ಬೀದರ್ : ಸಿಮೆಂಟ್ ಕಾರ್ಖಾನೆ ಕ್ರೇನ್ ಕುಸಿತ, 6 ಸಾವು
ಬೀದರ್, ಆಗಸ್ಟ್ 03 : ಸಿಮೆಂಟ್ ಕಾರ್ಖನೆಯಲ್ಲಿ ಕ್ರೇನ್ ಕುಸಿದು 6 ಕಾರ್ಮಿಕರು ಮೃತಪಟ್ಟ ಘಟನೆ ಬೀದರ್ನಲ್ಲಿ ನಡೆದಿದೆ. ಘಟನೆಯಲ್ಲಿ ಹಲವಾರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೇಡಂ ತಾಲೂಕಿನ ಕೋಡ್ಲಾ ಬಳಿ ಇರುವ ಶ್ರೀ ಸಿಮೆಂಟ್ ಕಾರ್ಖನೆಯಲ್ಲಿ ಗುರುವಾರ ಸಂಜೆ ಈ ದುರ್ಘಟನೆ ನಡೆದಿದೆ. ಕಾರ್ಮಿಕರು ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದರು. ಆಗ ಭಾರೀ ಬಿರುಗಾಳಿ ಬೀಸಿದ್ದು, ಕ್ರೇನ್ ಕುಸಿದು ಬಿದ್ದು ಈ ಅವಘಡ ನಡೆದಿದೆ.
ಮೃತಪಟ್ಟವರನ್ನು ಬಿಹಾರ ಮೂಲದ ತಬಾರಕ್ ಅಲಿ, ಪಿ.ಟಿ.ಕಾಂಚನ್, ಸುಧಾಕರ್, ಜೂಬಿರ್, ನಿತಿನ್ ಮತ್ತು ಅಜಯ್ ಎಂದು ಗುರುತಿಸಲಾಗಿದೆ. ಈ ಅಪಘಡದಲ್ಲಿ ಗಾಯಗೊಂಡ ಕೆಲವು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಬಿರುಗಾಳಿಯಿಂದಾಗಿ ಕ್ರೇನ್ ಬಿದ್ದಾಗ ತಬಾರಕ್ ಅದರ ಅಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟರು. ಜುಬಿರ್, ಸುಧಾಕರ್, ಪಿ.ಟಿ.ಕಾಂಚನ್ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಶಹಜಾದ್ ಎಂಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ಯುನೈಡೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ರೇನ್ ಅಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 12 ಗಂಟೆ ವೇಳೆಗೆ ಎಲ್ಲರೂ ಮೃತಪಟ್ಟಿದ್ದಾರೆ.
ಸೇಡಂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.












Click it and Unblock the Notifications