತೆ ಬೀದರ್ನ ವಾಯುಸೇನೆ ತರಬೇತಿ ಕೇಂದ್ರ, ಬೀದರ್ ನಗರದ ಸುತ್ತಮುತ್ತಲಿನ 3 ಕಿ. ಮೀ. ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ 6 ರಿಂದ ರಾತ್ರಿ 10ರ ತನಕ ಜನರು ಡ್ರೋನ್ ಹಾರಾಟ ನಡೆಸುವುದನ್ನು ನಿರ್ಬಂಧಿಸಲಾಗಿದೆ.
ಜಿಲ್ಲಾಡಳಿತದ ಆದೇಶ; ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಬೀದರ್ ಜಿಲ್ಲಾಡಳಿತ ಕೈಗೊಂಡಿದೆ. ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಡ್ರೋನ್ ಹಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ನರೇಂದ್ರ ಮೋದಿ ತೆಲಂಗಾಣ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆದ್ದರಿಂದ ಮಧ್ಯಾಹ್ನ 1 ಗಂಟೆಗೆ ಛತ್ತೀಸ್ಗಢದ ಜಗದಾಲಪುರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬೀದರ್ಗೆ ಮಧ್ಯಾಹ್ನ 1.50ಕ್ಕೆ ಆಗಮಿಸಲಿದ್ದಾರೆ.
ಬೀದರ್ನಿಂದ ಸೇನಾ ಹೆಲಿಕಾಪ್ಟರ್ ಮೂಲಕ 2.15ಕ್ಕೆ ನಿಜಾಮಾಬಾದ್ಗೆ ಮೋದಿ ಪ್ರಯಾಣಿಸಲಿದ್ದಾರೆ. ಸಂಜೆ 5.30ಕ್ಕೆ ನಿಜಾಮಾಬಾದ್ನಿಂದ ಹೊರಟು 5.55ಕ್ಕೆ ಮತ್ತೆ ಬೀದರ್ ವಾಯುನೆಲೆಗೆ ಆಗಮಿಸಲಿದ್ದಾರೆ.
ಬೀದರ್ ವಾಯುನೆಲೆಯಿಂದ ಸಂಜೆ 5.55ಕ್ಕೆ ವಿಶೇಷ ವಿಮಾನದ ಮೂಲಕ ನರೇಂದ್ರ ಮೋದಿ ದೆಹಲಿಗೆ ತೆರಳಲಿದ್ದಾರೆ. ವಿಮಾನ ಏರುವ ಮೊದಲು ನರೇಂದ್ರ ಮೋದಿ ವಾಯುನೆಲೆಯಲ್ಲಿ ಸ್ಥಳೀಯರೊಂದಿಗೆ ಕೆಲವು ನಿಮಿಷ ಮಾತುಕತೆ ನಡೆಸಲಿದ್ದಾರೆ.
ನರೇಂದ್ರ ಮೋದಿ ತೆಲಂಗಾಣಕ್ಕೆ ಭೇಟಿ ನೀಡಲು ಬೀದರ್ನ ವಾಯುನೆಲೆಗೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಅವರ ಯಾವುದೇ ಕಾರ್ಯಕ್ರಮಗಳು ನಿಗದಿಯಾಗಿಲ್ಲ. ತೆಲಂಗಾಣ ರಾಜ್ಯದಲ್ಲಿ ಡಿಸೆಂಬರ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1ರ ಭಾನುವಾರ ತೆಲಂಗಾಣಕ್ಕೆ ಭೇಟಿ ನೀಡಿದ್ದರು. ಮಹಬೂಬ್ ನಗರದಲ್ಲಿ 13,500 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಕ್ಟೋಬರ್ 3ರಂದು ಪುನಃ ಮೋದಿ ತೆಲಂಗಾಣಕ್ಕೆ ಭೇಟಿ ನೀಡುತ್ತಿದ್ದಾರೆ.
ಮಹಬೂಬ್ ನಗರದಲ್ಲಿ ಮಾತನಾಡಿದ ನರೇಂದ್ರ ಮೋದಿ, 'ಈ ಪ್ರದೇಶದ ಜೀವನವನ್ನು ಪರಿವರ್ತಿಸುವ ಹಲವು ರಸ್ತೆ ಸಂಪರ್ಕ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ನಾಗಪುರ-ವಿಜಯವಾಡ ಆರ್ಥಿಕ ಕಾರಿಡಾರ್ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಾರಿಗೆ ಮತ್ತು ವ್ಯಾಪಾರವನ್ನು ಸುಗಮಗೊಳಿಸುತ್ತದೆ" ಎಂದರು.
"ಕಾರಿಡಾರ್ನಲ್ಲಿ 8 ವಿಶೇಷ ಆರ್ಥಿಕ ವಲಯ, 5 ಮೆಗಾ ಫುಡ್ ಪಾರ್ಕ್, 4 ಮೀನುಗಾರಿಕೆ ಸಮುದ್ರಾಹಾರ ಕ್ಲಸ್ಟರ್ಗಳು, 3 ಫಾರ್ಮ್ ಮತ್ತು ಮೆಡಿಕಲ್ ಕ್ಲಸ್ಟರ್ಗಳು ಮತ್ತು 1 ಜವಳಿ ಕ್ಲಸ್ಟರ್ ಸೇರಿದಂತೆ ಪ್ರಮುಖ ಆರ್ಥಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಇದು ಹನಮಕೊಂಡ, ಮಹಬೂಬಾಬಾದ್, ವಾರಂಗಲ್ ಮತ್ತು ಖಮ್ಮಂ ಜಿಲ್ಲೆಗಳಿಗೆ ಸಹಾಯಕವಾಗಿದೆ" ಎಂದು ಮೋದಿ ತಿಳಿಸಿದರು.
ನರೇಂದ್ರ ಮೋದಿ ಭಾನುವಾರ ತೆಲಂಗಾಣದ ಅರಿಶಿನ ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ರಚಿಸುತ್ತದೆ ಎಂದು ಘೋಷಣೆ ಮಾಡಿದರು. ರಾಷ್ಟ್ರೀಯ ಅರಿಶಿನ ಮಂಡಳಿಯು ಪೂರೈಕೆ ಸರಪಳಿಯ ಮೌಲ್ಯವರ್ಧನೆಯತ್ತ ಗಮನಹರಿಸುತ್ತದೆ ಮತ್ತು ರೈತರಿಗೆ ಮೂಲಸೌಕರ್ಯ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದರು. ರಾಷ್ಟ್ರೀಯ ಅರಿಶಿನ ಮಂಡಳಿಯ ರಚನೆಗಾಗಿ ತೆಲಂಗಾಣ ಮತ್ತು ಇಡೀ ರಾಷ್ಟ್ರದ ಎಲ್ಲಾ ಅರಿಶಿನ ಬೆಳೆಯುವ ರೈತರಿಗೆ ಪ್ರಧಾನಿಯವರು ಅಭಿನಂದನೆಗಳನ್ನು ತಿಳಿಸಿದರು.












Click it and Unblock the Notifications