ಕರ್ನಾಟಕ ಚುನಾವಣೆ; ಮೋದಿ ನೀಡಿದರು ಘೋಷವಾಕ್ಯ!
ಬೀದರ್, ಏಪ್ರಿಲ್ 29; ಭಾರತದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಪ್ರಚಾರ ಕಾರ್ಯವನ್ನು ಬೀದರ್ನಿಂದ ಆರಂಭಿಸಿದ್ದಾರೆ. ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮೋದಿ ಬಿಜೆಪಿ ಚುನಾವಣಾ ಘೋಷವಾಕ್ಯವನ್ನು ನೀಡಿದರು.
ಶನಿವಾರ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಬಿಜೆಪಿಯ ಬೃಹತ್ ಸಮಾವೇಶ ನಡೆಯಿತು. ನರೇಂದ್ರ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಸಮಾವೇಶದಲ್ಲಿಯೇ ಈ ಬಾರಿಯ ಚುನಾವಣೆಗೆ ಬಿಜೆಪಿ ಘೋಷವಾಕ್ಯವನ್ನು ಮೋದಿ ಘೋಷಣೆ ಮಾಡಿದರು.

ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಈ ಬಾರಿಯ ನಿರ್ಧಾರ ಪೂರ್ಣ ಬಹುಮತದ ಬಿಜೆಪಿ ಸರ್ಕಾರ' ಎಂಬ ಘೋಷವಾಕ್ಯವನ್ನು ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ ಪಕ್ಷ ಎಂದಿಗೂ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿಲ್ಲ. ಆದ್ದರಿಂದ ಈ ಬಾರಿ ಬಹುಮತದ ಘೋಷಣೆ ಮಾಡಲಾಗಿದೆ.
ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದು, "ಮಹಾನ್ ಪುರುಷರನ್ನು ಅವಮಾನಿಸುವುದು ಕಾಂಗ್ರೆಸ್ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ದನನ ಸೇವೆಯಲ್ಲಿ ನಿರತನಾಗಿರುತ್ತೇನೆ. ನಿಮ್ಮ ಆಶೀರ್ವಾದ ಇರುವುದರಿಂದ ನಾನು ಹಗಲು ರಾತ್ರಿ ಕೆಲಸ ಮಾಡುತ್ತಿರುವೆ. ನಿಮ್ಮ ಆಶೀರ್ವಾದದಿಂದ ಕರ್ನಾಟಕದ ಸೇವೆ ಮಾಡಲು ಅವಕಾಶ ದೊರಕಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು" ಎಂದು ಕರೆ ನೀಡಿದರು.

ಮೈತ್ರಿ ಸರಕಾರ ಬೇಡ; ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಕರ್ನಾಟಕ ಮಾತ್ರ. ಆದರೆ ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಇದುವರೆಗೂ ಅಧಿಕಾರ ಪಡೆದಿಲ್ಲ. ಮೂರು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಸಹ ಸ್ಪಷ್ಟ ಬಹುಮತ ಪಡೆದಿಲ್ಲ. ಜೆಡಿಎಸ್ ಜೊತೆ ಸೇರಿ ಒಮ್ಮೆ ಮೈತ್ರಿ ಸರ್ಕಾರ ಮಾಡಿತು. ಬಳಿಕ ಎರಡು ಚುನಾವಣೆಯಲ್ಲಿ ಬಹುಮತದ ಕೊರತೆ ಎದುರಿಸಿ ಆಪರೇಷನ್ ಕಮಲ ಮಾಡಿಕೊಂಡು ಸರ್ಕಾರ ರಚನೆ ಮಾಡಿತು.
ಈ ಬಾರಿಯ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂಬುದು ಪಕ್ಷದ ಗುರಿಯಾಗಿದೆ. ಅದಕ್ಕಾಗಿ ಚುನಾಣಾ ತಂತ್ರವನ್ನು ಬಿಜೆಪಿ ರೂಪಿಸಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ರಾಜ್ಯದಲ್ಲಿ ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ, "ಈ ಹಿಂದೆ ಜೆಡಿಎಸ್ ನಾಯಕರು ತಾವು ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿ ಇರುವುದಾಗಿ ಬಹಿರಂಗವಾಗಿ ಹೇಳಿದ್ದು ನಿಮಗೆ ನೆನಪಿರಬಹುದು. ಈ ಪಕ್ಷಗಳು ಜನರಿಗೆ ಉತ್ತರದಾಯಿತ್ವ ಹೊಂದಿಲ್ಲ, ಬದಲಾಗಿ ಕುರ್ಚಿಗಾಗಿ ಎಷ್ಟು ತಳಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ" ಎಂದರು.
"ಕರ್ನಾಟಕ ರಾಜ್ಯವನ್ನು ದೇಶದಲ್ಲೇ ನಂಬರ್ ಒನ್ ಮಾಡುವ ಚುನಾವಣೆಯಿದು. ಹಾಗಾಗಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದದ್ದು ಅತ್ಯಗತ್ಯ. ಎಲ್ಲರೂ ನೆನಪಿಡಿ, ಇದನ್ನು ಮನೆ ಮನೆಗೆ ನನ್ನ ನಮಸ್ಕಾರದೊಂದಿಗೆ ತಲುಪಿಸಿ, ಈ ಬಾರಿಯ ನಿರ್ಧಾರ ಪೂರ್ಣ ಬಹುಮತದ ಬಿಜೆಪಿ ಸರ್ಕಾರ" ಎಂದು ನರೇಂದ್ರ ಮೋದಿ ಹೇಳಿದರು.
ಸಮಾವೇಶದಲ್ಲಿ ನರೇಂದ್ರ ಮೋದಿ, "ಈ ವಿಧಾನಸಭೆ ಚುನಾವಣೆಗೆ ನನ್ನ ಯಾತ್ರೆ ಬೀದರ್ನಿಂದ ಆರಂಭವಾಗುತ್ತಿರುವುದು ನನ್ನ ಭಾಗ್ಯ. ಬಸವೇಶ್ವರರ ಅನುಗ್ರಹ ನಮಗೆ ಶಕ್ತಿ ತುಂಬುತ್ತದೆ. ಕರ್ನಾಟಕದ ಕಿರೀಟ ಬೀದರ್ನ ಆಶೀರ್ವಾದ ನನಗೆ ಸಿಕ್ಕಿದೆ. ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಂದು ಇಡೀ ದೇಶಕ್ಕೆ ಸಂದೇಶ ನೀಡಿದ್ದೀರಿ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ" ಎಂದು ಮೋದಿ ಬಹುಮತ ಎಂಬ ಪದವನ್ನು ಒತ್ತಿ ಒತ್ತಿ ಹೇಳಿದರು.












Click it and Unblock the Notifications