ಹಿಂದಿ ಬರುವುದಿಲ್ಲ ಕ್ಷಮೆಯಾಚಿಸುತ್ತೇನೆ: ನೀವ್ಯಾಕೆ ಕ್ಷಮೆ ಕೇಳಬೇಕು ಕುಮಾರಣ್ಣ!
ಬೀದರ್, ಏಪ್ರಿಲ್ 11: ಬಸವಕಲ್ಯಾಣ ಉಪ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮತದಾರರ ಕ್ಷಮೆಯಾಚಿಸಿದ್ದಾರೆ. ಕಾರಣ, ಹಿಂದಿ ಸರಿಯಾಗಿ ಬರುವುದಿಲ್ಲ ಎಂದು.
ಬಸವಕಲ್ಯಾಣ ಪ್ರದೇಶವು ಕಲ್ಯಾಣ ಕರ್ನಾಟಕದ ಭಾಗವಾಗಿದ್ದರೂ, ಕನ್ನಡ ಅಧಿಕೃತ ಭಾಷೆಯಾಗಿದ್ದರೂ, ಹಿಂದಿ ಬರುವುದಿಲ್ಲ ಕ್ಷಮೆಯಿರಲಿ ಎನ್ನುವ ಕುಮಾರಸ್ವಾಮಿಯವರ ಭಾಷಣ ಆಶ್ಚರ್ಯವನ್ನು ಉಂಟು ಮಾಡಿದೆ.
"ವೇದಿಕೆಯ ಮೇಲೆ ಇರುವವರೆಲ್ಲರೂ ಒಳ್ಳೆಯ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ. ನನಗೆ ಹಿಂದಿ ಭಾಷೆಯಲ್ಲಿ ಮಾತನಾಡುವುದು ಸ್ವಲ್ಪ ಕಷ್ಟಕರ. ಸ್ವಲ್ಪ ಸ್ವಲ್ಪ ಹಿಂದಿ ಬರುತ್ತದೆ. ಹೀಗಾಗಿ ನಿಮ್ಮೆಲ್ಲರ ಕ್ಷಮೆ ಕೋರಿ, ನಿಮ್ಮ ಅನುಮತಿಯ ಮೇರೆಗೆ ನಾನು ಕನ್ನಡದಲ್ಲಿ ಮಾತನಾಡಲು ಬಯಸುತ್ತೇನೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಿಮ್ಮೆಲ್ಲರ ಕ್ಷಮೆಯಾಚಿಸಿ, ನಿಮ್ಮ ಅನುಮತಿಯೊಂದಿಗೆ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಹಿಂದಿಯಲ್ಲೇ ಹೇಳಿದ ಕುಮಾರಸ್ವಾಮಿಯವರು, ಪಕ್ಷದ ಅಭ್ಯರ್ಥಿ ಸೈಯದ್ ಯಾಸ್ರಬ್ ಖಾದ್ರಿ ಪರ ಮತಯಾಚಿಸಿದರು.
"ಈ ಕ್ಷೇತ್ರದಲ್ಲಿ ನಮ್ಮ ಅಭಿಮಾನಿಗಳ ಪಡೆಯಿದೆ, ಮೊದಲಿಂದಲೂ ನಮ್ಮ ಪಕ್ಷಕ್ಕೆ ಇಲ್ಲಿ ಉತ್ತಮ ಬೆಂಬಲವಿದೆ. ಇಲ್ಲಿ ಅಭ್ಯರ್ಥಿ ಯಾರೇ ಇರಲಿ, ಪಕ್ಷದ ಮೇಲೆ ಅಭಿಮಾನ ಇಟ್ಟಿರುವಂತಹ ಸಾವಿರಾರು ಅಭಿಮಾನಿಗಳಿದ್ದಾರೆ"ಎಂದು ಕುಮಾರಸ್ವಾಮಿ ಹೇಳಿದರು.
"ಇಂತಹ ಸಾವಿರಾರು ಅಭಿಮಾನಿಗಳ ಬೆಂಬಲ, ಆಶೀರ್ವಾದದಿಂದಾಗಿ ನಮ್ಮ ಅಭ್ಯರ್ಥಿ ಇಲ್ಲಿ ಗೆಲುವುದರಲ್ಲಿ ಯಾವುದೇ ಸಂಶಯವಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಬಸವಣ್ಣನವರ ಕಾವ್ಯದಂತೆ, ಬಸವಕಲ್ಯಾಣದ ಮತದಾರ ಹೊಸ ಕ್ರಾಂತಿಗೆ ಮುನ್ನುಡಿ ಹಾಡಲಿದ್ದಾನೆ"ಎನ್ನುವ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications