ನನ್ನ ನಾಲ್ಕು ಪ್ರಶ್ನೆಗೆ ಮೋದಿ ಈವರೆಗೆ ಉತ್ತರಿಸಿಲ್ಲ: ರಾಹುಲ್
Recommended Video
ಧಾರ್ (ಮಧ್ಯಪ್ರದೇಶ), ಮೇ 11: ಮಹಾತ್ಮಾ ಗಾಂಧಿ, ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಎಲ್ಲರ ಬಗ್ಗೆಯೂ ಮೋದಿ ಮಾತನಾಡಿದರು, ಆದರೆ ರಫೆಲ್ ಬಗ್ಗೆ ನಾನು ಕೇಳಿದ ನಾಲ್ಕು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಮಧ್ಯ ಪ್ರದೇಶದ ಧಾರ್ನಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಅವರ ವಿರುದ್ಧ ವ್ಯಂಗ್ಯದ ಮೊನಚನ್ನು ಚುಚ್ಚಿದರು.
ಸಂಸತ್ನಲ್ಲಿ ಮೋದಿ ಅವರು ಒಂದೂವರೆ ಗಂಟೆ ಭಾಷಣ ಮಾಡಿದರು ಆದರೆ ಒಮ್ಮೆಯೂ ಸಹ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಸಹ ಅವರು ತೋರಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

'ಮೋದಿ-ಅನಿಲ್ ಅಂಬಾನಿ ಎಂದು ಗೂಗಲ್ನಲ್ಲಿ ಟೈಪ್ ಮಾಡಿದರೆ ಇಬ್ಬರೂ ತಬ್ಬಿಕೊಂಡಿರುವ ಚಿತ್ರ ಬರುತ್ತದೆ ಎಂದು ಹೇಳಿದ ರಾಹುಲ್ ಗಾಂಧಿ, ಪಕ್ಕದಲ್ಲೇ ನಿಂತಿದ್ದ ಕಮಲ್ನಾಥ್ ಅವರನ್ನು ಎರಡು ಬಾರಿ ತಬ್ಬಿಕೊಂಡು ನೋಡಿ, ಮೋದಿ-ಅಂಬಾನಿ ಹೀಗೆಯೇ ತಬ್ಬಕೊಂಡಿದ್ದಾರೆ ಎಂದು ಪ್ರಾತ್ಯಕ್ಷಿತೆಯನ್ನೂ ತೋರಿಸಿಬಿಟ್ಟರು.
ಚೋಕ್ಸಿ ಜೊತೆ ಮೋದಿ ಫೋಟೊ ತೆಗೆಸಿಕೊಳ್ಳುತ್ತಾರೆ, ಅಂಬಾನಿಗೆ ಸಹಾಯ ಮಾಡುತ್ತಾರೆ, ಬಡವರ ಹಣವನ್ನು ಅವರ ಖಾತೆಗೆ ಹಾಕುತ್ತಾರೆ, ಆದರೆ ದೇಶದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವುದನ್ನು ಮಾತ್ರ ಅವರು ಮರೆತಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಅರುಣ್ ಜೇಟ್ಲಿ ಬಗ್ಗೆಯೂ ಮಾತನಾಡಿದ ರಾಹುಲ್, ವಿಜಯ್ ಮಲ್ಯ ದೇಶ ಬಿಟ್ಟು ಹೋಗುವ ಮೊದಲು ಹಣಕಾಸು ಮಂತ್ರಿ ಅರುಣ್ ಜೇಟ್ಲಿಯನ್ನು ಭೇಟಿಯಾಗಿದ್ದರು, ಮಲ್ಯ ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಹಣಕಾಸು ಮಂತ್ರಿಯನ್ನು ಭೇಟಿಯಾಗಿದ್ದರು, ಆತನನ್ನು ಹಿಡಿಯುವ ಬದಲು ನಮ್ಮ ಹಣಕಾಸು ಮಂತ್ರಿ ಅವರಿಗೆ ಟಾಟಾ ಹೇಳಿ ಬೀಳ್ಕೊಟ್ಟರು ಎಂದು ರಾಹುಲ್ ವ್ಯಂಗ್ಯ ಮಾಡಿದರು.
ನೀರವ್ ಮೋದಿ ಖಾತೆಯಿಂದ ಅರುಣ್ ಜೇಟ್ಲಿ ಮಗಳ ಖಾತೆಗೆ ಹಣ ವರ್ಗಾವಣೆ ಆಗಿದೆ, ಇದೆಲ್ಲವೂ ಏನು, ಇವರೆಲ್ಲಾ ಸೇರಿ ಬಡಜನರ ಹಣವನ್ನು ಲೂಟಿ ಮಾಡಿದ್ದಾರೆ, ಇದನ್ನೆಲ್ಲಾ ಸುಮ್ಮನೆ ಬಿಡುವುದಿಲ್ಲ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ಜನರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದ ಮೋದಿ ಅವರು, ಆಡಿದ ಮಾತನ್ನು ಮರೆತಿದ್ದಾರೆ, ಆದರೆ ನಾವು ಮರೆಯುವುದಿಲ್ಲ, ನ್ಯಾಯ್ ಯೋಜನೆ ಮುಖಾಂತರ ಪ್ರತಿ ಬಡಕುಟುಂಬಕ್ಕೆ ವರ್ಷಕ್ಕೆ 72 ಸಾವಿರ ಹಣವನ್ನು ಖಾತೆಗೆ ಹಾಕುತ್ತೇವೆ ಎಂದು ಅವರು ಹೇಳಿದರು.












Click it and Unblock the Notifications